ರಮ್ಯಾ ಮೇಡಂ ಇದು 20 ಕೋಟಿ ಪ್ರಶ್ನೆ ಕಣ್ರಿ
ಮಂಡ್ಯ ಕ್ಷೇತ್ರದ ಸಂಸದೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರು ತಮ್ಮ ಜನತೆ ನೋವು ನಲಿವು ಆಲಿಸುತ್ತಾ ಚಿತ್ರರಂಗದಿಂದ ಕೊಂಚ ದೂರ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ರಮ್ಯಾ ಅವರನ್ನು ಬಿಟ್ಟರೂ ಬಿಡದಿ ಮಾಯೆ ಎಂಬಂತೆ ಚಿತ್ರರಂಗ ಮಾತ್ರ ಕೈ ಬೀಸಿ ಕರೆಯುತ್ತಲೇ ಇದೆ. ಅದರಲ್ಲೂ ವಿವಾದಗಳು ಮತ್ತೆ ಮತ್ತೆ ರಮ್ಯಾ ಅವರ ಸುತ್ತ ಸುತ್ತುತ್ತಿದೆ.
ಹ್ಯಾಟ್ರಿಕ್ ಹೀರೋ ಜೊತೆ ಆರ್ಯನ್, ಜಗ್ಗೇಶ್ ಜೊತೆ ನೀರ್ ದೋಸೆ ಹಾಗೂ ಪ್ರಜ್ವಲ್ ದೇವರಾಜ್ ಜೊತೆ ದಿಲ್ ಕಾ ರಾಜಾ ಚಿತ್ರಗಳನ್ನು ಮಂಡ್ಯ ಸಂಸದೆ ರಮ್ಯಾ ಅವರು ಆದಷ್ಟು ಬೇಗ ಮುಗಿಸಿಕೊಟ್ಟು ತಮ್ಮ ಕ್ಷೇತ್ರಕ್ಕಾಗಿ ಸೇವೆ ಸಲ್ಲಿಸುವಲ್ಲಿ ಕಾಲದೂಡುತ್ತಾರೆ ಎಂದು ಅವರ ಮ್ಯಾನೇಜರ್ ಗಳು ಹೇಳುತ್ತಲೇ ಇದ್ದಾರೆ.ಈ ಚಿತ್ರಗಳ ಜತೆಗೆ ರಮ್ಯಾ ಅವರು ಇನ್ನೊಂದು ದ್ವಿಭಾಷಾ ಚಿತ್ರಕ್ಕೂ ಸಹಿ ಹಾಕಿದ್ದರು ಎನ್ನಲಾಗಿದೆ. ಈ ಎಲ್ಲಾ ಚಿತ್ರಗಳ ಮೊತ್ತ 20 ಕೋಟಿ ರು ದಾಟಲಿದೆ ಎಂದು ಮೂಲಗಳು ಹೇಳುತ್ತಿದೆ.
ಮಂಡ್ಯ ಕ್ಷೇತ್ರದ ಚುನಾವಣೆಗೆ ರಮ್ಯಾ ಸ್ಪರ್ಧಿಸುವುದಕ್ಕೂ ಮುನ್ನ ಕೆಲವು ಚಿತ್ರಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಆದರೆ, ಚುನಾವಣೆ ಅಡ್ಡಿ ಬಂದಿದ್ದರಿಂದ ರಮ್ಯಾ ಮತ್ತೆ ಶೂಟಿಂಗ್ ಗೆ ಹೋಗಿಲ್ಲ. ರಮ್ಯಾ ಅವರಿಗಾಗಿ ನಿರ್ಮಾಪಕರು ಕೂಡಾ ತಾಳ್ಮೆಯಿಂದ ಕಾದಿದ್ದಾರೆ. ಇಂದಿಗೂ ರಮ್ಯಾ ಮೇಡಂ ಶೂಟಿಂಗ್ ಗೆ ಬರ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಅದರೆ, ರಮ್ಯಾ ಎಲ್ಲಕ್ಕೂ ಸೂಕ್ತ ಉತ್ತರ ನೀಡಿದ್ದಾರೆ. ನೀರ್ ದೋಸೆ ಚಿತ್ರೀಕರಣ ನಿಂತಿದ್ದು ನನ್ನಿಂದಾಗಿ ಅಲ್ಲ ಎಂದಿದ್ದಾರೆ. ರಮ್ಯಾ ಮಾತು ಕೇಳುತ್ತಿದ್ದರೆ ಮುಂದಿನ ಲೋಕಸಭೆ ಚುನಾವಣೆ ಮುಗಿಯುವ ತನಕ ಮತ್ತೆ ಚಿತ್ರೀಕರಣಕ್ಕೆ ಹಾಜರಾಗುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.

