X
ಹೋಮ್ ಚಲನಚಿತ್ರಗಳ ಒಳನೋಟ

ಅದ್ಭುತ ನಟನೆ ಮೂಲಕ ಸಿನಿರಸಿಕರ ಮನೆಗೆದ್ದ ರಂಗಭೂಮಿ ಕಲಾವಿದರಿವರು!

Author Sowmya Bairappa | Published: Friday, June 21, 2024, 04:47 PM [IST]

ಮೊದಲೆಲ್ಲಾ ಸಿನಿಮಾರಂಗಕ್ಕೆ ಬರುವವರಿಗೆ ರಂಗಭೂಮಿಯೇ ಪ್ರಾಥಮಿಕ ಶಾಲೆಯಾಗಿತ್ತು. ಅಲ್ಲಿ ಅಭಿನಯ ತರಬೇತಿ ಪಡೆದ ಅನೇಕ ಕಲಾವಿದರು ಆನಂತರ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದರು. ಆದ್ರೀಗ ಬಹುತೇಕರು ನೇರವಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಡುವುದನ್ನು ಕಾಣಬಹುದು. ಆದರೆ, ಈ ಹಿಂದೆ ರಂಗಭೂಮಿಯಿಂದ ಚಂದನವನಕ್ಕೆ ಕಾಲಿಟ್ಟ ಕಲಾವಿದರು ತಮ್ಮ ಅದ್ಭುತ ನಟನೆ ಮೂಲಕ ಸಿನಿರಸಿಕರ ಮನೆಗೆದ್ದಿದ್ದಾರೆ. ಅಂತಹ ಕಲಾವಿದರ ಪಟ್ಟಿ ಇಲ್ಲಿದೆ.


cover image
ರಂಗಾಯಣ ರಘು

ಹೆಸರಿನಲ್ಲೇ ರಂಗಾಯಣ ಇರುವುದರಿಂದ ರಂಗಾಯಣ ರಘು ಅವರನ್ನು ರಂಗಭೂಮಿ ಕಲಾವಿದ ಅಂತ ಬಹುಬೇಗ ಗುರುತಿಸಬಹುದು. ಸ್ಯಾಂಡಲ್‌ವುಡ್ ಪ್ರವೇಶಿಸುವ ಮುನ್ನ ಇವರು, ಪ್ರತಿಶೋಧ, ಕಿಂದರಿ ಜೋಗಿ, ರೋಡ್, ಚಕಾವೋ, ಪುಗಳಿಂದಿ ಪ್ರಹಸನ ಸೇರಿದಂತೆ ಹಲವು ನಾಟಕಗಳಿಂದ ಹೆಸರು ಮಾಡಿದ್ರು. ಸದ್ಯ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ಫೋಷಕ ನಟರಾಗಿ ಗುರುತಿಸಿಕೊಂಡಿರುವ ಇವರು, ತಮ್ಮ ಹಾಸ್ಯ ನಟನೆ ಮೂಲಕ ಕಚಗುಳಿ ಇಡುವುದರ ಜೊತೆಗೆ ಹಲವು ಭಾವಪೂರ್ಣ ಪಾತ್ರಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ರಂಗಾಯಣ ರಘು ಅವರು ನಟಿಸುವ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ತೂಕವಿರುತ್ತೆ. ಕೆಲ ದಿನಗಳ ಹಿಂದೆ 'ಶಾಖಾಹಾರಿ' ಚಿತ್ರದಲ್ಲಿ ನಾಯಕನಾಗಿ ಅದ್ಭುತವಾಗಿ ನಟಿಸಿದ್ದರು.

ಅಚ್ಯುತ್ ಕುಮಾರ್

ಕನ್ನಡ ಚಿತ್ರರಂಗದಲ್ಲಿ ತಮ್ಮ ಅದ್ಭುತ ನಟನೆಯಿಂದ ಗುರುತು ಮೂಡಿಸಿರುವ ಅಚ್ಯುತ್ ಕುಮಾರ್ ಅಪ್ಪಟ ನೀನಾಸಂ ಪ್ರತಿಭೆ. ರಂಗಭೂಮಿ ಸುಮಾರು ಏಳು ವರ್ಷಗಳ ಕಾಲ ತೊಡಗಿಸಿಕೊಂಡಿದ್ದ ಇವರು, ಸಂಗ್ಯಾ ಬಾಳ್ಯಾ, ಸಹ್ಯಾದ್ರಿ ಕಾಂಡ, ಗುಣಮುಖ ಹೀಗೆ ಹಲವು ನಾಟಕಗಳ ಮೂಲಕ ಖ್ಯಾತಿ ಗಳಿಸಿದ್ದರು. ಮೊಗ್ಗಿನ ಮನಸ್ಸು, ಆ ದಿನಗಳು ಚಿತ್ರಗಳ ಮೂಲಕ ಸಿನಿ ಪಯಣ ಆರಂಭಿಸಿದ ಇವರು, ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುತ್ತಾರೆ. ಚಂದನವನದಲ್ಲಿ ಅಪ್ಪ, ಅಣ್ಣ, ಊರಿನ ನಾಯಕ, ಪೊಲೀಸ್ ಅಧಿಕಾರಿ ಹೀಗೆ ಹಲವು ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಇವರು, ತಮಿಳು, ತೆಲುಗು ಚಿತ್ರರಂಗದಲ್ಲೂ ಸ್ಟಾರ್ ನಟರ ಜೊತೆ ಅಭಿನಯಿಸುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಅವರನ್ನು ಮುಖ್ಯ ಪಾತ್ರಧಾರಿನ್ನಾಗಿಸಿ ಈಗಾಗಲೇ ಹಲವು ಸಿನಿಮಾಗಳು ಬಂದಿವೆ.

