ತೆಲುಗು ಧಾರಾವಾಹಿ ಶೂಟಿಂಗ್ ಸೆಟ್ನಲ್ಲಿ ನಟ ಚಂದನ್ ಮೇಲೆ ಹಲ್ಲೆ; ಫಿಲ್ಮಿಬೀಟ್ಗೆ ನಟ ಸ್ಪಷ್ಟನೆ
'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಖ್ಯಾತಿಯ ನಟ ಚಂದನ್ ಮೇಲೆ ತೆಲುಗು ಧಾರಾವಾಹಿ ಶೂಟಿಂಗ್ ಸೆಟ್ನಲ್ಲಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ತೆಲುಗಿನ 'ಸಾವಿತ್ರಮ್ಮಗಾರಿ ಅಬ್ಬಾಯಿ' ಧಾರಾವಾಹಿಯಲ್ಲಿ ಚಂದನ್ ನಟಿಸ್ತಿದ್ದು, ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಧಾರಾವಾಹಿಯಲ್ಲಿ ಕೆಲಸ ಮಾಡುವ ತಂತ್ರಜ್ಞರು ಚಂದನ್ಗೆ ಕಪಾಳ ಮೋಕ್ಷ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ.
ಕನ್ನಡ ಕಿರುತೆರೆಯಲ್ಲಿ ಮಾತ್ರವಲ್ಲದೇ ತೆಲುಗು ಕಿರುತೆರೆಯಲ್ಲೂ ಚಂದನ್ ಬಹುಬೇಡಿಕೆಯ ನಟನಾಗಿ ಗುರ್ತಿಸಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಚಂದು ತೆಲುಗಿನ 'ಸಾವಿತ್ರಮ್ಮಗಾರಿ ಅಬ್ಬಾಯಿ' ಧಾರಾವಾಹಿಯಲ್ಲಿ ಬಾಲರಾಜು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಊಟದ ಬಿಡುವಿನ ಸಮಯದಲ್ಲಿ ಚಂದನ್ ನಿದ್ದೆ ಮಾಡುತ್ತಿದ್ದ ವೇಳೆ ಸಹ ನಿರ್ದೇಶಕ ಶೂಟಿಂಗ್ಗೆ ಕರಿದಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದು ಗಲಾಟೆ ವಿಕೋಪಕ್ಕೆ ತಿರುಗಿದೆ. ಕ್ಯಾಮರಾ ಅಸಿಸ್ಟೆಂಟ್ಗೆ ಹಲ್ಲೆ ಮಾಡಿದ ನಟ ಚಂದನ್ಗೆ ತಂತ್ರಜ್ಞರು ಕಪಾಳ ಮೋಕ್ಷ ಮಾಡಿದ್ದಾರೆ.
ತಾಯಿಗೆ ಹುಷಾರಿಲ್ಲ ಅನ್ನುವ ಟೆಶ್ಯನ್ನಲ್ಲಿದ್ದ ಚಂದನ್ ಶೂಟಿಂಗ್ ಬರೋಕೆ ಆಗೋದಿಲ್ಲ ಎಂದು ಆತನನ್ನು ತಳ್ಳಿದರಂತೆ. ಇದರಿಂದ ಬೇರಸಗೊಂಡ ಆತ ತಂಡದವರನ್ನು ಕರೆದು ಜಗಳ ಮಾಡಿ, ತಂತ್ರಜ್ಞರ ಸಂಘಕ್ಕೆ ದೂರು ಕೊಟ್ಟಿದ್ದಾರೆ. ಗಲಾಟೆ ವೇಳೆ ಚಂದನ್ ಅವಾಚ್ಯ ಶಬ್ಧದಲ್ಲಿ ನಿಂದಿಸಿದರು ಅನ್ನುವ ವಿಚಾರವೂ ಚರ್ಚೆಗೆ ಬಂದಿದ್ದು, ಅದನ್ನು ವೀಡಿಯೋದಲ್ಲಿಯೂ ಗಮನಿಸಬಹುದು. ಘಟನೆ ಬಗ್ಗೆ ನಟ ಚಂದನ್ ಕುಮಾರ್ ಫಿಲ್ಮಿ ಬೀಟ್ಗೆ ಸ್ಪಷ್ಟನೆ ನೀಡಿದ್ದಾರೆ.

