ಅನಂತ್ ನಾಗ್ ಭಾರತೀಯ ಸಿನಿಮಾರಂಗ ಕಂಡ ಅದ್ಭುತ ಪ್ರತಿಭೆ. ತಮ್ಮ ಸ್ವಾಬಾವಿಕ ನಟನಾಶೈಲಿಯಿಂದಲೇ ಗಮನ ಸೆಳೆಯುವ ಇವರು, ಕನ್ನಡ ಮಾತ್ರವಲ್ಲದೇ ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. 6 ಫಿಲ್ಮ್ ಫೇರ್ ಮತ್ತು 5 ಕರ್ನಾಟಕ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕರ್ನಾಟಕ ರಾಜಕೀಯದಲ್ಲಿಯೂ ತಮ್ಮ ಛಾಪನ್ನು ಮೂಡಿಸಿರುವ ಅನಂತ್ ನಾಗ್, 1994ರ ಜೆ.ಎಚ್.ಪಟೇಲ್ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸಚಿವರಾಗಿ ಕೆಲಸ ಮಾಡಿದ್ದಾರೆ. ಕನ್ನಡ ಚಿತ್ರರಂಗದ ದಂತಕಥೆ ದಿ.ಶಂಕರನಾಗ್ ಇವರ ನಲ್ಮೆಯ ಕಿರಿಯ ಸಹೋದರ. ಇವರ ಪತ್ನಿ ಗಾಯತ್ರಿ ಕೂಡ ಕನ್ನಡ ಚಿತ್ರರಂಗದ ಹಿರಿಯ ನಟಿ.
ವೈಯಕ್ತಿಕ ಜೀವನ
1948 ಸೆಪ್ಟಂಬರ್ 4ರಂದು ಮುಂಬೈನಲ್ಲಿ ಜನಿಸಿದ ಅನಂತ್ ನಾಗ್ ನಾಗರಕಟ್ಟೆ ತಮ್ಮ ಜೀವನದ ಮೊದಲ ಆರು ವರ್ಷದ ಜೀವನವನ್ನು ಕಾಸರಗೋಡಿನ ಹತ್ತಿರದ ಆನಂದಾಶ್ರಮದಲ್ಲಿ ಕಳೆದರು. ನಂತರ ಹೊನ್ನಾವರದಲ್ಲಿ 5ನೇ, 6ನೇ, 7ನೇ ಮತ್ತು 8ನೇ ತರಗತಿ ಅಭ್ಯಾಸ ಮಾಡಿದ ಇವರು, ಮುಂದಿನ ವಿಧ್ಯಾಭ್ಯಾಸ ಮಾಡಲು ಮುಂಬೈನ ಸೇಂಟ್ ಕ್ಸೇವೀಯರ್ ಶಾಲೆಗೆ ಸೇರಿದರು.
ರಂಗಭೂಮಿ
ಮುಂಬೈಯಲ್ಲಿ ವಿಧ್ಯಾಭ್ಯಾಸವನ್ನು ಮಾಡುವಾಗ ಬಾಂಬೆಯ ನಾಟಕ ಲೋಕದ ಸಂಪರ್ಕಕ್ಕೆ ಬಂದ ಅನಂತ್, ಮೊದಲು ಧರಿಸಿದ ಮೊದಲ ನಾಟಕವೇಷ ಚೈತನ್ಯ ಮಹಾಪ್ರಭುಗಳದ್ದು. ಈ ಮೂರಂಕಿಯ ನಾಟಕ ತುಂಬಾ ಪ್ರಸಿದ್ಢವಾಯಿತು. ಮುಂದೆ ಗೌತಮ ಬುದ್ಧ ನಾಟಕದಲ್ಲಿ ನಟಿಸಿದರು. ಬಳಿಕ ಅಮೋಲ್ ಪಾಲೇಕರ್ ಮತ್ತು ಸತ್ಯದೇವ ದುಬೆಯವರ ಜೊತೆ ಸೇರಿ ಹಿಂದಿ ಮತ್ತು ಮರಾಠಿಯಲ್ಲಿ ಸಾಮಾಜಿಕ ಮತ್ತು ರಾಜಕೀಯ ನಾಟಕಗಳನ್ನು ಮಾಡಿದರು. 