ಓಂ (1995)(A)
ಓಂ ಕಥೆ
ಓಂ ಕನ್ನಡ ಚಿತ್ರರಂಗದ ಪಾಲಿಗೆ ಎಂಟನೇ ಅದ್ಭುತ ಎಂದು ಬಣ್ಣಿಸಬಹುದಾದ ಚಿತ್ರ. 1995 ರಲ್ಲಿ ತೆರಕಂಡ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ್ ನಾಯಕನಾಗಿ ನಟಿಸಿದರು. ರಿಯಲ್ ಸ್ಟಾರ್ ಉಪೇಂದ್ರ ಚಿತ್ರಕ್ಕೆ ಆಕ್ಸನ್ ಕಟ್ ಹೇಳಿದರೆ ಪಾರ್ವತಮ್ಮ ರಾಜಕುಮಾರ್ ತಮ್ಮ ಶ್ರೀ ವಜ್ರೇಶ್ವರಿ ಕಂಬೈನ್ಸ್ ಅಢಿಯಲ್ಲಿ ಚಿತ್ರ ನಿರ್ಮಿಸಿದರು. ಈ ಚಿತ್ರ ಹಲವು ಬಾರಿ ಮರು ಬಿಡುಗಡೆಯಾಗಿ ಹಲವು ದಾಖಲೆ ನಿರ್ಮಿಸಿದೆ. ಬೆಂಗಳೂರಿನ ಕಪಾಲಿ ಚಿತ್ರಮಂದಿರವೊಂದರಲ್ಲಿಯೇ ಸುಮಾರು 30 ಬಾರಿ ತೆರೆಕಂಡಿದೆ.
ಚಿತ್ರದಲ್ಲಿ ಉಪೇಂದ್ರ ಬೆಂಗಳೂರು ಭೂಗತ ಲೋಕದ ವಾಸ್ತವ ವ್ಯಕ್ತಿಗಳ ದರ್ಶನ ಮಾಡಿಸಿದ್ದಾರೆ. ಚಿತ್ರದ ಹಿನ್ನಲೆ ಸಂಗೀತ ಚಿತ್ರದ ಶಕ್ತಿಯಾಗಿ ಕೆಲಸ ಮಾಡಿತು. ಚಿತ್ರದ ಎಲ್ಲಾ ಗೀತೆಗಳನ್ನು ಹಂಸಲೇಖ ಬರೆದು ಸಂಗೀತ ನೀಡಿದ್ದಾರೆ. ಈ ಚಿತ್ರ ನಂತರ ತೆಲುಗು ಮತ್ತು ಹಿಂದಿಯಲ್ಲಿ ಕೂಡ ರಿಮೇಕ್ ಆಗಿದೆ.
ಚಿತ್ರಕಥೆ.
ಚಿತ್ರದ ಕಥೆ ಒಬ್ಬ ಪತ್ರಕರ್ತೆ ಭೂಗತ ಲೋಕದ ರೌಡಿಗಳನ್ನು ಸಂದರ್ಶನ ಮಾಡುವುದರೊಂದಿಗೆ ಆರಂಭವಾಗುತ್ತದೆ. ತಾನು ಭೇಟಿಯಾದ ಪ್ರತಿ ರೌಡಿಗೂ ಒಬ್ಬ ಬೆಂಗಳೂರಿನ ಪ್ರಸಿದ್ದ ರೌಡಿ ಸತ್ಯನ ಕಥೆಯಿರುವ ಪುಸ್ತಕವನ್ನು ನೀಡುತ್ತಾಳೆ. ನಂತರ ಚಿತ್ರದಲ್ಲಿ ಸತ್ಯನ ಕಥೆ ಆರಂಭವಾಗುತ್ತದೆ.
ಸಾಮಾನ್ಯ ಬಡ ಕುಟುಂಬದ ಯುವಕ ಸತ್ಯ (ಶಿವರಾಜಕುಮಾರ್ )ತಾನಾಯಿತು ತನ್ನ ಓದಾಯಿತು ಎಂದು ತನ್ನ ಪಾಡಿಗೆ ತಾನು ಇರುತ್ತಾನೆ. ಸತ್ಯನ ತಂದೆ ದೇವಸ್ಥಾನದ ಅರ್ಚಕರು, ಸತ್ಯ ಕೂಡ ಆಗಾಗ ತಂದೆಗೆ ಸಹಾಯ ಮಾಡುತ್ತ ದೇವಸ್ಥಾನದಲ್ಲಿ ಪೂಜೆಗೆ ನೆರವಾಗುತ್ತಿರುತ್ತಾನೆ. ಕಾಲೇಜನಲ್ಲಿ ಒಂದು ಹುಡುಗಿಯ ಪ್ರೇಮಪಾಶದಲ್ಲಿ ಬೀಳುವ ಸತ್ಯ ಒಂದು ಘಟನೆಯಿಂದ ರೌಡಿ ಪಟ್ಟ ಪಡೆಯುತ್ತಾನೆ. ನಂತರ ಸತ್ಯನಿಗೆ ಆ ಯುವತಿ ಪ್ರೇಮವು ನಿಜವಲ್ಲ ,ಅದು ಕೇವಲ ಅವನ ಮೇಲಿನ ಸೇಡಿಗಾಗಿ ಆಡಿದ ನಾಟಕ ಎಂದು ತಿಳಿಯುತ್ತದೆ. ಭ್ರಮನಿರಸನಗೊಂಡ ಸತ್ಯ ನಂತರ ಬೆಂಗಳೂರಿನ ಕುಖ್ಯಾತ ರೌಡಿಯಾಗುತ್ತಾನೆ. ನಂತರ ತನ್ನ ಪ್ರೇಯಸಿಗೆ ತಾನು ಅಮಾಯಕ ಎಂದು ನಿರೂಪಿಸಿ, ಪ್ರೇಯಸಿಯ ಒತ್ತಾಯಕ್ಕೆ ಮಣಿದು ರೌಡಿಸಂ ಬಿಟ್ಟು ಸಾಮಾನ್ಯನಾಗಿ ಬದುಕಲು ಒಪ್ಪುತ್ತಾನೆ.