ಮಹಾಭಾರತ ಧಾರವಾಹಿ ನೋಡಬೇಡಿ: ಹಿರಿಯ ನಟನ ಹಳೆಯ ವಿಡಿಯೋ ವೈರಲ್
ಇದೀಗ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಡಬ್ ಆಗಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ಧಾರವಾಹಿ ಅಲ್ಪ ಸಮಯದಲ್ಲಿ ಕೋಟ್ಯಂತರ ಮಂದಿಯ ಇಷ್ಟದ ಧಾರಾವಾಹಿ ಆಗಿದೆ.
2013 ರಲ್ಲಿ ಹಿಂದಿಯಲ್ಲಿ ಪ್ರಸಾರವಾಗಿದ್ದ ಮಹಾಭಾರತದ ಧಾರಾವಾಹಿ ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ಡಬ್ ಆಗಿ ಪ್ರಸಾರಗೊಳ್ಳುತ್ತಿದೆ. ಧಾರಾವಾಹಿಯ ಅದ್ಧೂರಿ ಸೆಟ್ಗಳು, ಹಿನ್ನೆಲೆ ಸಂಗೀತ, ನಟ-ನಟಿಯರ ಕಾರಣದಿಂದ ಧಾರಾವಾಹಿ ಅಲ್ಪ ಸಮಯದಲ್ಲಿಯೇ ಅಭಿಮಾನಿಗಳನ್ನು ಪಡೆದುಕೊಂಡಿದೆ.
ಆದರೆ ಈ ಮಹಾಭಾರತ ಧಾರಾವಾಹಿಯನ್ನು ನೋಡಬೇಡಿ ಎಂದು ಹಿರಿಯ ನಟ ಮುಖೇಶ್ ಖನ್ನಾ ಸಾರ್ವಜನಿಕ ಭಾಷಣದಲ್ಲಿ ಹೇಳುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದ್ದು. ಈ ಬಗ್ಗೆ ಚರ್ಚೆಗಳು ಸಹ ಪ್ರಾರಂಭವಾಗಿದೆ.

ಶಕ್ತಿಮಾನ್ ಪಾತ್ರದ ಮೂಲಕ ಪರಿಚಿತರು ಮುಕೇಶ್ ಖನ್ನಾ
ಶಕ್ತಿಮಾನ್ ಪಾತ್ರದ ಮೂಲಕ ದೇಶದಾದ್ಯಂತ ಖ್ಯಾತರಾಗಿದ್ದ ಮುಕೇಶ್ ಖನ್ನಾ ಮೊದಲು ದೂರದರ್ಶನದಲ್ಲಿ ಪ್ರಸಾರವಾದ ಮಹಾಭಾರತ ಧಾರಾವಾಹಿಯಲ್ಲಿ ಭೀಷ್ಮ ಪಾತ್ರಧಾರಿಯಾಗಿದ್ದರು. ಅವರು ಸಾರ್ವಜನಿಕ ಭಾಷಣವೊಂದರಲ್ಲಿ ಹೊಸ ಮಹಾಭಾರತ ಧಾರಾವಾಹಿಯನ್ನು ಯಾರೂ ನೋಡಬೇಡಿ ಎಂದು ಈ ಹಿಂದೆ ಹೇಳಿದ್ದರು.

ಸಂಸ್ಕೃತಿಗೆ ಅಪಮಾನ ಮಾಡಲಾಗಿದೆ: ಮುಕೇಶ್
ಹೊಸ ಮಹಾಭಾರತ ಧಾರಾವಾಹಿಯಲ್ಲಿ ಸಂಸ್ಕೃತಿಗೆ, ಸಂಸ್ಕಾರಕ್ಕೆ ಅಪಮಾನ ಮಾಡಲಾಗಿದೆ. ಕತೆಯನ್ನು ತಿರುಚಲಾಗಿದೆ. ವ್ಯಾಸ ಮುನಿ ಬರೆದ ಕತೆಗಿಂತಲೂ ಭಿನ್ನವಾದ ಎಳೆಗಳನ್ನು ತರಲಾಗಿದೆ. ಕತೆಗೆ ಅಪಚಾರ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಂಡವರು ಮಾಡೆಲ್ಗಳಂತೆ ಕಾಣುತ್ತಾರೆ: ಮುಕೇಶ್
ಹೊಸ ಮಹಾಭಾರತದ ಪಾಂಡವರು ಮಾಡೆಲ್ಗಳಂತೆ ಕಾಣುತ್ತಾರೆ. ಧೃತರಾಷ್ಟ್ರನನ್ನು ಸಿಕ್ಸ್ ಪ್ಯಾಕ್ಸ್ ಧೃತರಾಷ್ಟ್ರನನ್ನಾಗಿಸಲಾಗಿದೆ. ದ್ರೌಪದಿಯನ್ನು ಮಾಡೆಲ್ ನಂತೆ ಮಾಡಲಾಗಿದೆ. ಸತ್ಯವತಿ ರಾಕ್ಷಸಿಯಂತೆ ಕಾಣುತ್ತಾಳೆ ಎಂದು ವ್ಯಂಗ್ಯವಾಡಿದ್ದಾರೆ ಮುಕೇಶ್ ಖನ್ನಾ.

ದ್ರೌಪದಿಯ ಬೆನ್ನಿಗೆ ಟ್ಯಾಟೂ!
2008 ರಲ್ಲಿ ಏಕ್ತಾ ಕಪೂರ್ ನಿರ್ಮಿಸಿದ್ದ ಮಹಾಭಾರತ ದ ಬಗ್ಗೆಯೂ ಆಕ್ಷೇಪಣೆ ಎತ್ತಿದ್ದ ಮುಕೇಶ್ ಖನ್ನಾ, ಏಕ್ತಾ ಕಪೂರ್ ನಿರ್ಮಿಸಿದ್ದ ಧಾರಾವಾಹಿಯಲ್ಲಿ ದ್ರೌಪದಿಯ ಬೆನ್ನಿಗೆ ಟ್ಯಾಟೂ ಹಾಕಲಾಗಿತ್ತು ಎಂದಿದ್ದಾರೆ. ಧಾರಾವಾಹಿ ಪ್ರಸಾರವಾದಾಗಲೂ ಅವರು ಆಕ್ಷೇಪಣೆ ಎತ್ತಿದ್ದರು.


Click it and Unblock the Notifications











