ಭೈರತಿ ರಣಗಲ್ ಸಿನಿಮಾವನ್ನು
ನರ್ತನ್ ನಿರ್ದೇಶನ ಮಾಡಿದ್ದಾರೆ. ಇದು ಹ್ಯಾಟ್ರಿಕ್ ಹೀರೋ
ಶಿವರಾಜ್ ಕುಮಾರ್ ಅಭಿನಯಯದ 126ನೇ ಸಿನಿಮಾ. ಚಿತ್ರದಲ್ಲಿ
ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದು, ಉಳಿದಂತೆ ರಾಹುಲ್ ಬೋಸ್, ವಸಿಷ್ಠ ಸಿಂಹ, ಚಾಯಾ ಸಿಂಗ್, ಶಬ್ಬೀರ್ ಕಲ್ಲರಕ್ಕಲ್ ಮುಂತಾದವರು ತಾರಾಗಣದಲ್ಲಿದ್ದಾರೆ. ರವಿ ಬಸ್ರೂರು ಸಂಗೀತ, ನವೀನ್ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ಭೈರತಿ ರಣಗಲ್ ಸಿನಿಮಾವನ್ನು
ಗೀತಾ ಶಿವರಾಜ್ಕುಮಾರ್ ಗೀತಾ ಪಿಚ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ..
ಫ್ರೀಕ್ವೆಲ್ ಸಿನಿಮಾ: 2018ರಲ್ಲಿ ನರ್ತನ್ ನಿರ್ದೇಶನದಲ್ಲಿ ಮೂಡಿಬಂದ ಶಿವಣ್ಣ ಹಾಗೂ ಶ್ರೀಮುರಳಿ ನಟನೆಯ 'ಮಫ್ತಿ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ ಶಿವಣ್ಣನ 'ಭೈರತಿ ರಣಗಲ್' ಪಾತ್ರ ಬಹಳ ಗಮನ ಸೆಳೆದಿತ್ತು. ಮಫ್ತಿ ಚಿತ್ರದಲ್ಲಿನ ಭೈರತಿ ರಣಗಲ್ ಪಾತ್ರವನ್ನು ಪ್ರತ್ಯೇಕ ಕಥೆ ಮಾಡಲಾಗಿದ್ದು, ಇದರಲ್ಲಿ ಶಿವಣ್ಣ ಲಾಯರ್ ಆಗಿಯೂ ಕಾಣಿಸಿಕೊಂಡಿದ್ದಾರೆ.
ಕಥೆ: ರೋಣಾಪುರದ ಮಾಫಿಯಾ ಡಾನ್ ರಣಗಲ್ ಬಂಧನದೊಂದಿಗೆ 'ಮಫ್ತಿ' ಸಿನಿಮಾ ಕಥೆ ಮುಗಿದಿತ್ತು. ಈಗ ರಣಗಲ್ ಜೈಲಿನಲ್ಲಿದ್ದಾನೆ. ಅಲ್ಲಿಂದಲೇ ಕಥೆ ಶುರುವಾಗುತ್ತದೆ. 21 ವರ್ಷಗಳ ಹಿಂದಕ್ಕೆ ಹೋಗುತ್ತದೆ. ರಣಗಲ್ ಬಾಲ್ಯದ ದಿನಗಳು. ಊರಿನಲ್ಲಿ ನೀರಿಗಾಗಿ ಹಾಹಾಕಾರ. ಸರ್ಕಾರಕ್ಕೆ ಎಷ್ಟೇ ಅರ್ಜಿ ಸಲ್ಲಿಸಿದರೂ ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ. ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಬೇಸತ್ತು ಬಾಲಕ ರಣಗಲ್ ಸರ್ಕಾರಿ ಕಛೇರಿಗೆ ಬಾಂಬ್ ಇಟ್ಟು 6 ಜನರನ್ನು ಕೊಲ್ಲುತ್ತಾನೆ. ಮಾಡಿದ ತಪ್ಪಿಗೆ 21 ವರ್ಷ ಶಿಕ್ಷೆ ಆಗುತ್ತದೆ.
ಆದರೆ, ಅವನಿಂದಲೇ ರೋಣಾಪುರಕ್ಕೆ ನೀರು ಬರುವಂತಾಗುತ್ತದೆ. ಈ ಪ್ರಯತ್ನದಲ್ಲಿ ಕಬ್ಬಿಣ್ಣದ ನಿಕ್ಷೇಪ ಇರುವುದು ಪತ್ತೆ ಆಗಿ ಪರಾಡೆ(ರಾಹುಲ್ ಬೋಸ್) ಅಕ್ರಮ ಗಣಿಗಾರಿಕೆ, ಕೈಗಾರಿಕೆ ಆರಂಭಿಸುತ್ತಾನೆ. ರೋಣಾಪುರದ ಸಾವಿರಾರು ಜನ ಆ ಕಾರ್ಖಾನೆಗಳಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಜೈಲಿನಲ್ಲೇ ಓದಿ ವಕೀನಾಗುವ ರಣಗಲ್ ಹೊರಗೆ ಬರುವ ವೇಳೆಗೆ ಪರಾಡೆ ದಬ್ಬಾಳಿಕೆ ಹೆಚ್ಚಾಗಿರುತ್ತದೆ. ಅದರಿಂದ ಕಾರ್ಖಾನೆ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ಬೆಂಬಲಕ್ಕೆ ರಣಗಲ್ ನಿಲ್ತಾನೆ. ಆದರೆ, ಕಾನೂನು ಪ್ರಕಾರ ನ್ಯಾಯ ಕೊಡಿಸಲು ಸಾಧ್ಯವಾಗದೇ ಇದ್ದಾಗ ಅದೇ ಕಾನೂನನ್ನು ಕೈಗೆ ತೆಗೆದುಕೊಳ್ತಾನೆ. ಮುಂದೇನು? ಎನ್ನುವುದು ಸಿನಿಮಾ ಕಥೆ.
ಬಿಡುಗಡೆ: ಭೈರತಿ ರಣಗಲ್ 2024ರ ನವೆಂಬರ್ 15ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.