ದೇವರು ಬೇಕಾಗಿದ್ದಾರೆ (2019)
ದೇವರು ಬೇಕಾಗಿದ್ದಾರೆ ಕಥೆ
ಕೇಂಜ ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ದೇವರು ಬೇಕಾಗಿದ್ದಾರೆ ಚಿತ್ರದಲ್ಲಿ ಡ್ರಾಮಾ ಜೂನಿಯರ್ಸ್ ಖ್ಯಾತಿ ಮಾಸ್ಟರ್ ಅನೂಪ್ ಮುಖ್ಯಪಾತ್ರದಲ್ಲಿ ನಟಿಸಿದ್ದಾನೆ. ಶಿವರಾಮ್, ಪ್ರಸಾದ ವಶಿಷ್ಠ, ಸತ್ಯನಾಥ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಾರಿಜನ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಜ್ಯೂಯೆವಿನ್ ಸಿಂಗ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಬಾಲಕ ಅಪ್ಪು ಬಾಲ್ಯದಲ್ಲಿಯೇ ಒಂದು ಭಯಾನಕ ರಸ್ತೆ ಅಪಘಾತದಲ್ಲಿ ತನ್ನ ತಂದೆ ತಾಯಿಯನ್ನು ಕಳೆದುಕೊಳ್ಳುತ್ತಾನೆ. ನಂತರ ಅಪ್ಪುವನ್ನು ರಂಗಣ್ಣ ಎಂಬುವ ಹಳ್ಳಿ ಮನುಷ್ಯ ಸಾಕಿ ಸಲಹುತ್ತಾನೆ. ತನ್ನ ತಂದೆ ತಾಯಿಯ ಬಗ್ಗೆ ಪದೇ ಪದೇ ರಂಗಣ್ಣನ ಹತ್ತಿರ ಕೇಳಿದಾಗ ರಂಗಣ್ಣನು `ನಿನ್ನ ತಂದೆ ತಾಯಿಯರು ದೇವರ ಹತ್ತಿರ ಹೋಗಿದ್ದಾರೆ'' ಎಂದು ಹೇಳುತ್ತಿರುತ್ತಾನೆ. ರಂಗಣ್ಣ ತೀರಿಹೋದ ನಂತರ ತನ್ನ ತಂದೆ ತಾಯಿಯರನ್ನು ನೋಡಲು ಬಯಸುವ ಅಪ್ಪು ದೇವರನ್ನು ಹುಡಕಾಡುತ್ತ ಬೆಂಗಳೂರಿಗೆ ಬರುತ್ತಾನೆ. ಭಕ್ತ ಪ್ರಹ್ಲಾದ ಚಿತ್ರದಲ್ಲಿ ಪುನೀತ್ ರಾಜಕುಮಾರ್ ದೇವರನ್ನು ಕಂಡಂತೆ ತಾನು ಕಾಣಬೇಕು ಎಂದು ಹಂಬಲಿಸುವ ಅಪ್ಪು ಈ ಮಾಯಾನಗರಿಯಲ್ಲಿ ಹೇಗೆ ದೇವರನ್ನು ಹುಡುಕುತ್ತಾನೆ ಎಂಬುದು ಚಿತ್ರದ ಕಥೆ.
ಜಗತ್ತಿನ ತಿಳುವಳಿಕೆ ಅರಿಯದ ಮುಗ್ದ ಬಾಲಕನೊಬ್ಬ ತೀರಿಹೋದ ತನ್ನ ತಂದೆ ತಾಯಿಗಾಗಿ ದೇವರನ್ನು ಹುಡುಕುವ ಕಥೆಯನ್ನು ಈ ಚಿತ್ರ ಕಟ್ಟಿ ಕೊಡುತ್ತದೆ.