1967 ರಿಂದ 1972 ರವರೆಗೆ ಕನ್ನಡ, ಕೊಂಕಣಿ, ಮರಾಠಿ, ಹಿಂದಿ ಭಾಷೆಗಳಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ನಾಟಕಗಳನ್ನು ಮಾಡಿದರು. ನಂತರ ತಮ್ಮ ಗೆಳೆಯರಾದ ಆನಂದ್ ಎಂಬುವವರ ಜೊತೆ ಸೇರಿ `3A' ಎಂಬ ತಂಡ ಮಾಡಿ ತಾವೇ ಸ್ವತಃ ನಾಟಕ ನಿರ್ದೇಶನ, ನಿರ್ಮಾಣಕ್ಕಿಳಿದರು. ಮುಂದೆ ಬೆಂಗಳೂರಿಗೆ ಬಂದ ನಂತರವೂ ತಮ್ಮ ಶಂಕರ್ ನಾಗ್ ಜೊತೆ ನಾಟಕರಂಗದಲ್ಲಿ ತೊಡಗಿಸಿಕೊಂಡಿದ್ದರು.
ಸಿನಿಜೀವನ
1972ರಲ್ಲಿ ಕನ್ನಡದ ಸಂಕಲ್ಪ ಮತ್ತು ಶ್ಯಾಮ ಬೆನಗಲ್ ಅವರ ಅಂಕುರ್ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. ಅನಂತ್ ನಾಗ್ ನಟಿಸಿದ 7 ಹಿಂದಿ ಚಿತ್ರಗಳಲ್ಲಿ, 6 ಚಿತ್ರಗಳನ್ನು ಶ್ಯಾಮ್ ಬೆನಗಲ್ ಅವರೇ ನಿರ್ದೇಶನ ಮಾಡಿರುವುದು ವಿಶೇಷ. ಮುಂದೆ ಜಿ.ವಿ.ಅಯ್ಯರ್ ನಿರ್ದೇಶನದಲ್ಲಿ ಮೂಡಿಬಂದ `ಹಂಸಗೀತೆ' ಚಿತ್ರದಲ್ಲಿ ಸಂಗೀತಗಾರ ವೆಂಕಟಸುಬ್ಬಯ್ಯನವರ ಪಾತ್ರದಲ್ಲಿ ಮಿಂಚಿದರು. 1975ರಲ್ಲಿ ತೆರೆಕಂಡ ದೊರೈ ಭಗವಾನ್ ನಿರ್ದೇಶನದ `ಬಯಲುದಾರಿ' ಚಿತ್ರದಲ್ಲಿ ಕಲ್ಪನಾ ಜೊತೆ ನಟಿಸಿ, ಕನ್ನಡ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರಾದರು.
ನಟಿ ಲಕ್ಷ್ಮೀಯವರ ಜೊತೆ `ಚಂದನದ ಗೊಂಬೆ' ಚಿತ್ರದ ಮೂಲಕ ಒಂದುಗೂಡಿದ ಅನಂತ್, ಸುಮಾರು 25 ಚಿತ್ರಗಳಲ್ಲಿ ನಟಿಸಿದರು. ಕನ್ನಡ ಚಿತ್ರರಂಗದಲ್ಲಿ ಒಬ್ಬ ನಾಯಕನಟ ಹಾಸ್ಯಪ್ರಧಾನ ಚಿತ್ರಗಳಲ್ಲಿ ನಟಿಸುವ ಪ್ರವೃತ್ತಿಗೆ ಮುನ್ನುಡಿ ಬರೆದ ಕೀರ್ತಿ ಅನಂತ್ ನಾಗ್ ಅವರಿಗೆ ಸಲ್ಲುತ್ತದೆ. ಸಾಲು ಸಾಲಾಗಿ ಬಂದ ಗಣೇಶನ ಸರಣಿ ಚಿತ್ರಗಳೇ ಇದಕ್ಕೆ ಸಾಕ್ಷಿ. ಇವರು 1995ರಲ್ಲಿ ನಟಿಸಿದ ಟೆಲಿಫೋನ್ ಸಂಭಾಷಣೆ ಆಧಾರಿತ ಚಿತ್ರ `ಬೆಳದಿಂಗಳ ಬಾಲೆ' ಕನ್ನಡ ಚಿತ್ರರಂಗಕ್ಕೆ ಹೊಸದಿಕ್ಕನ್ನೇ ಕೊಟ್ಟಿತ್ತು. ಹೀಗೆ ಶುರುವಾದ ಅನಂತ್ ನಾಗ್ ಅವರ ಚಿತ್ರಜೀವನ ಸುಮಾರು 250ಕ್ಕೂ ಹೆಚ್ಚು ಚಿತ್ರಗಳನ್ನು ದಾಟಿ ಮುನ್ನುಗ್ಗುತ್ತಿದೆ.