ಇದೊಂದು ಸಣ್ಣ ಘಟನೆ- ಚಂದನ್
'ಸಾವಿತ್ರಮ್ಮಗಾರಿ ಅಬ್ಬಾಯಿ' ಧಾರಾವಾಹಿ ಸೆಟ್ನಲ್ಲಿ ನಡೆದ ಘಟನೆ ಬಗ್ಗೆ ಚಂದನ್ " ಅಂದು ಏನಾಯ್ತು ಅಂದರೆ, ಅಮ್ಮನಿಗೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೆ. ಅದೇ ಟೆಶ್ಷನ್ನಲ್ಲಿ ಸರಿಯಾಗಿ ನಿದ್ದಿ ಮಾಡಿರಲಿಲ್ಲ. ಊಟದ ಬಿಡುವಿನ ವೇಳೆ ನಿರ್ದೇಶಕರಿಗೆ ಹೇಳಿ ಮಲಗಿದ್ದೆ. ಸೆಟ್ ಅಸಿಸ್ಟೆಂಟ್ ರಂಜಿತ್, ಎಂಬಾತ ಬಂದು ಶಾಟ್ ರೆಡಿ ಇದೆ ಬನ್ನಿ ಎಂದ. ನಾನು ಸ್ವಲ್ಪ ಹೊತ್ತಿನ ನಂತರ ಬರೋದಾಗಿ ಹೇಳಿದೆ. ಆದರೆ ಆತ ಏಕವಚನದಲ್ಲಿ ಮಾತನಾಡಿದ್ದ. ಟೆಶ್ಷನ್ನಲ್ಲಿ ನನಗೆ ಅದು ಕೋಪ ತರಿಸಿತ್ತು." ಎಂದಿದ್ದಾರೆ.

ಸಲುಗೆಯಿಂದ ಅವನನ್ನು ತಳ್ಳಿದ್ದೆ- ಚಂದನ್
"ಕೆಲ ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ಆತನ ಜೊತೆ ನಾನು ಪಾರ್ಟಿ ಕೂಡ ಮಾಡಿದ್ದೀನಿ. ಹಾಗಾಗಿ ಆತ ಆತ್ಮೀಯ. ಅದೇ ಸಲುಗೆಯಿಂದ ಆತನನ್ನು ನೂಕಿದ್ದೆ. ಆದರೆ ಅವನು ಅದನ್ನು ದೊಡ್ಡದು ಮಾಡಿ ಕಣ್ಣೀರಾಕಿ ಡ್ರಾಮಾ ಮಾಡಿದ. ಕೂಡಲೇ ತಂತ್ರಜ್ಞರ ಸಂಘದವರನ್ನು ಕರೆಸಿ ದೊಡ್ಡ ಗಲಾಟೆ ನಡೀತು" ಎಂದು ಘಟನೆಯನ್ನು ವಿವರಿಸಿದ್ದಾರೆ.

ಗಲಾಟೆ ವೇಳೆ ನನ್ನ ಮೇಲೆ ಕೈ ಮಾಡಿದ್ರು- ಚಂದನ್
ಗಲಾಟೆ ವೇಳೆ ನಟ ಚಂದನ್ ಕ್ಷಮೆ ಕೇಳಿದ್ದಾರೆ. ಆದರೆ ಅದಕ್ಕೆ ಅವರು ಒಪ್ಪಿಲ್ಲ. "ಗಲಾಟೆಯ ನಡುವೆ ನನ್ನ ಮೇಲೆ ಕೈ ಕೂಡ ಮಾಡಿದರು. ಆದರೂ ನಾನು ತಾಳ್ಮೆಯಿಂದ ಇಂದ ಇದ್ದೆ. ಇದು ಸಣ್ಣ ಗಲಾಟೆ ಅಷ್ಟೆ" ಎಂದು ಚಂದನ್ ತಿಳಿಸಿದ್ದಾರೆ.

ಅಮ್ಮ ಚೇತರಿಸಿಕೊಂಡಿದ್ದಾರೆ- ಚಂದನ್
ಇನ್ನು ತಾಯಿಯ ಆರೋಗ್ಯದ ಬಗ್ಗೆ ಮಾತನಾಡಿದ ಚಂದನ್ " ಅಮ್ಮ ಈಗ ಚೇತರಿಸಿಕೊಂಡಿದ್ದಾರೆ. ನಾನು ತಂಡಕ್ಕೆ ಎಲ್ಲ ವಿವರಿಸಿದ್ದೇನೆ. ಒಟ್ಟಿನಲ್ಲಿ ಆ ಘಟನೆಯಿಂದ ಬಹಳ ಬೇಸರವಾಯಿತು" ಎಂದು ಚಂದನ್ ಮಾಹಿತಿ ನೀಡಿದ್ದಾರೆ.


Click it and Unblock the Notifications











