KGF - 2 ಸಾಂಗ್ ತೆಗೆಯುತ್ತೇವೆ, ಟ್ವಿಟರ್ ಖಾತೆ ಬ್ಲಾಕ್ ಮಾಡಬೇಡಿ: ಕಾಂಗ್ರೆಸ್ ಪರ ವಕೀಲರಿಂದ ಹೈಕೋರ್ಟ್ಗೆ ಮನವಿ
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ವಿಡಿಯೋಗೆ ಅನುಮತಿ ಇಲ್ಲದೇ KGF- 2 ಚಿತ್ರದ ಹಾಡನ್ನು ಬಳಸಿದ್ದು ವಿವಾದ ಸೃಷ್ಟಿಸಿತ್ತು. ಅನುಮತಿ ಪಡೆಯದೇ ಈ ಹಾಡು ಬಳಕೆ ಮಾಡಲಾಗಿದೆ ಅಂತ ಆರೋಪಿಸಿ ಎಂಟಿಆರ್ ಮ್ಯೂಸಿಕ್ ಸಂಸ್ಥೆ ಕಾನೂನು ಹೋರಾಟ ಸಾರಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಟ್ವಿಟರ್ ಅಕೌಂಟ್ ಬ್ಲಾಕ್ ಮಾಡಲು ನಿನ್ನೆ (ನವೆಂಬರ್ 7) ಬೆಂಗಳೂರಿನ ಸೆಷನ್ಸ್ ಕೋರ್ಟ್ ಆದೇಶ ನೀಡಿತ್ತು. ಆದರೆ ಟ್ವಿಟ್ಟರ್ ಅಕೌಂಟ್ ಬ್ಲಾಕ್ ಮಾಡದಂತೆ ಕರ್ನಾಟಕ ಕಾಂಗ್ರೆಸ್ ಪರ ವಕೀಲರು ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಟ್ವಿಟರ್ ಹ್ಯಾಂಡಲ್ನಿಂದ KGF- 2 ಹಾಡನ್ನು ಡಿಲೀಟ್ ಮಾಡುತ್ತೇವೆ. ಹಾಗಾಗಿ ಟ್ವಿಟ್ಟರ್ ಹ್ಯಾಂಡಲ್ ಬ್ಲಾಕ್ ಮಾಡುವುದಕ್ಕೆ ತಡೆ ನೀಡಬೇಕು. ಭಾರತ್ ಜೋಡೊ ಯಾತ್ರೆಯ ವಿಡಿಯೋ ಕಾರಣಕ್ಕೆ ಟ್ವಿಟ್ಟರ್ ಅಕೌಂಟ್ ಬ್ಲಾಕ್ ಮಾಡುವುದು ಸರಿಯಲ್ಲ. ಹಾಗಾಗಿ ಆದೇಶದ ಈ ಭಾಗಕ್ಕೆ ತಡೆ ನೀಡಬೇಕು ಎಂದು ಕಾಂಗ್ರೆಸ್ ಪರ ವಕೀಲರು ಹೈಕೋರ್ಟ್ಗೆ ಮನವಿ ಮಾಡಿಕೊಂಡಿದ್ದಾರೆ.
ರಾಹುಲ್ ಗಾಂಧಿಯವರು ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಇಂಥದ್ದೇ ವಿಡಿಯೋವೊಂದಕ್ಕೆ 'KGF- 2' ಚಿತ್ರದ 'ಸುಲ್ತಾನ್' ಹಾಡನ್ನು ಬಳಸಿಕೊಂಡು ಪ್ರಚಾರ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿ ನವೆಂಬರ್ 4 ರಂದು ಯಶವಂತಪುರ ಪೊಲೀಸ್ ಠಾಣೆಗೆ ಎಂಆರ್ಟಿ ಮ್ಯೂಸಿಕ್ ಸಂಸ್ಥೆಯ ಎಂ. ನವೀನ್ ಕುಮಾರ್ ಕಾಪಿರೈಟ್ ಕಾಯ್ದೆ ಅಡಿಯಲ್ಲಿ ದೂರು ನೀಡಿದ್ದರು.

ಭಾರತ್ ಜೋಡೋ ಯಾತ್ರೆಯ ವಿಡಿಯೋಗೆ ಕಾಂಗ್ರೆಸ್ ಪಕ್ಷ, KGF- 2 ಸಿನಿಮಾದ ಹಾಡುಗಳನ್ನು ಬಳಸಿಕೊಂಡಿದೆ. ಈ ಸಂಬಂಧ ಎಂಆರ್ಟಿ ಸಂಸ್ಥೆಯಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಬೆಂಗಳೂರಿನ ಸೆಷನ್ಸ್ ಕೋರ್ಟ್ ಕಾಂಗ್ರೆಸ್ ಪಕ್ಷದ ಟ್ವಿಟ್ಟರ್ ಅಕೌಂಟ್ ಬ್ಲಾಕ್ ಮಾಡುವಂತೆ ಮಹತ್ವದ ಆದೇಶ ನೀಡಿದೆ. ಇದೀಗ ಹಾಡು ಡಿಲೀಟ್ ಮಾಡುತ್ತೇವೆ ಟ್ವಿಟ್ಟರ್ ಅಕೌಂಟ್ ಬ್ಲಾಕ್ ಮಾಡಲು ಅನುಮತಿ ಕೊಡಬೇಡಿ ಎಂದು ಪಕ್ಷದ ಪರ ವಕೀಲರು ಹೈಕೋರ್ಟ್ನಲ್ಲಿ ಮನವಿ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ಟ್ವಿಟ್ಟರ್ ಅಕೌಂಟ್ ಬ್ಲಾಕ್ ಮಾಡುವಂತೆ ಸೆಷನ್ಸ್ ಕೋರ್ಟ್ ನೀಡಿದ ಆದೇಶ ಬಗ್ಗೆ ಪ್ರತಿಕ್ರಿಯಿಸಿರುವ ರಮ್ಯಾ "ಲಹರಿ ವೇಲು ಬಿಜೆಪಿ ಟಿಕೆಟ್ಗಾಗಿ ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಅವರು ಈ ರೀತಿ ಮಾಡುತ್ತಿರುವುದು ಬೇಸರವಾಗುತ್ತಿದೆ. KGF ಚಿತ್ರದ ಹಾಡುಗಳನ್ನು ಎಲ್ಲರೂ ಬಳಸಿಕೊಳ್ಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಬಳಸಿದರೆ ಮಾತ್ರ ಲಹರಿ ವೇಲು ಅವರಿಗೆ ಸಮಸ್ಯೆ ಆಗುತ್ತದೆ" ಎಂದು ರಮ್ಯಾ ವ್ಯಂಗ್ಯವಾಡಿ ಟ್ವೀಟ್ ಮಾಡಿದ್ದರು.

ನಟಿ ರಮ್ಯಾ ಕೂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿ ಆಗಿದ್ದರು. ರಾಯಚೂರಿನಲ್ಲಿ ನಡೆದ ಭಾರತ ಜೋಡೋ ಯಾತ್ರೆಯಲ್ಲಿ ನಾಯಕರ ಜೊತೆ ಹೆಜ್ಜೆ ಹಾಕಿದ್ದರು. ರಾಹುಲ್ ಗಾಂಧಿ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರ ಜೊತೆ ಯಾತ್ರೆಯಲ್ಲಿ ಮಾಜಿ ಸಂಸದೆ ರಮ್ಯಾ ಪಾಲ್ಗೊಂಡಿದ್ದರು.


Click it and Unblock the Notifications