ರಾಜಕೀಯ ಜೀವನ
ಮೊದಲಿಂದನಿಂದಲೂ ಸಾಮಾಜಿಕ ಕಳಿಕಳಿ ಹೊಂದಿರುವ ಅನಂತ್ ನಾಗ್ 1983ರಿಂದ ಜನತಾದಳ ಪಕ್ಷದ ಜೊತೆ ಗುರುತಿಸಕೊಂಡಿದ್ದರು. 1983, 1985, 1989ರ ಚುನಾವಣೆಗಳಲ್ಲಿ ಜನತಾದಳದ ಸ್ಟಾರ್ ಪ್ರಚಾರಕರಾಗಿದ್ದರು. 1994ರಲ್ಲಿ ಮಲ್ಲೇಶ್ವರಂ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಇವರು, ಜೆ.ಎಚ್.ಪಟೇಲ್ ಸರ್ಕಾರದಲ್ಲಿ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಸಚಿವರಾಗಿದ್ದರು. 1983ರ ಲೋಕಸಭೆ ಚುನಾವಣೆಯಲ್ಲಿ ಕೂಡ ಸ್ಪರ್ಧಿಸಿದ್ದರು.
ತಮ್ಮ ಶಂಕರ್ ನಾಗ್ ಜೊತೆಗಿನ ಭಾಂಧವ್ಯ
ಅನಂತ್ ನಾಗ್ ಜೀವನದಲ್ಲಿ ಶಂಕರ್ ನಾಗ್ ಕೇವಲ ಕಿರಿಯ ಸಹೋದರನಾಗಿರದೇ, ಒಬ್ಬ ಮಗನಾಗಿಯೇ ಇದ್ದರು. ಇಬ್ಬರು ಸಹೋದರರು ನಾಟಕರಂಗದಲ್ಲಿ ಮಾತ್ರವಲ್ಲದೇ, ಚಿತ್ರರಂಗದಲ್ಲಿಯೂ ಕೂಡ ಜೊತೆ ಜೊತೆಗೆ ನಡೆದರು. ತದ್ವಿರುದ್ದ ವ್ಯಕ್ತಿತ್ವದವರಾದ ಈ ಇಬ್ಬರು ಸಹೋದರರ ಮಿಂಚಿನ ಓಟಕ್ಕೆ ವಿಧಿ ಬೇಗನೇ ತಡೆಯೊಡ್ಡಿತು. ಅನಂತ್ ನಾಗ್ ಜೀವನದ ಅತಿದೊಡ್ಡ ಆಘಾತ ತಮ್ಮ ಶಂಕರನನ್ನು ಕಳೆದುಕೊಂಡಿದ್ದು. ಪ್ರೀತಿಯ ತಮ್ಮನ ನೆನಪಲ್ಲಿ `ನನ್ನ ತಮ್ಮ ಶಂಕರ' ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಬಂದಿದೆ.
ಪದ್ಮಭೂಷಣ ಪ್ರಶಸ್ತಿ; ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ 2025ರ ಜನವರಿ 25ರಂದು ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಿದೆ.