ಮಯೂರಿ ಕ್ಯಾತರಿ
ಮಯೂರಿ ಕ್ಯಾತರಿ ಜೀವನಚರಿತ್ರೆ
‘ಕೃಷ್ಣಲೀಲಾ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ‘ಅಶ್ವಿನಿ ನಕ್ಷತ್ರ’ದ ಬೆಡಗಿ ಮಯೂರಿ, ಜನಿಸಿದ್ದು ಜುಲೈ 11, 1995 ಹುಬ್ಬಳ್ಳಿಯಲ್ಲಿ. ಇವರ ತಂದೆ ಪ್ರಕಾಶ್ ತಾಯಿ ಗೀತಾ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸೇಂಟ್ ಮಿಚಲ್ಸ್ ಶಾಲೆಯಲ್ಲಿ ಮುಗಿಸಿದ್ದಾರೆ. ನಂತರ ಇವರು ಹುಬ್ಬಳ್ಳಿಯ ಫಾತೀಮಾ ಕಾಲೇಜ್ ನಲ್ಲಿ ಪಿಯುಸಿಯನ್ನು ಪೂರ್ಣಗೊಳಿಸಿ ಅದೇ ಹುಬ್ಬಳ್ಳಿಯಲ್ಲಿರುವ ಆಕ್ಸ್ಪರ್ಡ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ.
ಇವರು ತಮ್ಮ ಕಾಲೇಜ್ ಫೀ ತುಂಬಲು ತಮ್ಮ ಮಾತನ್ನೇ ಬಂಡವಾಳ ಮಾಡಿಕೊಂಡಿದ್ದರು. ಹೌದು ಒಂದು ಕಾಲಕ್ಕೆ ‘ಮಾತು’ ಬದುಕು ನೀಡಿದ ವೃತ್ತಿಯೂ ಹೌದು. ಶಾಲೆಯ ಫೀಸ್ ಕಟ್ಟಲು ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಇವರು, ಈಗ ಅವಕಾಶಗಳ ಸಾಗರವೇ ಎದುರಿಗಿದ್ದರೂ ಬಹು ಎಚ್ಚರಿಕೆಯಿಂದ ಒಂದೊಂದಾಗಿ ಹೆಕ್ಕಿ ಆಯ್ದುಕೊಳ್ಳುತ್ತಿದ್ದಾರೆ.
ಕನ್ನಡ ಧಾರಾವಾಹಿಗಳಲ್ಲಿ ಹೆಚ್ಚು ಜನಮನ್ನಣೆ ಗಳಿಸಿರುವ "ಅಶ್ವಿನಿ ನಕ್ಷತ್ರ" ಧಾರವಾಹಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಇವರು ಅದ್ಭುತವಾಗಿ ನಟಿಸಿದ್ದರು. ಈ ಧಾರಾವಾಹಿ ಅಭೂತ ಪೂರ್ವ ಯಶಸ್ಸನ್ನು ಗಳಿಸಿ ಜನರ ಮನಗೆದ್ದಿತು. ಹೀಗೆ ಜನರಿಗೆ ಪ್ರೀತಿ ಪಾತ್ರರಾಗಿದ್ದ ಇವರಿಗೆ ಕನ್ನಡ ಸಿನಿಮಾಗಳಲ್ಲಿ ನಟಿಸಲು ಅಹ್ವಾನಗಳು ಬಂದವು.
ಬಂದ ಅವಕಾಶಗಳನ್ನು ತರಾತುರಿಯಲ್ಲಿ ಒಪ್ಪಿಕೊಳ್ಳದೆ ಇವರು ಕನ್ನಡದ "ಕೃಷ್ಣಲೀಲಾ" ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು. ಈ ಚಿತ್ರ ಕನ್ನಡಚಿತ್ರರಂಗದಲ್ಲಿ ಅಭೂತ ಪೂರ್ವ ಯಶಸ್ಸುಗಳಿಸಿತು. ಇದರಿಂದ ಇವರು ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡರು. ಕೃಷ್ಣಲೀಲಾ ಯಶಸ್ವಿ ನಂತರ ಇವರಿಗೆ ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದಲ್ಲಿ ಮೂಡಿಬಂದ "ಇಷ್ಟಕಾಮ್ಯ" ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ತಮ್ಮ ಬಹುಕಾಲದ ಗೆಳೆಯ ಅರುಣ್ ಜೊತೆ ಲವ್ ಕಂ ಅರೆಂಜ್ ಮ್ಯಾರೇಜ್ ಆಗಿದ್ದರು. ಪತಿ ಅರುಣ್ ಖಾಸಗಿ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಮದುವೆ ಬಳಿಕ ನಟನೆಯಿಂದ ಕೊಂಚ ದೂರ ಉಳಿದಿದ್ದ ಮಯೂರಿ, ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಪ್ರವೇಶ ಪಡೆದಿದ್ದಾರೆ.