ಕ್ರಾಂತಿ ಸಿನಿಮಾ ಸಾಂಗ್ ರಿಲೀಸ್ ವೇಳೆ ನಟ ದರ್ಶನ್ ಮೇಲೆ ಕಿಡಿಗೇಡಿ ಒಬ್ಬ ಚಪ್ಪಲಿ ಎಸೆದ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಚಿತ್ರರಂಗದ ತಾರೆಯರು, ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರರಂಗದ ದಿಗ್ಗಜ ನಟರಾದ ಶಿವರಾಜ್ಕುಮಾರ್, ಜಗ್ಗೇಶ್, ಸುದೀಪ್ ಸೇರಿದಂತೆ ಬಹುತೇಕ ಎಲ್ಲಾ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ದರ್ಶನ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಹಾಗಾದರೆ, ಕನ್ನಡ ಚಿತ್ರರಂಗದ ಯಾವ್ಯಾವ ನಟರು ಈ ಕುರಿತು ಏನು ಹೇಳಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ದರ್ಶನ್ ಮೇಲೆ ಚಪ್ಪಲಿ ಎಸೆದಿರುವ ಕುರಿತು ಪೋಸ್ಟ್ ಹಂಚಿಕೊಂಡಿರುವ ನಟ ಕಿಚ್ಚ ಸುದೀಪ್, ನಮ್ಮ ನಾಡು, ಭಾಷೆ ಹಾಗೂ ಸಂಸ್ಕೃತಿ ಎಲ್ಲವೂ ಸಹ ಪ್ರೀತಿ ಹಾಗೂ ಗೌರವವನ್ನು ಪ್ರತಿನಿಧಿಸುತ್ತೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ. ನಾನು ನೋಡಿದ ಆ ವಿಡಿಯೊ ಮನಸ್ಸನ್ನು ಕೆಡಿಸಿತ್ತು, ಘಟನೆಗೆ ಸಂಬಂಧವೇ ಇಲ್ಲದ ಚಿತ್ರದ ನಾಯಕಿ ಹಾಗೂ ಇನ್ನಿತರು ವೇದಿಕೆ ಮೇಲಿದ್ದರು. ಅವರನ್ನು ಅವಮಾನಿಸಿದ್ದು ಕನ್ನಡಿಗರು ಇಷ್ಟು ನ್ಯಾಯಸಮ್ಮತವಲ್ಲದ ರೀತಿ ನಡೆದುಕೊಳ್ಳುತ್ತಾರಾ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿದ ಎಂದು ಬರೆದಿದ್ದಾರೆ. ಇನ್ನು ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಹಾಗೂ ದರ್ಶನ್ ನಡುವೆ ಅಲ್ಲಿ ಸರಿ ಇಲ್ಲ ಎನ್ನುವಂತಹ ಪರಿಸ್ಥಿತಿ ಇತ್ತೇನೋ ಎಂದಿರುವ ಕಿಚ್ಚ ಈ ರೀತಿ ಮಾಡಿದ್ದು ಸರಿಯಲ್ಲ ಎಂದಿದ್ದಾರೆ. ಈ ಪ್ರತಿಕ್ರಿಯೆಯನ್ನು ಪುನೀತ್ ಒಪ್ಪುತ್ತಿದ್ರಾ ಹಾಗೂ ಬೆಂಬಲಿಸುತ್ತಿದ್ರಾ? ಇದಕ್ಕೆ ಉತ್ತರ ಅವರ ಪ್ರತಿಯೊಬ್ಬ ಪ್ರೀತಿಯ ಅಭಿಮಾನಿಗಳಿಗೂ ಗೊತ್ತಿದೆ. ಗುಂಪಿನಲ್ಲಿದ್ದ ಓರ್ವ ವ್ಯಕ್ತಿ ಎಸಗಿದ ಬೇಜವಾಬ್ದಾರಿ ಕೃತ್ಯದಿಂದ ಪುನೀತ್ ಅಭಿಮಾನಿಗಳಿಗಿರುವ ಘನತೆ ಹಾಗೂ ಗೌರವವನ್ನು ಹಾಳು ಮಾಡಬಾರದು ಎಂದು ಸುದೀಪ್ ಉಲ್ಲೇಖಿಸಿದ್ದಾರೆ.
