ಹಿಂದಿ ಭಾಷೆಗೆ ರಿಮೇಕ್ ಅದ ಕನ್ನಡದ ಮೆಗಾ ಧಾರಾವಾಹಿ
ಕೆಲ ಧಾರಾವಾಹಿಗಳು ಎಷ್ಟು ವರ್ಷವಾದರೂ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದಂತೆ ಉಳಿದು ಬಿಡುತ್ತವೆ. ಧಾರಾವಾಹಿಯ ಕಥೆ, ಅದರಲ್ಲಿ ಬರುವ ಪಾತ್ರಗಳು, ಅವರ ವೇಷಭೂಷಣಗಳನ್ನು ಮರೆಯುವುದೇ ಇಲ್ಲ. ಅಂತಹ ಧಾರಾವಾಹಿಗಳ ಸಾಲಿನಲ್ಲಿ ಅಗ್ನಿಸಾಕ್ಷಿಯೂ ಇದೆ.
ಅಗ್ನಿಸಾಕ್ಷಿ ಧಾರಾವಾಹಿ ಸುಮಾರು 7 ವರ್ಷಗಳ ಕಾಲ ಪ್ರಸಾರವನ್ನು ಕಂಡಿತ್ತು. ಕೆಲ ಪಾತ್ರಗಳು ಬದಲಾದರೂ ಕೂಡ ಧಾರಾವಾಹಿ ಮೇಲಿನ ಕುತೂಹಲಗಳು ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟುಕೊಂಡಿದ್ದವು.
ಕೆಲವರಂತೂ ಈ ಧಾರಾವಾಹಿ ಈಗಲೇ ಮುಗಿಯೋದಿಲ್ವಾ ಎಂದು ಮೂಗು ಮುರಿಯತ್ತಿದ್ದರು. ಆದರೆ, ರಾತ್ರಿ ಸೀರಿಯಲ್ ಆರಂಭವಾಗುವ ವೇಳೆಗೆ ಮಿಸ್ ಮಾಡದೇ ನೋಡುತ್ತಿದ್ದರು. ಅಷ್ಟರ ಮಟ್ಟಕ್ಕೆ ಅಗ್ನಿಸಾಕ್ಷಿ ಧಾರಾವಾಹಿ ಎಲ್ಲರ ಮನ ಗೆಲ್ಲುವುದರಲ್ಲಿ ಯಶಸ್ವಿಯಾಗಿತ್ತು.

ವರ್ಷಗಟ್ಟಲೆ ಪ್ರಸಾರವಾದ ಧಾರಾವಾಹಿ
ಅಗ್ನಿಸಾಕ್ಷಿ ಧಾರಾವಾಹಿ ಶುರುವಾಗಿದ್ದೇ ವಿಚಿತ್ರವಾಗಿ. ಲಕ್ಷ್ಮೀ ಬಾರಮ್ಮ ಸೀರಿಯಲ್ ಅಗ್ನಿಸಾಕ್ಷಿ ಧಾರಾವಾಹಿಯ ದೊಡ್ಡಮ್ಮ ಎಂದರೆ ತಪ್ಪಾಗಲಾರದು. ಹಲವು ವರ್ಷಗಳ ಕಾಲ ಮೂಡಿ ಬಂದ ಲಕ್ಷ್ಮೀಬಾರಮ್ಮ ಹಾಗೂ ಅಶ್ವಿನಿ ನಕ್ಷತ್ರ ಧಾರಾವಾಹಿಗಳ ಮೂಲಕ ಅಗ್ನಿಸಾಕ್ಷಿ ಧಾರಾವಾಹಿ ಹುಟ್ಟಿಕೊಂಡಿತು. ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಸಿದ್ಧಾರ್ಥ್ ಪಾತ್ರ ಹುಟ್ಟಿಕೊಂಡಿತ್ತು. ಈ ಪಾತ್ರವೇ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಾಯಕನಾಗಿ ಮಿಂಚಿದ್ದು. ಇನ್ನು ಅಶ್ವಿನಿ ನಕ್ಷತ್ರ ಸೀರಿಯಲ್ ನಲ್ಲಿ ಸನ್ನಿಧಿ ಪಾತ್ರವೇ ಅಗ್ನಿಸಾಕ್ಷಿಯಲ್ಲಿ ನಟಿಸಿದ ವೈಷ್ಣವಿ ಗೌಡ. ಹೀಗೆ ಬೇರೆ ಧಾರಾವಾಹಿಗಳಲ್ಲಿ ಹುಟ್ಟಿದ ಪಾತ್ರಗಳು ಕೊನೆಗೆ ಮೆಗಾ ಸೀರಿಯಲ್ ನಾಯಕ-ನಾಯಕಿಯರಾಗಿದ್ದು ಇದೇ ಮೊದಲು.