ಜಗ್ಗೇಶ್ ಪ್ರಶ್ನೆ
ರಮ್ಯಾ ಅವರು ಕೆಲ ಚಿತ್ರಗಳ ಅಡ್ವಾನ್ಸ್ ರಮ್ಯಾ ಹಿಂತಿರುಗಿಸಿದ್ದಾರೆ. ಅದರೆ, ನೀರ್ ದೋಸೆ ಖರ್ಚು ನೀಡುವವರು ಯಾರು ಎಂದು ಜಗ್ಗೇಶ್ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದರು.
ನೀರ್ ದೋಸೆ ಚಿತ್ರಕ್ಕೆ ಆಗಿರುವ ಖರ್ಚು ವೆಚ್ಚ ಲೆಕ್ಕ ಕೊಟ್ಟ ನವರಸನಾಯಕ 4 ಕ್ಜೋಟಿ ರು ಯಾರು ಕೊಡ್ತಾರೆ ಎಂದು ಕೇಳಿದ್ದರು. ಅಲ್ಲದೆ ನಿಯತ್ತಿಗೆ ಹೆಸರಾದ ಪ್ರಾಣಿಯೊಂದಿದೆ ಎಂದು ಪರೋಕ್ಷವಾಗಿ ರಮ್ಯಾ ಅವರನ್ನು ಕಿಚಾಯಿಸಿದ್ದರು

ರಮ್ಯಾ ಆಕ್ಷೇಪಣೆ
ನಾನು ಈಗ ಜನ ಪ್ರತಿನಿಧಿಯಾಗಿದ್ದೇನೆ. ಸಂಸದೆಯಾದ ನಾನು ಮರಗಳನ್ನು ಸುತ್ತುತ್ತಾ ತುಂಡುಡುಗೆ, ಸ್ಲೀವ್ ಲೆಸ್ ರವಿಕೆ ತೊಟ್ಟು ಚಿತ್ರಗಳಲ್ಲಿ ಕಾಣಿಸಿಕೊಂಡರೆ ಜನ ಒಪ್ಪುವುದಿಲ್ಲ. ಜನರ ಅಭಿಪ್ರಾಯಕ್ಕೆ ತಕ್ಕಂತೆ ನಡೆಯುವುದು ಈಗ ನನ್ನ ಕರ್ತವ್ಯ ಎಂದು ರಮ್ಯಾ ಪ್ರತಿಕ್ರಿಯಿಸಿದ್ದಾರೆ.
ಅಫ್ ಕೋರ್ಸ್ ರಮ್ಯಾ ಅವರ ಉತ್ತರ ನೇರವಾಗಿ ನೀರ್ ದೋಸೆ ತಂಡದ ಕಾದ ಹೆಂಚಿನ ಮೇಲೆ ಬಿದ್ದಿದೆ. ನೀರ್ ದೋಸೆ ಚಿತ್ರದಲ್ಲಿ ರಮ್ಯಾ ಅವರು ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿರುವುದೇ ಇಷ್ಟೆಲ್ಲ ಗೊಂದಲಕ್ಕೆ ಕಾರಣವಾಗಿದೆ.