ಘಟನೆ ಕುರಿತು ನಟ ಶಿವರಾಜ್ ಕುಮಾರ್ ಟ್ವೀಟ್ ಒಂದನ್ನು ಮಾಡಿದ್ದು, ನಿನ್ನೆ ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ನಡೆದ ಕೃತ್ಯ ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಈ ರೀತಿಯ ಅಮಾನವೀಯ ಘಟನೆ ಒಂದೇ ಮನೆಯವರಂತಿರುವ ಎಲ್ಲರಿಗೂ ನೋವುಂಟು ಮಾಡುತ್ತದೆ. ಮನುಷ್ಯತ್ವ ಮರೆತು ಯಾರೂ ಈ ರೀತಿಯ ಕೃತ್ಯಗಳನ್ನು ನಡೆಸಬಾರದು ಎಂದು ವಿನಂತಿಸುತ್ತೇನೆ. ಅಭಿಮಾನದಿಂದ ಪ್ರೀತಿಯನ್ನು ತೋರಿ, ದ್ವೇಷ ಅಗೌರವವನ್ನಲ್ಲ ಎಂದಿದ್ದಾರೆ. ಇದರ ಜೊತೆಗೆ ವಿಡಿಯೋ ಸಂದೇಶವೊಂದನ್ನು ಹರಿಬಿಟ್ಟಿದ್ದಾರೆ.
ದರ್ಶನ್ರ ಮೇಲೆ ನಿನ್ನೆ ನಡೆದ ಘಟನೆ ತಪ್ಪು ಹಾಗು ಖಂಡನೀಯ. ದಯವಿಟ್ಟು ಕಲಾವಿದರನ್ನು ಹೀಗೆ ಅಪಮಾನ ಮಾಡದಿರಿ. ಕಲಾವಿದರಿಗೆ ಗೊತ್ತಿರುವುದು ಕಲಾಪ್ರೇಮಿಗಳ ಸಂತೋಷ ಪಡಿಸುವ ಕಾಯಕ ಮಾತ್ರ. ಎಲ್ಲಾ ಕಲಾವಿದರು ಶಾರದೆಯ ಮಕ್ಕಳು. ಅವರ ಮೇಲೆ ಪ್ರೀತಿ ಇರಲಿ ದ್ವೇಷ ಬೇಡ ನನ್ನ ವಿನಂತಿ. ದರ್ಶನ ಸ್ವಲ್ಪ ನೇರನುಡಿ ಮನಸ್ಸು ಮಗುವಂತೆ. ಧನ್ಯವಾದ ಎಂದಿದ್ದಾರೆ ಹಿರಿಯ ನಟ, ರಾಜಕಾರಣಿ ಜಗ್ಗೇಶ್.
ನಟ ವಸಿಷ್ಠ ಸಿಂಹ ಪ್ರತಿಕ್ರಿಯಿಸಿ, ಅಭಿಮಾನ ಅತಿರೇಕ ಆಗದಿರಲಿ. ಯಾವುದೇ ಕಲಾವಿದನಿಗೆ ಅವಮಾನ ಮಾಡುವುದೆಂದರೆ ಕಲೆಗೆ ಅಗೌರವ ತೋರಿದಂತೆ. ಕಲಾಸೇವೆಯಲ್ಲಿರುವ ನಮ್ಮವರಿಗೆ ಅವಮಾನ ಮಾಡಿರುವುದು ಖಂಡನೀಯ. ಚಪ್ಪಲಿ ಎಸೆಯುವ ದುಷ್ಕೃತ್ಯ ನಮ್ಮ ಮಣ್ಣಿನ ಸಂಸ್ಕೃತಿಯೂ ಅಲ್ಲ ಕನ್ನಡತನಕ್ಕೆ ಶೋಭೆಯೂ ಅಲ್ಲ ಎಂದಿದ್ದಾರೆ.
ನಟ ಸತೀಶ್ ನೀನಾಸಂ ಸಹ ದರ್ಶನ್ ಪರವಾಗಿ ಸಂದೇಶ ಹಂಚಿಕೊಂಡಿದ್ದು, ಎತ್ತ ತಲುಪುತ್ತಿದ್ದೇವೆ ನಾವು? ಮನುಷ್ಯತ್ವವಿಲ್ಲದ ಪ್ರಪಂಚದ ಕಡೆಗಾ? ನಾವೆಲ್ಲರು ಒಂದೇ ಕುಲದವರು ಒಡೆದಾಡದಿರಿ.ನೀರು ಗಾಳಿ,ಅನ್ನ ಎಲ್ಲರಿಗೂ ಒಂದೇ. ಜಗತ್ತಿನ ಎಲ್ಲ ಕಲಾವಿದರು ಒಂದೇ. ಈ ರೀತಿ ದರ್ಶನ್ ಅವರ ಮೇಲೆ ಎಸೆದ ಎಸೆತ ಸರಿಯೇ? ಸಾಕು. ತಪ್ಪು ಮಾಡಿದವರು ಕ್ಷಮೆ ಕೇಳಿ ಮನುಷ್ಯರಾಗಿ. ಒಬ್ಬರಿಗೊಬ್ಬರು ನಮ್ಮ ನಮ್ಮಲ್ಲೆ ಕಿತ್ತಾಡೋದು ನಿಲ್ಲಿಸಿ. ಯಾರೋ ಒಬ್ಬರು ಮಾಡೋ ತಪ್ಪು ಎಲ್ಲರಿಗು ಅವಮಾನ. ನಾವು ನಿಮ್ಮೊಟ್ಟಿಗಿದ್ದೇವೆ ಸಾರ್ ಎಂದಿದ್ದಾರೆ.
''ಬಾಸ್ ನಿಮ್ಮ ಸಹಸ್ರ ಅಭಿಮಾನಿಗಳಲ್ಲಿ ನಾನೂ ಒಬ್ಬ. ನಿನ್ನೆ ಹೊಸಪೇಟೆಯಲ್ಲಿ ನಡೆದ ಘಟನೆ ಮನಸ್ಸಿಗೆ ಬೇಸರ ಮೂಡಿಸಿದೆ. ಆದರೆ ಬಾಸ್ ನೀವು ಹೇಳಿದ ಮಾತು, ''ಪರ್ವಾಗಿಲ್ಲ ಚಿನ್ನ ಈ ಥರಹದ್ದು ಎಷ್ಟೋ ನೋಡಿದ್ದೀನಿ ಬಿಡ್ರೊ'' ಎಂದು ನಗುತ್ತಾ ಅಭಿಮಾನಿಗಳಿಗೆ ಸಮಾಧಾನ ನಿಮ್ಮ ಮೇಲಿನ ಗೌರವವನ್ನು ಸಾವಿರ ಹೆಚ್ಚು ಮಾಡಿದೆ. ನನ್ನ ಕೊನೆಯ ಉಸಿರು ಇರುವವರೆಗೆ ನಿಮ್ಮೊಂದಿಗೆ'' ಎಂದಿದ್ದಾರೆ ನಟ ವಿನೋದ್ ಪ್ರಭಾಕರ್.
ನಟಿ ಅಮೃತಾ ಐಯ್ಯಂಗಾರ್, ಎಂಥಹಾ ಸನ್ನಿವೇಶದಲ್ಲಿಯೇ ಆದರು ಯಾವುದೇ ಕಲಾವಿದನಿಗೆ ಈ ರೀತಿಯ ಅಗೌರವ ಮಾಡಬಾರದು. ನಟ ದರ್ಶನ್, ಕರ್ನಾಟಕ ಮತ್ತು ಹೊರರಾಜ್ಯದವರನ್ನು ಸಹ ಸತತ 25 ವರ್ಷಗಳಿಂದಲೂ ಮನೊರಂಜಿಸುತ್ತಾ ಬಂದಿದ್ದಾರೆ. ಅವರೊಬ್ಬ ಲೋಕೋಪಕಾರಿ ವ್ಯಕ್ತಿ, ಅದ್ಭುತವಾದ ಪ್ರಾಣಿ ಪ್ರೇಮಿ ಮತ್ತು ಸ್ಟಾರ್ಡಂ ಮೀರಿದ ವ್ಯಕ್ತಿ. ನಾವು ನಿಮ್ಮೊಂದಿಗಿದ್ದೇವೆ ಸರ್'' ಎಂದು ದರ್ಶನ್ ಅವರನ್ನು ಹೊಗಳಿದ್ದಾರೆ.
