"ನಾನ್ ಕರ್ನಾಟಕದಲ್ಲಿ ಇರೋದು ಇಷ್ಟ ಇಲ್ಲ ಎನ್ನಿಸುತ್ತೆ" ಎಂದ ಧನಂಜಯ ಪರ ಶುರುವಾಯ್ತು ಅಭಿಯಾನ!
ಡಾಲಿ ಧನಂಜಯ ನಿರ್ಮಿಸಿ ನಟಿಸಿರುವ 'ಹೆಡ್ಬುಷ್' ಚಿತ್ರಕ್ಕೆ ದಿನಕ್ಕೊಂದು ಸಮಸ್ಯೆ ಎದುರಾಗುತ್ತಿದೆ. ಕಳೆದ ಶುಕ್ರವಾರವಷ್ಟೆ ಸಿನಿಮಾ ತೆರೆಗೆ ಬಂದಿತ್ತು. ದೃಶ್ಯವೊಂದರಲ್ಲಿ ವೀರಗಾಸೆ ಕಲೆಗೆ ಅಪಮಾನ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಅದಕ್ಕೆ ಧನು ಸ್ಪಷ್ಟನೆ ಕೊಡುವ ವೇಳೆಗೆ ಬೆಂಗಳೂರು ಕರಗ ಸಮಿತಿ ಕೂಡ ಚಿತ್ರದ ಕೆಲ ದೃಶ್ಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಇದೆಲ್ಲದರ ನಡುವೆ ಧನಂಜಯ ಪರ ಸಾಕಷ್ಟು ಜನ ನಿಂತಿದ್ದಾರೆ.
ಬೆಂಗಳೂರು ಭೂಗತಲೋಕದ ಕಥೆಯನ್ನು ನಿರ್ದೇಶಕ ಶೂನ್ಯ 'ಹೆಡ್ಬುಷ್' ಚಿತ್ರದಲ್ಲಿ ಹೇಳಿದ್ದಾರೆ. ಅಗ್ನಿ ಶ್ರೀಧರ್ ಚಿತ್ರಕ್ಕೆ ಕಥೆ ಚಿತ್ರಕಥೆ ಒದಗಿಸಿದ್ದು ಡಾನ್ ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ ದರ್ಬಾರ್ ನಡೆಸಿದ್ದಾರೆ. ಕಲಾಸಿಪಾಳ್ಯದ ಸುತ್ತಾಮುತ್ತ ಪೇಟೆಗಳಲ್ಲಿ ಜಯರಾಜ್ ಅಂಡ್ ಗ್ಯಾಂಡ್ ಆರ್ಭಟ ಜೋರಾಗಿತ್ತು. ಅವತ್ತಿನ ಕಾಲಘಟ್ಟವನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಅದಕ್ಕೆ ತಕ್ಕಂತೆ ವಿಶ್ವವಿಖ್ಯಾತ ಕರಗ ಆಚರಣೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ಅದೇ ಸನ್ನಿವೇಶದಲ್ಲಿ ನಡೆಯುವ ಆಕ್ಷನ್ ದೃಶ್ಯವೊಂದರಲ್ಲಿ ವೀರಗಾಸೆ ಕಲೆಗೆ ಅಪಮಾನ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಇನ್ನು ಚಿತ್ರದಲ್ಲಿ ಕರಗ ಆಚರಣೆಯನ್ನು ಕೂಡ ಬೇಕಾ ಬಿಟ್ಟಿ ತೋರಿಸಿದ್ದಾರೆ ಎಂದು ವಹ್ನಿಕುಲ ಕ್ಷತ್ರಿಯ ಹಾಗೂ ತಿಗಳ ಸಮುದಾಯದ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ. ಕೆಲ ಸನ್ನಿವೇಶಗಳನ್ನು, ಕೆಲ ಪದಗಳನ್ನು ತೆಗೆಯುವಂತೆ ಕೇಳಿಕೊಂಡಿದ್ದಾರೆ. ಆದರೆ ಇದಕ್ಕೆ ಚಿತ್ರತಂಡ ತಿರುಗೇಟು ನೀಡಿದೆ. "ನಾನು ಇಂಡಸ್ಟ್ರಿಲಿ ಇರೋದು ಕೆಲವರಿಗೆ ಇಷ್ಟ ಇಲ್ಲ ಎನ್ನಿಸುತ್ತೆ" ಎಂದು ಧನು ಹೇಳಿದ್ದಾರೆ.

ಪದೇ ಪದೇ ತೊಂದರೆ ಕೊಡುತ್ತಿದ್ದಾರೆ
ಎಲ್ಲಾ ಆರೋಪಗಳಿಗೆ ಚಿತ್ರತಂಡ ತಿರುಗೇಟು ನೀಡಿದೆ. ನಾವು ಯಾವುದೇ ಸಮುದಾಯದವರ ಮನಸ್ಸಿಗೂ ನೋವುಂಟು ಆಗುವಂತೆ ಸಿನಿಮಾ ಮಾಡಿಲ್ಲ. ಕರಗ ಮಾಡುವವರು, ವೀರಗಾಸೆ ಕಲಾವಿದರ ಸಲಹೆ ಸೂಚನೆ ಪಡೆದು ಸಿನಿಮಾ ಮಾಡಿದ್ದೀವಿ. ಸುಖಾಸುಮ್ಮನೆ ಆರೋಪ ಮಾಡಬೇಡಿ ಎಂದು ಧನಂಜಯ ಹೇಳಿದ್ದಾರೆ. ಯಾಕೆ ಆ ದೃಶ್ಯ ಬರುತ್ತದೆ ಎನ್ನುವುದನ್ನು ವಿವರಿಸಿದ್ದಾರೆ. ಇನ್ನು ಇದೇ ವಿಚಾರವಾಗಿ ನ್ಯೂಸ್ಫಸ್ಟ್ ಸುದ್ದಿವಾಹಿನಿಗೆ ಧನು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೆಲ್ಲಾ ನೋಡುತ್ತಿದ್ದರೆ "ಕೆಲವರಿಗೆ ನಾನು ಇಂಡಸ್ಟ್ರಿಯಲ್ಲಿ ಕರ್ನಾಟಕದಲ್ಲಿ ಇರೋದು ಇಷ್ಟ ಇಲ್ಲ ಎನಿಸುತ್ತೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

#WeStandWithDhananjaya ಅಭಿಯಾನ
ಸಾಕಷ್ಟು ಜನ ಧನಂಜಯ ಪರ ಬೆಂಬಲ ಸೂಚಿಸುತ್ತಿದ್ದಾರೆ. ಚಿತ್ರದಲ್ಲಿ ಯಾವುದೇ ಅಪಮಾನ ಆಗಿಲ್ಲ. ಕೆಲವರು ಸಿನಿಮಾ ನೋಡದೇ ಏನೇನೋ ಮಾತನಾಡುತ್ತಿದ್ದಾರೆ. ಮೊದಲು ಸಿನಿಮಾ ನೋಡಿ, ಧನಂಜಯ ಅವರನ್ನು ಸುಖಾಸುಮ್ಮನೆ ಟಾರ್ಗೆಟ್ ಮಾಡಬೇಡಿ, ಸಿನಿಮಾವನ್ನು ಸಿನಿಮಾ ರೀತಿ ನೋಡಿ ಎನ್ನುತ್ತಿದ್ದಾರೆ. #WeStandWithDhananjaya ಹಾಗೂ #SupportDhananjaya ಹ್ಯಾಷ್ಟ್ಯಾಗ್ ಕ್ರಿಯೇಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಶುರು ಮಾಡಿದ್ದಾರೆ.

3 ದಿನಕ್ಕೆ 9 ಕೋಟಿ ಬಾಚಿದ 'ಹೆಡ್ಬುಷ್'
ಶುಕ್ರವಾರ ರಿಲೀಸ್ ಆಗಿದ್ದ ಸಿನಿಮಾ ಮೊದಲ ದಿನವೇ 4.23 ಕೋಟಿ ರೂ. ಕಲೆಕ್ಷನ್ ಮಾಡಿ ಸದ್ದು ಮಾಡಿತ್ತು. ಫಸ್ಟ್ ವೀಕೆಂಡ್ನಲ್ಲಿ 9 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ. ಚಿತ್ರದಲ್ಲಿ ಧನಂಜಯ ಜೊತೆಗೆ ಲೂಸ್ ಮಾದ ಯೋಗಿ, ಪಾಯಲ್ ರಜಪೂತ್, ಶ್ರುತಿ ಹರಿಹರನ್, ವಸಿಷ್ಠ ಸಿಂಹ, ದೇವರಾಜ್ ಸೇರಿದಂತೆ ಭಾರೀ ತಾರಾಗಣ ಇದೆ. ಮಿಶ್ರ ಪ್ರತಿಕ್ರಿಯೆ ನಡುವೆಯೂ ಸಿನಿಮಾ ಭರ್ಜರ ಪ್ರದರ್ಶನ ಕಾಣುತ್ತಿದೆ.

ಈ ಶುಕ್ರವಾರದಿಂದ ಥಿಯೇಟರ್ ಸಮಸ್ಯೆ
ಈಗಾಗಲೇ 'ಕಾಂತಾರ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೇ ಶುಕ್ರವಾರ ಪುನೀತ್ ರಾಜ್ಕುಮಾರ್ ಅವರ 'ಗಂಧದಗುಡಿ' ಡಾಕ್ಯುಡ್ರಾಮ ಸಿನಿಮಾ ತೆರೆಗೆ ಬರಲಿದೆ. ಹಾಗಾಗಿ 'ಹೆಡ್ಬುಷ್' ಚಿತ್ರಕ್ಕೆ ಥಿಯೇಟರ್ ಸಮಸ್ಯೆ ಎದುರಾಗುವ ಸುಳಿವು ಸಿಗುತ್ತಿದೆ. ಮೇನ್ ಥಿಯೇಟರ್ಗಳೆಲ್ಲಾ ಗಂಧದಗುಡಿ ಪಾಲಾಗುವ ಸಾಧ್ಯತೆಯಿದೆ. ಅಂದಹಾಗೆ ಜೀ ಸಂಸ್ಥೆಗೆ ಚಿತ್ರದ ಥಿಯೇಟ್ರಿಕಲ್, ಡಿಜಿಟಲ್, ಸ್ಯಾಟಲೈಟ್ ರೈಟ್ಸ್ 22 ಕೋಟಿ ರೂ.ಗೆ ಮಾರಾಟವಾಗಿತ್ತು.


Click it and Unblock the Notifications