ಪ್ರೇಕ್ಷಕರ ಮನದಲ್ಲಿ ಉಳಿದ ಧಾರಾವಾಹಿ
2013ರಲ್ಲಿ ಶುರುವಾದ ಅಗ್ನಿಸಾಕ್ಷಿ ಧಾರಾವಾಹಿ 2019ರ ಡಿಸೆಂಬರ್ ನಲ್ಲಿ ಮುಕ್ತಾಯಗೊಂಡಿತು. ಈ ಧಾರಾವಾಹಿಯಲ್ಲಿ ನಾಯಕ ಪಾತ್ರ ಸಿದ್ಧಾರ್ಥ್ ಆಗಿ ಕಾಣಿಸಿಕೊಂಡಿದ್ದ ವಿಜಯ್ ಸೂರ್ಯ ಮದುವೆಯಾಗಿ ಧಾರಾವಾಹಿಯಿಂದ ಹೊರನಡೆದಿದ್ದರು. ಇನ್ನು ವಿಲನ್ ಪಾತ್ರ ಚಂದ್ರಿಕಾ ಆಗಿದ್ದ ಪ್ರಿಯಾಂಕ ಅವರು ಬಿಗ್ ಬಾಸ್ ಮನೆಗೆ ಎಂಟ್ರಿಕೊಡುವ ಸಲುವಾಗಿ ಸೀರಿಯಲ್ ಕೈ ಬಿಟ್ಟಿದ್ದರು. ಹೀಗಾಗಿ ಧಾರಾವಾಹಿ ಕೊನೆಗೊಳ್ಳಬೇಕಾಗಿತ್ತು. ಈಗಾಗಲೇ ಧಾರಾವಾಹಿ ಮುಗಿದು ಮೂರು ವರ್ಷಗಳಾಗಿವೆ. ಹಾಗಿದ್ದರೂ ಜನ ಅಗ್ನಿಸಾಕ್ಷಿ ಧಾರಾವಾಹಿಯನ್ನು ಮಾತ್ರ ಮರೆತಿಲ್ಲ.

ಸನ್ನಿಧಿ ಎಂದೇ ಗುರುತಿಸುವ ಅಭಿಮಾನಿಗಳು
ಇನ್ನು ಈ ಧಾರಾವಾಹಿ ಹಲವು ನಟ-ನಟಿಯರಿಗೆ ವರವಾಗಿದ್ದಂತೂ ನಿಜ. ವೈಷ್ಣವಿ ಗೌಡ, ಪ್ರಿಯಾಂಕ, ಸುಕೃತನಾಗ್, ವಿಜಯ್ ಸೂರ್ಯ ಸೇರಿದಂತೆ ಹಲವು ನಟ-ನಟಿಯರಿಗೆ ಒಳ್ಳೆಯ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದು ಇದೇ ಅಗ್ನಿಸಾಕ್ಷಿ ಧಾರಾವಾಹಿ. ಇಂದಿಗೂ ವೈಷ್ಣವಿ ಗೌಡ ಅವರನ್ನು ಅಭಿಮಾನಿಗಳು ಸನ್ನಿಧಿ ಪಾತ್ರದ ಮೂಲಕವೇ ಗುರುತಿಸುತ್ತಾರೆ. ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ನಟನೆ ಆರಂಭಿಸಿದ ವೈಷ್ಣವಿ ಗೌಡ ಅವರು, ಅಗ್ನಿಸಾಕ್ಷಿ ಸನ್ನಿಧಿ ಎಂದೇ ಚಿರಪರಿಚಿತರಾಗಿದ್ದಾರೆ. ಮತ್ತೆ ವೈಷ್ಣವಿ ನಟನೆ ಮಾಡಬೇಕು, ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿ ಎಂದು ಅಭಿಮಾನಿಗಳು ಕೇಳುತ್ತಲೇ ಇರುತ್ತಾರೆ.

ಹಿಂದಿಯಲ್ಲಿ ನಾಯಕ-ನಾಯಕಿ ಯಾರು..?
ಈ ಹಿಂದೆ ಬೇರೆ ಭಾಷೆಯ ಧಾರಾವಾಹಿಗಳು ಕನ್ನಡದಲ್ಲಿ ರಿಮೇಕ್ ಆಗುತ್ತಿದ್ದವು. ಆದರೆ ಈಗ ಕನ್ನಡದ ಧಾರಾವಾಹಿಗಳು ಬೇರೆ ಭಾಷೆಗಳಿಗೆ ರಿಮೇಕ್ ಆಗುತ್ತಿವೆ. ಇದರ ಸಾಲಿಗೆ ಅಗ್ನಿಸಾಕ್ಷಿ ಧಾರಾವಾಹಿಯೂ ಸೇರಿಕೊಂಡಿದೆ. ಹಿಂದಿ ಭಾಷೆಯಲ್ಲಿ ಅಗ್ನಿಸಾಕ್ಷಿ ಧಾರಾವಾಹಿ ರಿಮೇಕ್ ಆಗಿದೆ. ಅಗ್ನಿಸಾಕ್ಷಿ ಏಕ್ ಸಮ್ ಜೋತಾ ಎಂಬ ಹೆಸರಿನಲ್ಲಿ ಧಾರಾವಾಹಿ ಶುರುವಾಗಿದೆ. ಇದರಲ್ಲಿ ಹೊಸ ಪ್ರತಿಭೆ ಜೀವಿಕಾ ರಾಣೆ ಸನ್ನಿಧಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸಿದ್ಧಾರ್ಥ್ ಪಾತ್ರದಲ್ಲಿ ಸಾತ್ವಿಕ್ ಭೋಸಲೆ ಅವರು ನಟಿಸುತ್ತಿದ್ದಾರೆ. ಕನ್ನಡದ ಧಾರಾವಾಹಿಗಳು ಹಿಂದಿಗೆ ರಿಮೇಕ್ ಆಗುತ್ತಿರುವುದು ಖುಷಿಯ ಸಂಗತಿ.


Click it and Unblock the Notifications











