'ಮತ್ತೆ ಮನ್ವಂತರ' ತರುತ್ತಿದ್ದಾರೆ ಟಿ.ಎನ್.ಸೀತಾರಾಮ್
ನಟ, ನಿರ್ದೇಶಕ ಟಿ.ಎನ್.ಸೀತಾರಾಮ್ ಅವರು ಕಳೆದ ವರ್ಷ ಹಠಾತ್ತನೆ ತಮ್ಮ ಧಾರಾವಾಹಿ 'ಮಗಳು ಜಾನಕಿ'ಯನ್ನು ನಿಲ್ಲಿಸಿ ಪ್ರೇಕ್ಷಕರ ಬೇಸರಕ್ಕೆ ಕಾರಣವಾಗಿದ್ದರು. ಆ ಬಗ್ಗೆ ಕ್ಷಮೆಯನ್ನು ಯಾಚಿಸಿದ್ದರು.
ಇದೀಗ ಮತ್ತೆ ಹೊಸ ಧಾರಾವಾಹಿಯೊಂದಿಗೆ ಮರಳಿ ಬರುತ್ತಿದ್ದಾರೆ ಟಿ.ಎನ್.ಸೀತಾರಾಮ್. ಕೆಲವು ದಿನಗಳ ಹಿಂದಷ್ಟೆ ತಾವು ಹೊಸ ಧಾರಾವಾಹಿ ನಿರ್ದೇಶಿಸುತ್ತಿರುವುದಾಗಿ ಫೇಸ್ಬುಕ್ನಲ್ಲಿ ಮಾಹಿತಿ ಹಂಚಿಕೊಂಡಿದ್ದ ಸೀತಾರಾಮ್, ಹೊಸ ಧಾರಾವಾಹಿಗೆ ಹೆಸರು ಸೂಚಿಸುವಂತೆ ಕೇಳಿದ್ದರು. ಅಂತೆಯೇ ನೂರಾರು ಮಂದಿ ಹಲವಾರು ಹೆಸರುಗಳನ್ನು ಕಳಿಸಿಕೊಟ್ಟಿದ್ದರು.
ಇದೀಗ ಹೊಸ ಪೋಸ್ಟ್ ಹಾಕಿರುವ ಟಿ.ಎನ್.ಸೀತಾರಾಮ್ ಹೊಸ ಧಾರಾವಾಹಿಗೆ 'ಮತ್ತೆ ಮನ್ವಂತರ' ಎಂದು ಹೆಸರಿಟ್ಟಿರುವುದಾಗಿ ಹೇಳಿದ್ದಾರೆ. ಸೀತಾರಾಮ್ ಅವರು ತಮ್ಮ ಧಾರಾವಾಹಿಗಳಿಗೆ 'ಮ' ಅಕ್ಷರದಿಂದಲೇ ಹೆಸರಿಡುವ ವಾಡಿಕೆ ಇಟ್ಟುಕೊಂಡಿದ್ದಾರೆ. ಈ ಹಿಂದೆ, 'ಮಾಯಾಮೃಗ', 'ಮುಕ್ತ', 'ಮುಕ್ತ-ಮುಕ್ತ', ಮಹಾ ಪರ್ವ', 'ಮಗಳು ಜಾನಕಿ' ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ ಟಿ.ಎನ್.ಸೀತಾರಾಂ.

ಈ ಹಿಂದೆ 'ಮನ್ವಂತರ' ಹೆಸರಿನ ಧಾರಾವಾಹಿಯನ್ನು ಸೀತಾರಾಮ್ ನಿರ್ದೇಶನ ಮಾಡಿದ್ದರು. ಇದೀಗ 'ಮತ್ತೆ ಮನ್ವಂತರ' ನಿರ್ದೇಶನ ಮಾಡುತ್ತಿದ್ದಾರೆ. ಆದರೆ ಇದು ಹಳೆಯ 'ಮನ್ವಂತರ' ಧಾರಾವಾಹಿಯ ಮುಂದುವರೆದ ಭಾಗವಾಗಿರುವುದಿಲ್ಲ. 'ಮತ್ತೆ ಮನ್ವಂತರ'ದ ಬದಲಿಗೆ 'ಮರಳಿ ಮನ್ವಂತರ' ಎಂದು ಹೆಸರು ಇಡಲು ಕೆಲವು ನೆಟ್ಟಿಗರು ಸೂಚಿಸಿದ್ದಾರೆ. ಇದು ಒಳ್ಳೆಯ ಸಲಹೆಯೇ ಆಗಿದ್ದು ಈ ಬಗ್ಗೆ ಸೀತಾರಮ್ ಯಾವ ನಿರ್ಣಯ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.
'ಮತ್ತೆ ಮನ್ವಂತರ' ಧಾರಾವಾಹಿಯಲ್ಲಿ ಮೇಧ ಎಂಬ ಹೊಸ ಪ್ರತಿಭೆಯನ್ನು ಸೀತಾರಾಮ್ ಪರಿಚಯಿಸಲಿದ್ದಾರೆ. ಟಿ.ಎನ್.ಸೀತಾರಾಮ್ ಅವರು ಈ ಧಾರಾವಾಹಿಯಲ್ಲೂ ವಕೀಲನ ಪಾತ್ರದಲ್ಲಿ ನಟಿಸಲಿದ್ದಾರೆ. ಮಾಳವಿಕ ಅವಿನಾಶ್ ಅವರು ಸಹ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಧಾರಾವಾಹಿಯು ಯುವ ಮಹಿಳಾ ಕ್ರೀಡಾಪಟುವಿನ ಜೀವನದ ಸುತ್ತ ನಡೆವ ಘಟನೆಯನ್ನು ಆಧರಿಸಿರಲಿದೆ.


Click it and Unblock the Notifications











