ಕೆ.ಎಸ್.ಚಿತ್ರ
ಕೆ.ಎಸ್.ಚಿತ್ರ ಜೀವನಚರಿತ್ರೆ
1963 ಜುಲೈ 27ರಂದು ತಿರುವನಂತಪುರಂನಲ್ಲಿ ಜನಿಸಿದ ಕೆ.ಎಸ್.ಚಿತ್ರ ಅವರ ಪೂರ್ಣಹೆಸರು ಕೃಷನ್ ನಾಯರ್ ಶಾಂತಕುಮಾರಿ ಚಿತ್ರಾ . ಇವರ ತಂದೆ ಸಂಗೀತ ವಿದ್ವಾಂಸಕ ಕೃಷ್ಣನ್ ಅಯ್ಯರ್ ರವರ ಮಾರ್ಗದರ್ಶನದಲ್ಲಿ ಸಂಗೀತ ಅಭ್ಯಾಸ ಪ್ರಾರಂಬಿಸಿದ ಚಿತ್ರಾ ಮುಂದೆ ಪ್ರಖ್ಯಾತ ಕರ್ಣಾಟಕ ಸಂಗೀತ ವಿದುಷಿ ಡಾ. ಒಮನಕುಟ್ಟಿ ಅವರಲ್ಲಿ ಸಂಗೀತ ಕಲಿತರು.ತಮ್ಮ ತಾಯಿ ಶಾಂತಾ ಅವರಲ್ಲಿ ವೀಣೆಯನ್ನು ಕೂಡ ಕಲಿತರು.
ಸಂಗೀತದಲ್ಲಿ ಕೇರಳ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಚಿತ್ರಾ ಸತತ 6 ವರ್ಷಗಳ ಕಾಲ ಭಾರತ ಸರಕಾರದಿಂದ ರಾಷ್ಟೀಯ ಪ್ರತಿಭಾ ಪುರಸ್ಕಾರ ವಿಧ್ಯಾರ್ಥಿವೇತನ ಪಡೆದರು.
ಮುಂದೆ 1979ರಲ್ಲಿ ಮಲಯಾಳಂ ಚಿತ್ರರಂಗದ ಮೂಲಕ ಹಿನ್ನಲೆಗಾಯಕಿಯಾಗಿ ಹೊರಹೊಮ್ಮಿದ ಚೈತ್ರಾ ,1986ರಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿ ಕನ್ನಡದ ಗಾನಕೋಗಿಲೆಯೆಂದು ಪ್ರಸಿದ್ಧಿ ಪಡೆದರು.
1995ರಲ್ಲಿ `ಆಡಿಯೊಟ್ರಾಕ್ಸ' ಎಂಬ ಮ್ಯೂಸಿಕ್ ಕಂಪನಿ ಸ್ಥಾಪಿಸಿ ಚಿತ್ರಗೀತೆಗಳಿಗೆ ಹೊರತಾದ ಭಕ್ತಿಗೀತೆಗಳು,ಜನಪದ ಗೀತೆಗಳಿಗೆ ಪ್ರೋತ್ಸಾಹ ಕೊಟ್ಟರು.
ಹತ್ತು ಭಾಷೆಗಳಲ್ಲಿ ಸುಮಾರು 25000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಚಿತ್ರಾ ಭಾರತದ ಎಲ್ಲಾ ಪ್ರಮುಖ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ.
6 ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವ ಚಿತ್ರಾ ಬ್ರಿಟಿಷ್ ಸಂಸತ್ತಿನಲ್ಲಿ ಮತ್ತು ಚೀನಾ ದೇಶದ ರಾಷ್ಟೀಯ ಚಲನಚಿತ್ರ ಮಹೊತ್ಸವದಲ್ಲಿ ಸನ್ಮಾನಗೊಂಡ ಭಾರತದ ಮೊದಲ ಮಹಿಳೆ.
ಇವರು ಉದ್ಯಮಿ ಹಾಗೂ ಇಂಜಿನಿಯರ್ ವಿಜಯಶಂಕರ್ ಅವರನ್ನು ಮದುವೆಯಾಗಿದ್ದಾರೆ. 2011ರಲ್ಲಿ ದುಬೈಗೆ ಸಂಗೀತ ಕಚೇರಿ ನೀಡಲು ಹೋದಾಗ ಇವರ ಮಗು ನಂದಿನಿ ಈಜುಕೊಳದಲ್ಲಿ ಮುಳುಗಿ ವಿಧಿವಶವಾದುದು ಈ ಗಾನಕೋಗಿಲೆಯ ಬದುಕಿನ ಬಹುದೊಡ್ಡ ದುರಂತ.
ನಿವೃತ್ತ ಸಂಗೀತಗಾರರು ಮತ್ತು ಹಿನ್ನಲೆ ಗಾಯಕರ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕೋಸರ ಕೇರಳದ ಟಿವಿ ಚಾನಲ್ ಒಂದರ ಜೊತೆಗೂಡಿ `ಸ್ನೇಹ ನಂದನಾ' ಎಂಬ ಸಂಸ್ಥೆ ಸ್ಥಾಪಿಸಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ.