ಸೃಜನ್ ಲೋಕೇಶ್- ಸಚಿವ ವಿ. ಸೋಮಣ್ಣ ಪುತ್ರನ ಮಧ್ಯೆ ಗಲಾಟೆ? ತಂದೆ - ಮಗ ಏನಂದ್ರು?
ನಟ ಸೃಜನ್ ಲೋಕೇಶ್ ಹಾಗೂ ಸಚಿವರಾದ ವಿ. ಸೋಮಣ್ಣನ ಪುತ್ರ ಅರುಣ್ ಸೋಮಣ್ಣ ಟೀಮ್ ನಡುವೆ ಕ್ಲಬ್ವೊಂದರಲ್ಲಿ ಗಲಾಟೆ ನಡೆದಿದೆ. ಸೋಮವಾರ ರಾತ್ರಿ ಮುದ್ದಿನ ಪಾಳ್ಯದ ಕಿಂಗ್ಸ್ ಕ್ಲಬ್ನಲ್ಲಿ ಈ ಗಲಾಟೆ ನಡೆದಿದೆ. 'ಅಪ್ಪು ಬ್ಯಾಡ್ಮಿಂಟನ್ ಕಪ್' ಪ್ರಾಕ್ಟೀಸ್ ನಂತರ ಸೃಜನ್ ಲೋಕೇಶ್ ಮತ್ತವರ ತಂಡ ಕ್ಲಬ್ನಲ್ಲಿ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಅರುಣ್ ಸೋಮಣ್ಣ ಮತ್ತವರ ತಂಡ ಸ್ಥಳಕ್ಕೆ ಬಂದಾಗ ಗಲಾಟೆ ನಡೆದಿದೆ ಎನ್ನಲಾಗ್ತಿದೆ.
ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ನಟ ಸೃಜನ್ ಲೋಕೇಶ್ ಗುರ್ತಿಸಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ನೆನಪಿನಲ್ಲಿ ಆಯೋಜಿಸಿರುವ 'ಅಪ್ಪು ಕಪ್' ಸ್ಯಾಂಡಲ್ ವುಡ್ ಬ್ಯಾಡ್ಮಿಂಟನ್ ಲೀಗ್ ನ ಲೋಗೋ, ಜರ್ಸಿ, ಥೀಮ್ ಸಾಂಗ್ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ನಡೆದಿತ್ತು. ನಟ ಸೃಜನ್ ಲೋಕೇಶ್ ಟೂರ್ನಿಯಲ್ಲಿ 'ರಾಜಕುಮಾರ್ ಕಿಂಗ್ಸ್' ತಂಡದ ಕ್ಯಾಪ್ಟನ್ ಆಗಿದ್ದಾರೆ. ತಮ್ಮ ತಂಡದ ಜೊತೆ ಪ್ರತಿದಿನ ಕಿಂಗ್ಸ್ ಕ್ಲಬ್ ಕೋರ್ಟ್ನಲ್ಲಿ ಬ್ಯಾಡ್ಮಿಂಟನ್ ಪ್ರಾಕ್ಟೀಸ್ ನಡೆಸುತ್ತಿದ್ದರು. ಪ್ರಾಕ್ಟೀಸ್ ನಂತರ ಸಂಜೆ ಕ್ಲಬ್ನಲ್ಲಿ ಎಲ್ಲರೂ ಪಾರ್ಟಿ ಮಾಡುವ ವೇಳೆ ಕಿರುಚಾಡುತ್ತಿದ್ದರಂತೆ. ಈ ವೇಳೆ ಅರುಣ್ ಸೋಮಣ್ಣ ಮತ್ತವರ ತಂಡ ಅಲ್ಲಿಗೆ ಬಂದಿದೆ. ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ.
ಕಿಂಗ್ಸ್ ಕ್ಲಬ್ನಲ್ಲಿ ನಡೆದಿರುವ ಸೃಜನ್ ಲೋಕೇಶ್ ಹಾಗೂ ಅರುಣ್ ಸೋಮಣ್ಣ ಟೀಂ ನಡುವೆ ನಡೆದಿರುವ ಗಲಾಟೆ ಬಗ್ಗೆ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ. ಸಿಸಿಟಿವಿ ಫುಟೇಜ್ ಕೂಡ ಅಳಿಸಿ ಹಾಕಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಕ್ಲಬ್ ಮಾಲೀಕರು ಇಲ್ಲ ಗಲಾಟೆ ನಡದೇ ಇಲ್ಲ ಎನ್ನುತ್ತಿದ್ದಾರೆ. ಪಾರ್ಕಿಂಗ್ನಲ್ಲಿ ಮಾತಿಗೆ ಮಾತು ಬೆಳೆದಿತ್ತು ಅಲ್ಲಿಗೆ ಅದು ಸುಖಾಂತ್ಯ ಆಯಿತು ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ವಿರೋಧ ಬಣದಿಂದ ಸುಳ್ಳು ಆರೋಪ
ಇನ್ನು ಈ ಆರೋಪದ ಬಗ್ಗೆ ನ್ಯೂಸ್ ಫಸ್ಟ್ ವಾಹಿನಿಗೆ ಪ್ರತಿಕ್ರಿಯೆ ನೀಡಿರುವ ಸಚಿವರಾದ ವಿ. ಸೋಮಣ್ಣನ ಪುತ್ರ ಅರುಣ್ ಸೋಮಣ್ಣ "ಏನೂ ಆಗೇಯಿಲ್ಲ. ಇದು ವಿರೋಧಿಗಳ ಪಿತೂರಿ ಬಿಟ್ಟರೆ ಬೇರೆ ಏನೂ ಅಲ್ಲವೇ ಅಲ್ಲ. ಹೊಡೆದಾಟ ಅಲ್ಲ, ನಾನು ಸೃಜನ್ ಲೋಕೇಶ್ ಅವರನ್ನು ಭೇಟಿ ಕೂಡ ಮಾಡಿಲ್ಲ. ನಾನು ಅವರ ಕೈಕುಲುಕಿಲ್ಲ. ಇನ್ನು ಹೊಡೆದಾಟ ಎಲ್ಲಿಂದ ಬಂತು ಎಂದಿದ್ದಾರೆ. ನನ್ನ ಮತ್ತು ತಂದೆಯವರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ. ವಿರೋಧ ಬಣದವರು ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡಿಲ್ಲ. ತಂದೆಯವರು ಇತಿಹಾಸ ನಿರ್ಮಿಸುವಂತಹ ಕೆಲಸ ಮಾಡಿದ್ದಾರೆ. ಇದನ್ನೆಲ್ಲಾ ನೋಡಿ ತಡೆಯೋಕೆ ಸಾಧ್ಯವಿಲ್ಲದೇ ಇಂತಹ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇಷ್ಟು ದಿನ ನಮ್ಮ ತಂದೆಯವರ ಬಗ್ಗೆ ಆರೋಪ ಮಾಡುತ್ತಿದ್ದರು. ಈಗ ನನ್ನ ಬಗ್ಗೆ ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.

"ರಾಜಕೀಯಪ್ರೇರಿತ ಆರೋಪ"
"ಕೃಷ್ಣಪ್ಪ ಹಾಗೂ ಪ್ರಿಯಾ ಕೃಷ್ಣ ಈ ಕೆಲಸ ಮಾಡುತ್ತಿದ್ದಾರೆ. ನಾನು ಯಾರ ಬಗ್ಗೆಯೂ ಆರೋಪ ಮಾಡುತ್ತಿಲ್ಲ. ಇವರನ್ನು ಬಿಟ್ಟರೆ ಈ ರೀತಿ ಷಡ್ಯಂತ್ರ ಮಾಡುವವರು ಯಾರು ಇಲ್ಲ. ಸೃಜನ್ ಲೋಕೇಶ್ ನನಗೆ ಪರಿಚಯವೇ ಇಲ್ಲ. ಅವರ ನಂಬರ್ ಕೂಡ ಇಲ್ಲ. ಮಾಧ್ಯಮಗಳಲ್ಲಿ ನೋಡಿದ ಮೇಲೆ ನನಗೆ ಗೊತ್ತಾಗಿದ್ದು. ಸೃಜನ್ ಲೋಕೇಶ್ ಸಿನಿಮಾ ನೋಡಿ ಎಂಜಾಯ್ ಮಾಡುತ್ತೇನೆ. ಆದರೆ ಅವರ ಪರಿಚಯ ನನಗಿಲ್ಲ. ಅವರು ಅದ್ಭುತ ನಟ. ಅವರ ಬಗ್ಗೆ ಅಪಾರವಾದ ಗೌರವ ಇದೆ. ಅದು ಬಿಟ್ಟು ಬೇರೇನು ಇಲ್ಲ. ಇದು ಕೇವಲ ಕ್ಷುಲ್ಲಕ ಆರೋಪ ಅಷ್ಟೆ. ರಾಜಕೀಯಪ್ರೇರಿತ ಆರೋಪ ಮಾಡಿದ್ದಾರೆ. ಸೃಜನ್ ಅವರನ್ನು ಮಧ್ಯೆ ಎಳೆದು ತಂದಿದ್ದಾರೆ. ಅವರಿಗೂ ಇದಕ್ಕೂ ಸಂಬಂಧವಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.

ಸಚಿವ ವಿ. ಸೋಮಣ್ಣ ಪ್ರತಿಕ್ರಿಯೆ
ಚಾಮರಾಜ ನಗರದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರಾದ ವಿ. ಸೋಮಣ್ಣ "ಗೊತ್ತಿಲ್ಲದೇ ಇರುವುದಕ್ಕೆ ಹಿಟ್ ಅಂಡ್ ರನ್ ಕೆಲಸ ಬೇಡ. ನಾನು ಒಬ್ಬ ರಾಜಕಾರಣಿ. ಯಾರಾದರೂ ತಪ್ಪು ಮಾಡಿದ್ದರೆ ತಪ್ಪೇ. ಆ ರೀತಿ ನನಗೆ ಯಾವುದೇ ಮಾಹಿತಿ ಇಲ್ಲ. ನನ್ನ ಮಗ ಹತ್ತು ಹನ್ನೆರಡು ವರ್ಷದಿಂದ ನನ್ನ ಬಿಟ್ಟು ಬೇರೆ ಮನೆಯಲ್ಲಿ ಇದ್ದಾನೆ. ಏನೇನೋ ಮಾತನಾಡುವುದರಲ್ಲಿ ಅರ್ಥವಿಲ್ಲ. ನನಗೆ ಈ ಬಗ್ಗೆ ಕಿಂಚಿತ್ತೂ ಮಾಹಿತಿ ಇಲ್ಲ" ಎಂದಿದ್ದಾರೆ.

ಪ್ರತ್ಯಕ್ಷದರ್ಶಿ ಮಾತು
ಇನ್ನು ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. "ನಾನು 'ರಾಜಕುಮಾರ್ ಕಿಂಗ್ಸ್' ತಂಡದ ಆಟಗಾರ. 8ರಿಂದ 10.30ರವಗೆ ಪ್ರಾಕ್ಟೀಸ್ ಇತ್ತು. ಊಟ, ಮೀಟಿಂಗ್ ಇತ್ತು. ಸೃಜನ್ ಸರ್ ಸಹ ಇದ್ದರು. ಎಲ್ಲಾ ಮುಗಿದಮೇಲೆ ಎಲ್ಲರನ್ನು ಮನೆಗೆ ಕಳುಹಿಸಿಕೊಡುವ ಜವಾಬ್ದಾರಿಯನ್ನು ಸೃಜನ್ ಲೋಕೇಶ್ ವಹಿಸಿಕೊಂಡಿದ್ದರು. ಎಲ್ಲರಿಗೂ ವಾಹನದ ವ್ಯವಸ್ಥೆ ಆಗಿತ್ತು. ನನಗೆ ಆಟೋ, ಕ್ಯಾಬ್ ಸಿಗಲಿಲ್ಲ. ಬೇರೆ ದಾರಿಯಲ್ಲದೇ ನಾನು ಅರುಣ್ ಸೋಮಣ್ಣ ಪಿಎಗೆ ಕರೆ ಮಾಡಿ ಕಾರ್ ಕಳುಹಿಸಿಕೊಡುವಂತೆ ಕೇಳಿದ್ದೆ. ಯಾಕೆಂದರೆ ನಮ್ಮ ಮನೆ ಬಳಿ ಅವರ ಮನೆ ಇರುವುದು. ಹಾಗಾಗಿ ಸಹಾಯ ಕೇಳಿದ್ದೆ. ಕರೆ ಮಾಡಿದ 10 ನಿಮಿಷಕ್ಕೆ ಕಾರ್ ಬಂತು. ಅರುಣ್ ಸರ್ ಸ್ಥಳಕ್ಕೆ ಬಂದೇ ಇಲ್ಲ. ಹಾಗಾಗಿ ಇಲ್ಲಿ ಅರುಣ್ ಸೋಮಣ್ಣ ಅವರ ಹೆಸರು ಯಾಕೆ ಬಂತು ಎನ್ನುವುದು ಗೊತ್ತಿಲ್ಲ" ಎಂದು ಹೇಳಿದ್ದಾರೆ.


Click it and Unblock the Notifications