ಉಮಾಶ್ರಿ

ಸುಮಾರು ಮೂರು ದಶಕಗಳ ಕಾಲ ನಾಟಕರಂಗದಲ್ಲಿ ಗುರುತಿಸಿಕೊಂಡಿದ್ದವರು ಉಮಾಶ್ರೀ. ವಿಶೇಷವಾಗಿ ಉತ್ತರ ಕರ್ನಾಟಕದ ನಾಟಕಗಳ ಮೂಲಕವೇ ಇವರು ಹೆಚ್ಚು ಜನಪ್ರಿಯವಾಗಿದ್ದು. ಖಾನಾವಳಿ ಚೆನ್ನಿ, ಪೊಲೀಸನ ಹೆಂಡತಿ ಇವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟವು. ರಂಗಭೂಮಿ ತಂಡಗಳ ಆಶ್ರಯದಲ್ಲಿ ಇವರು ಅಭಿನಯಿಸಿದ್ದ 'ಒಡಲಾಳ' ಹೆಚ್ಚು ಜನರನ್ನು ಆಕರ್ಷಿಸಿತ್ತು. ಇದರಲ್ಲಿ ಸಾಕವ್ವನ ಪಾತ್ರ ಪ್ರಶಂಸೆ ಪಡೆದುಕೊಂಡಿತ್ತು. ಕಾಶಿನಾಥ್ ಅವರ 'ಅನುಭವ' ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ಇವರು, ಕನ್ನಡ ಚಿತ್ರರಸಿಕರ ಮನಸ್ಸಿನಲ್ಲಿ ತಮ್ಮ ಅದ್ಬುತ ನಟನೆಯ ಮೂಲಕ ವಿಶೇಷ ಸ್ಥಾನ ಪಡೆದಿದ್ದಾರೆ. ಹಾಸ್ಯ ನಟನೆಯಿಂದ ಹಿಡಿದು ಆಳವಾಗಿ ಪ್ರಭಾವ ಬೀರುವ ಪಾತ್ರಗಳಲ್ಲಿ ಲೀಲಾಜಾಲವಾಗಿ ಅಭಿನಯಿಸುವ ಮೂಲಕ ಚಂದನವನದಲ್ಲಿ ತಮ್ಮದೇಯಾದ ಛಾಫು ಮೂಡಿಸಿದ್ದಾರೆ.

ಗೋಪಾಲ್ ಕೃಷ್ಣ ದೇಶಪಾಂಡೆ

ಮೂಲತಃ ಉತ್ತರ ಕರ್ನಾಟಕದವರಾದ ಗೋಪಾಲಕೃಷ್ಣ ದೇಶಪಾಂಡೆ ಕೂಡ ನೀನಾಸಂ ರಂಗಭೂಮಿ ಕಲಾವಿದ. ಇವರ ತಂದೆ ನಾಟಕಗಳನ್ನು ಮಾಡುತ್ತಿದ್ದರೂ, ಬಾಲ್ಯದಲ್ಲಿ ಇವರಿಗೆ ಇದರ ಬಗ್ಗೆ ಆಸಕ್ತಿ ಇರಲಿಲ್ಲ.  ಪಿಯುಸಿ ವೇಳೆ ಇವರ ತಂದೆ ನಿಧನರಾಗಿದ್ದು, ಈ ವೇಳೆ ಬಿ.ಎಸ್ಸಿ ಮಾಡಲು ಮುಂದಾಗುವ ಇವರಿಗೆ ನೀನಾಸಂ ನಂಟು ಬೆಳೆಯುತ್ತದೆ. ಹೀಗೆ ರಂಗಭೂಮಿ ಸೇರಿಕೊಂಡ ಇವರು, ಕಿರುತೆರೆಯಲ್ಲಿ `ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿನ ಗೌರಿ ತಂದೆ ಪಾತ್ರದಿಂದ ಮನೆಮಾತಾದರು. ಬಳಿಕ ಚಂದನವನ ಪ್ರವೇಶಿಸದ ಇವರು,
ಸದ್ಯ ಕನ್ನಡದ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟರಾಗಿ ಗುರುತಿಸಿಕೊಂಡಿದ್ದಾರೆ. ಗರುಡ ಗಮನ ವೃಷಭ ವಾಹನ, ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಬಿ, ಟೋಬಿ ಹಾಗೂ ಶಾಖಾಹಾರಿ ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಇವರು, ತಮ್ಮ ನಟನೆ ಮೂಲಕ ಜನರ ಮನಸ್ಸಿನಲ್ಲಿ ಗಟ್ಟಿ ಸ್ಥಾನ ಪಡೆದುಕೊಂಡಿದ್ದಾರೆ. ಕಂಟೆಂಟ್ ಇರುವ ಸಿನಿಮಗಳಿಗೆ ಇವರು ಇರಲೇಬೇಕು ಎಂಬ ಬೇಡಿಕೆಯೂ ಸೃಷ್ಟಿಯಾಗಿದೆ.