ರಾಜಕೀಯ ಕುತಂತ್ರ
ಎಲ್ಲಾ ಹನ್ನೆರೆಡಾಣೆ ರಾಜಕಾರಣಿಗಳು ಹೇಳುವಂತೆ ರಮ್ಯಾ ಅವರು ಕೂಡಾ ಇದೊಂದು ರಾಜಕೀಯ ಕುತಂತ್ರ ನನ್ನ ಇಮೇಜ್ ಹಾಳುಗೆಡವಲು ನಡೆಸಿರುವ ಪಿತೂರಿ ಎಂದಿದ್ದಾರೆ. ಅಭಿಮಾನಿಗಳು ನಿಜವಿರಬಹುದು ಕಣ್ಲಾ ಎಂದು ಲೊಚಗುಟ್ಟಿದ್ದಾರೆ.
ಬಿಜೆಪಿ ಶಾಸಕ ಜಗ್ಗೇಶ್ ಹಾಗೂ ಕಾಂಗ್ರೆಸ್ ಸಂಸದೆ ರಮ್ಯಾ ನಡುವಿನ ಕಿತ್ತಾಟಕ್ಕೆ ಈಗ ಕಾಂಗ್ರೆಸ್ ಸಂಸದ, ಚಿತ್ರರಂಗದ ಹಿರಿಯ ನಟ ಅಂಬರೀಷ್ ಮಧ್ಯಸ್ಥಿಕೆ ವಹಿಸುತ್ತಾರಂತೆ ಈ ಬಗ್ಗೆ ಫುಲ್ ಡೀಟೈಲ್ಸ್ ಇಲ್ಲಿ ಓದ್ಕೊಳ್ಳಿ
ಚಿತ್ರದ ನಿರ್ಮಾಪಕ, ನಿರ್ದೇಶಕರಿಗೆ ಇಲ್ಲದ ಕಾಳಜಿ, ಉಸಾಬರಿ ಜಗ್ಗೇಶ್ ಗೆ ಏಕೆ ಎಂದು ಹಲವರು ಪ್ರಶ್ನಿಸಿದ್ದಾರೆ ಕೂಡಾ.

ನಿಂತು ಹೋದ ಟ್ವೀಟ್ ವಾರ್
ಇಂಟರ್ನೆಟ್ ಜಾಲದ ಸಾಮಾಜಿಕ ಜಾಲ ತಾಣ ಮೈಕ್ರೊ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ನಲ್ಲಿ ಜಗ್ಗೇಶ್ ಬಾಣಗಳನ್ನು ಬಿಟ್ಟರೂ ಟ್ವೀಟ್ ಪ್ರಿಯೆ ರಮ್ಯಾ ಸುಮ್ಮನ್ನಿದ್ದದ್ದು ಏಕೆ ಗೊತ್ತಿಲ್ಲ. ಸದ್ಯಕ್ಕಂತೂ ಟ್ವಿಟ್ಟರ್ ವಿಷಯದಲ್ಲಿ ರಮ್ಯಾಗಿಂತ ಜ್ಯೂನಿಯರ್ ಆದ ಜಗ್ಗೇಶ್ ಅವರು ರಮ್ಯಾ ನೀರ್ ದೋಸೆ ಬಗ್ಗೆ ಟ್ವೀಟ್ ಮಾಡುವುದನ್ನು ನಿಲ್ಲಿಸಿದ್ದಾರೆ.
ಇಬ್ಬರು ನೇರ ನುಡಿಗೆ ಹೆಸರಾಗಿದ್ದು ಪ್ರಕರಣ ತಾರಕಕ್ಕೇರಿದ್ದರು ಸುಮ್ಮನಿರುವುದನ್ನು ನೋಡಿದರೆ ಯಾರೋ ಹಿರಿಯರ ಹಿತ ವಚನ ಇಬ್ಬರ ಕಿವಿಗೆ ಬಲವಾಗಿ ತಟ್ಟಿರಬೇಕು ಎನ್ನಿಸುತ್ತದೆ.
ಜಗ್ಗೇಶ್ ಟ್ವೀಟ್
ಜಗ್ಗೇಶ್ ಅವರ ಲೇಟೇಸ್ಟ್ ಟ್ವೀಟ್ಸ್ ನಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿಯ 300 ವರ್ಷದ ಹಳೆ ಪೈಂಟಿಂಗ್, ಕೂಲ್ ಗಣೇಶ ಚಿತ್ರದ ಟ್ರೇಲರ್ ಗಳ ಬಗ್ಗೆ ಇದೆ. ಇದಕ್ಕೂ ಮುನ್ನ ಕಿಚ್ಚ ಸುದೀಪ್ ಅವರನ್ನು ಮಾತನಾಡಿಸಿ ಹೇಗೆ ನಡೆದಿದೆ ಚಿತ್ರೀಕರಣ ಎಂದಿದ್ದಾರೆ.