ರಾಮ್ ಕುಮಾರ್ ಅವರ ಮಗ ವರನಟ ರಾಜಕುಮಾರ್ ಅವರ ಮೊಮ್ಮಗನಾಗಿರುವ ಧೀರನ್ ರಾಮ್ ಕುಮಾರ್ ದರ್ಶನ್ ಮೇಲೆ ಚಪ್ಪಲಿ ಎಸೆದಿರುವ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಧೀರನ್ ರಾಮ್ ಕುಮಾರ್ "ನಮ್ಮದು ಕಲಾವಿದರ ಜಾತಿ, ನಾವೆಲ್ಲರೂ ಒಂದೇ. ಕಲಾವಿದರಿಗೆ ದಯವಿಟ್ಟು ಮರ್ಯಾದೆ ಕೊಡಬೇಕು ದಯವಿಟ್ಟು" ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಓರ್ವ ನಟನಾದವನು ತನ್ನ ಸಹ ನಟರನ್ನು ಗೌರವಿಸುವುದು ಹಾಗೂ ಪ್ರೀತಿಸುವುದು ಅತಿಮುಖ್ಯ ಎಂದಿದ್ದಾರೆ. ಇನ್ನೂ ಮುಂದುವರಿದು ಇಡೀ ಚಿತ್ರರಂಗ ಕಲೆ ಹಾಗೂ ಕಲಾವಿದರ ಪರ ನಿಲ್ಲುತ್ತೆ. ದಯವಿಟ್ಟು ಕಲಾವಿದರನ್ನು ಗೌರವಿಸಿ ಎಂದು ಉಲ್ಲೇಖಿಸಿದ್ದಾರೆ.
ನಿನ್ನೆ ಹೊಸಪೇಟೆಯಲ್ಲಿ ನಡೆದ ಘಟನೆ ತುಂಬಾ ನೋವುಂಟು ಮಾಡಿದೆ. ನಿಮ್ಮ ಮೇಲೆ ನಡೆದಿರುವ ಪಿತೂರಿ ಖಂಡನೀಯ. ನಿಮ್ಮ ಸಹಸ್ರ ಅಭಿಮಾನಿಗಳಲ್ಲಿ ಒಬ್ಬನಾಗಿ ಸಾಯೋವರೆಗೂ ನಿಮ್ಮ ಮೇಲಿನ ಅಭಿಮಾನ ದುಪ್ಪಟ್ಟಾಗುತ್ತೋ ಹೊರತು ಕಡಿಮೆಯಾಗುವುದಿಲ್ಲ. ಈ ಘಟನೆಗೆ ಕಾರಣರಾದವರಿಗೆ ಭಗವಂತ ಒಳ್ಳೆಯದೇ ಮಾಡಲಿ. ಕೆಟ್ಟದು ಬಯಸಿದವರಿಗೂ ಒಳ್ಳೆದು ಮಾಡಿ ಎಂದು ಹೇಳಿಕೊಟ್ಟಿದ್ದಿರಾ ಬಾಸ್. ಕರ್ಮ ಎನ್ನುವುದು ಯಾರಿಗೂ ಬಿಟ್ಟಿರುವುದಿಲ್ಲ, ಕರ್ಮ ತಿರುಗುತ್ತೆ. ಚಪ್ಪಲಿ ಎಸೆದ ವ್ಯಕ್ತಿಗೂ, ಅವನ ಮನಸ್ಥಿತಿಗೂ ಮತ್ತು ಪ್ರಚೋದಿಸಿದರವರಿಗೂ ನೆಮ್ಮದಿ ಸಿಗಲಿ. ನಿಮ್ಮ ಸೆಲೆಬ್ರಿಟಿ ಅಭಿಮಾನಿಗಳ ಮುಂದೆ ಈ ಘಟನೆಗಳು ಸಾಸಿವೆ ಕಾಳಿಗೆ ಸಮ. ನಿಮ್ಮ ಮೇಲಿನ ಅಭಿಮಾನದೊಂದಿಗೆ.. ಧನ್ವೀರ್, ನಿಮ್ಮೊಂದಿಗೆ ಸದಾ ನಾವು ಎಂದು ನಟ ಧನ್ವೀರ್ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದಿರುವ ಸುಮಲತಾ ಅಂಬರೀಶ್, "ಯಾವುದೇ ನಿಜವಾದ ಅಭಿಮಾನಿ ಮಾಡದ ಕೃತ್ಯ ದರ್ಶನ್ ಮೇಲೆ ನಡೆದಿರುವ ಹಲ್ಲೆ. ಇದರಿಂದ ದರ್ಶನ್ ವರ್ಚಸ್ಸು, ಖ್ಯಾತಿಗೆ ಯಾವುದೇ ಕುತ್ತು ತರಲು ಸಾಧ್ಯವಿಲ್ಲ. ಚಿತ್ರರಂಗಕ್ಕೆ ಕಪ್ಪು ಚುಕ್ಕಿ ಇಟ್ಟ ಈ ಘಟನೆ ಎಸಗಿದವರ ಸಣ್ಣತನ, ಹೇಡಿತನ ಮಾತ್ರ ಬಹಿರಂಗವಾಗಿದೆ. ಇಡೀ ಚಿತ್ರರಂಗ ಕೃತ್ಯ ಖಂಡಿಸಿ ದರ್ಶನ್ ಬೆಂಬಲಕ್ಕೆ ನಿಂತಿದ್ದೇವೆ" ಎಂದಿದ್ದಾರೆ. ಯಶ್, ಅಪ್ಪು, ಅಂಬಿ, ದರ್ಶನ್, ಉಪೇಂದ್ರ ಒಟ್ಟಿಗೆ ಇರುವ ಫೋಟೊ ಜೊತೆಗೆ ದರ್ಶನ್, ಅಭಿಷೇಕ್ ಜೊತೆ ತೆಗೆಸಿಕೊಂಡು ಫೋಟೊ ಶೇರ್ ಮಾಡಿ ನಾವೆಲ್ಲಾ ಒಂದೇ ಎಂದು ಸಾರಿದ್ದಾರೆ.
ನಟಿ ಪ್ರಣೀತ್ ಸುಭಾಷ್ ಪ್ರತಿಕ್ರಿಯಿಸಿ, ಒಬ್ಬ ಅಭಿಮಾನಿಯಾಗಿ ನಿಜಕ್ಕೂ ಹೊಸಪೇಟೆ ಘಟನೆ ತುಂಬಾ ನೋವುಂಟು ಮಾಡಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಚಪ್ಪಲಿ ಎಸೆದ ಕೈ ಒಂದಾದರೆ ಚಪ್ಪಾಳೆ ಹೊಡೆದು ಪ್ರೀತಿಸುವ ಮನಸುಗಳು ಕೋಟಿಗಟ್ಟಲೇ ಅದು ಕೇವಲ ಹುಚ್ಚು ಅಭಿಮಾನಿಗಳ ಕೃತ್ಯವಲ್ಲ. ಯಾವತ್ತೂ ಯಾರಿಗು ಕೇಡು ಬಯಸದ ಅಪ್ಪು ಅವರ ಹೆಸರಿನ ಗುರಾಣಿ ಹಿಡಿದು ಕುತಂತ್ರಿಗಳು ನಡೆಸಿದ ಹುನ್ನಾರ. ಇಂತಹಾ ದುಷ್ಟಶಕ್ತಿಗಳ ಅಟ್ಟಹಾಸ ಇತ್ತೀಚೆಗೆ ಹೆಚ್ಚಾಗಿದೆ. ಕಡಿವಾಣ ಹಾಕದೇ ಹೋದರೆ ಇಂತಹಾ ಅಹಿತಕರ ಘಟನೆಗಳನ್ನು ಎಲ್ಲರು ಎದುರಿಸಬೇಕಾದೀತು'' ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ ನಟ ಕವಿರಾಜ್. ಅದೇ ಪೋಸ್ಟ್ನ ಕಮೆಂಟ್ನಲ್ಲಿ ''ಅಪ್ಪು ಅವರ ಅಭಿಮಾನಿಗಳ ಕೃತ್ಯ ಅಲ್ಲಾ ಅಂತಲೇ ನಾನು ಪೋಸ್ಟ್ ಹಾಕಿರೋದು'' ಎಂದಿದ್ದಾರೆ ಸಹ.
ಹೊಸಪೇಟೆಯಲ್ಲಿ ನಟ ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆಯನ್ನು ನಟ ಶ್ರೀಮುರಳಿ ಕೂಡ ಖಂಡಿಸಿದ್ದಾರೆ. ಮನುಷತ್ವ ಬಹಳ ಮುಖ್ಯ, ದಯವಿಟ್ಟು ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.