ಮಂಡ್ಯ ರಮೇಶ್

ಮಂಡ್ಯ ರಮೇಶ್ ಅವರು ರಂಗಭೂಮಿಯನ್ನೇ ಉಸಿರಾಗಿಸಿಕೊಂಡವರು. ಇವರ ನಡನೆಯ ಮಿಸ್ ಸದಾರಮೆ, ಕುಸುಮಾ ಬಾಲೆ, ಮ್ಯಾಕ್ಬೆಥ್, ಅಲಿಬಾಬಾ, ಸಾಂಬಶಿವ ನಾಟಕಗಳು ಹೆಚ್ಚು ಜನಪ್ರಿಯ. ಇಲ್ಲಿ ಮಾತ್ರವಲ್ಲದೇ ವಿದೇಶಗಳಿಗೂ ಹೋಗಿ ತಮ್ಮ ರಂಗ ಪ್ರತಿಭೆಯನ್ನು ತೋರಿದ್ದಾರೆ. ಮೈಸೂರಿನಲ್ಲಿ ತಮ್ಮದೇ `ನಟನಾ' ಎಂಬ ಕೇಂದ್ರ ಆರಂಭಿಸಿ, ಕರ್ನಾಟಕದಾದ್ಯಂತ ನಟನೆಯ ಮೇಲೆ ಹಲವು ವರ್ಕಶಾಪ್ ಮಾಡಿದ್ದಾರೆ. ಆ ಮೂಲಕ ರಂಗಭೂಮಿಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಜನುಮದ ಜೋಡಿ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ ಇವರು, ೧೫೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ.

ನೀನಾಸಂ ಅಶ್ವಥ್

ನೋಡಿದ ಕೂಡಲೇ ರಂಗಭೂಮಿ ನಟ ಅಂತ ಊಹಿಸಿಬಿಡುವಷ್ಟು ನಟನೆಯಲ್ಲಿ ಪ್ರಬುದ್ಧರು ನೀನಾಸಂ ಅಶ್ವತ್ಥ್. ನೀನಾಸಂ ವಿದ್ಯಾರ್ಥಿಯಾದ ಇವರು, ಗುಣಮುಖ, ಕದಡಿದ ನೀರು, ಅಹಲ್ಯಾ ಹಾಗೂ ಊರುಭಂಗ ನಾಟಕಗಳ ಮೂಲಕ ಗಮನ ಸೆಳೆದರು. ಸದ್ಯ ಕನ್ನಡ ಚಿತ್ರರಂಗದಲ್ಲಿ ಖಳನಾಯಕ ಹಾಗೂ ಫೋಷಕ ಪಾತ್ರಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ.

ಸತೀಶ್ ನೀನಾಸಂ

ನೀನಾಸಂನಿಂದ ಬಂದು ಗಮನ ಸೆಳೆದ ನಟರಲ್ಲಿ ಸತೀಶ್ ನೀನಾಸಂ ಕೂಡ ಒಬ್ಬರು. ಚಂದ್ರಗುಪ್ತ ನಾಟಕದಲ್ಲಿ ಚಾಣಕ್ಯನ ಪಾತ್ರ ಇವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತು. ಮೊದಲಿನಿಂದಲೂ ಸಿನಿಮಾರಂಗದಲ್ಲಿ ಆಸಕ್ತಿಯಿದ್ದ ಇವರು, ರಂಗಭೂಮಿಯಲ್ಲಿರುವಾಗಲೇ ಪರಮಪದ, ಸಿಲ್ಲಿಲಲ್ಲಿ ಧಾರಾವಾಹಿಗಳಲ್ಲಿ ನಟಿಸಿದರು. ನಂತ  ಲೈಫ್ ಇಷ್ಟೇನೇ, ಪಂಚರಂಗಿ, ಅಣ್ಣಾಬಾಂಡ್, ಎನೋ ಒಂಥರಾ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ಅಭಿನಯಿಸಿದರು. ೨೦೧೩ರಲ್ಲಿ ಲೂಸಿಯಾ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಕ್ಕೆ ಎಂಟ್ರಿಕೊಟ್ಟ ಇವರು, ಅಭಿನಯ ಚತುರ ಎಂದೇ ಖ್ಯಾತಿಗಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+