ರಮ್ಯಾ ಟ್ವೀಟ್
ರಮ್ಯಾ ಅವರ ಟ್ವೀಟ್ ಪುಟ ನೋಡಿದರೆ ಇವರು ಮುಂಚೆ ಚಿತ್ರರಂಗದಲ್ಲಿ ಇದ್ದವರಾ? ಎಂದು ಪ್ರಶ್ನೆ ಏಳುತ್ತದೆ. ಪಕ್ಕಾ ರಾಜಕಾರಣಿ ರೀತಿಯಲ್ಲಿ ಪ್ರಕಾಶ್ ಹುಕ್ಕೇರಿ, ಯುಟಿ ಖಾದರ್, ಕೃಷ್ಣ ಭೈರೇಗೌಡ ಮುಂತಾದ ನಾಯಕರನ್ನು ಭೇಟಿ ಮಾಡಿದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ತಂದೆ ಹೆಸರಿನಲ್ಲಿ ಒಂದು ಟ್ರಸ್ಟ್ ನೋಂದಣಿ ಮಾಡಿಸಿರುವುದು, ಮಂಡ್ಯದಲ್ಲಿ ಮಹಿಳಾ ವಿವಿ, ಟೆನ್ನಿಸ್ ಟೂರ್ನಿ, ಕಮಲ್ ಹಾಸನ್ ಜತೆ ಚಿತ್ರ ಎಲ್ಲವೂ ಕಾಣಬಹುದು. ಆದರೆ, ನೀರ್ ದೋಸೆ ವಾಸನೆಯೂ ಸಿಗುವುದಿಲ್ಲ.

ಕೆಎಫ್ ಸಿಸಿ ಅಂಗಳಕ್ಕೆ
ನೀರ್ ದೋಸೆ ಚಿತ್ರದ ನಿರ್ಮಾಪಕ ಸುಧೀಂದ್ರ ಹಾಗೂ ನಿರ್ದೇಶಕ ವಿಜಯ್ ಕುಮಾರ್ ಅವರು ತಮ್ಮ ಒಳಜಗಳಗಳನ್ನು ಮರೆತು ಕೆಎಫ್ ಸಿಸಿಗೆ ರಮ್ಯಾ ವಿರುದ್ಧ ದೂರು ನೀಡಲು ಸಿದ್ಧತೆ ನಡೆಸಿದ್ದಾರೆ.
ನೀರ್ ದೋಸೆಗಾಗಿ ಜಗ್ಗೇಶ್ ಮೂರು ಚಿತ್ರಗಳನ್ನು ತ್ಯಾಗ ಮಾಡಿದರು. ರಮ್ಯಾ ಅವರು ಅಡ್ವಾನ್ಸ್ ವಾಪಸ್ ಮಾಡುತ್ತೇನೆ ಎಂದಿದ್ದಾರೆ. ಚಿತ್ರದ ಖರ್ಚು ವೆಚ್ಚದ ಕಥೆ ಏನು? ವಾಣಿಜ್ಯ ಮಂಡಳಿ ನಮಗೆ ನ್ಯಾಯ ಕೊಡಿಸಬೇಕು.
ಕಾಲ್ ಶೀಟ್ ಗೆ ಸಹಿ ಹಾಕಿದ್ದ ರಮ್ಯಾ ಅವರು ಈ ರೀತಿ ಕೈಕೊಟ್ಟರೆ ಉಳಿದಿರುವ 40 ದಿನಗಳ ಚಿತ್ರೀಕರಣದ ಗತಿ ಏನು ಎಂದು ನಿರ್ಮಾಪಕರು ಗೋಳಿಟ್ಟಿದ್ದಾರೆ.


Click it and Unblock the Notifications











