ನರಗುಂದ ಬಂಡಾಯ (2020)
ನರಗುಂದ ಬಂಡಾಯ ಕಥೆ
ಪುಟ್ಟಗೌರಿ ಮದುವೆ ಮತ್ತು ಗಟ್ಟಿಮೇಳ ಸೀರಿಯಲ್ ಖ್ಯಾತಿ ರಕ್ಷ ನಾಯಕನಾಗಿ ನಟಿಸಿರುವ ನರಗುಂದ ಬಂಡಾಯ ಚಿತ್ರ 1980 ರಲ್ಲಿ ಉತ್ತರ ಕರ್ನಾಟಕದ ನರಗುಂದದಲ್ಲಿ ನೆಡೆದ ರೈತ ಚಳುವಳಿ ಆಧಾರಿತವಾಗಿದೆ. ಈ ಚಿತ್ರದಲ್ಲಿ ರಕ್ಷ ಹೋರಾಟಗಾರ `ವೀರಪ್ಪ ಬಸಪ್ಪ ಕಡ್ಲಿಕೊಪ್ಪ' ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಶುಭಾ ಪೂಂಜಾ ಕಾಣಿಸಿಕೊಂಡಿದ್ದಾರೆ. ನಾಗೇಂದ್ರ ಮಾಗಡಿ ಪಂಜು ನಿರ್ದೇಶನದ ಈ ಚಿತ್ರಕ್ಕೆ ಸಿದ್ಧಲಿಂಗಯ್ಯ ಜಿ ವಿರಕ್ತಮಠ ರವರು ಬಂಡವಾಳ ಹೂಡಿದ್ದಾರೆ. ಯಶೋವರ್ಧನ್ ಸಂಗೀತವಿದೆ.
ರೈತ ಚಳುವಳಿ ವೀರಪ್ಪ ಕಡ್ಲಿಕೊಪ್ಪ ನಾಯಕತ್ವದಲ್ಲಿ ಹೇಗೆ ಬಂಡಾಯದ ಸ್ಡರೂಪ ಪಡೆಯಿತು ಎಂಬುದನ್ನು ಚಿತ್ರದ ಪ್ರಮುಖ ಕಥಾವಸ್ತು. ರೈತರು 1980 ಜುಲೈ 21 ರಂದು ನರಗುಂದ ಪಟ್ಟಣದಲ್ಲಿ ಮಲಪ್ರಭಾ ನದಿಯ ಬೆಟರಮೆಂಟ್ ಲೇವಿಯ ಹೆಚ್ಚಳ ವಿರೋಧಿಸಿ ಪ್ರತಿಭಟನೆಯಲ್ಲಿ ತೊಡಗಿದ್ದರು. ಆದರೆ ಪೋಲಿಸರು ಪ್ರತಿಭಟನಾಕಾರರ ಮೇಲೆ ಗೋಲಿಬಾರ್ ಮಾಡಿದರು. ಈ ಗೋಲಿಬಾರ್ ನಲ್ಲಿ ಇಬ್ಬರು ರೈತರು ಹುತಾತ್ಮರಾದರು. ಅಂದಿನಿಂದ ಪ್ರತಿ ವರ್ಷ ಜುಲೈ 21 ನ್ನು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರೈತ ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತದೆ. ಮುಂದೆ ಇದೇ ಹೋರಾಟ ಕಳಸಾ-ಬಂಡೂರಿ ಸ್ವರೂಪದಲ್ಲಿ ಇನ್ನಷ್ಟು ಪ್ರಖರತೆ ಪಡೆಯಿತು.