ಈ ವರ್ಷ ಕನ್ನಡ ಕಿರುತೆರೆಯಲ್ಲಿ ಸದ್ದು ಮಾಡಿದ ವಿವಾದಗಳ ಮೇಲೊಂದು ಸುತ್ತು
ಹೊಸ ವರ್ಷದ ಸ್ವಾಗತಕ್ಕೆ ಇಡೀ ಜಗತ್ತು ಸಿದ್ಧವಾಗುತ್ತಿದೆ. ಈ ವರ್ಷದ ಕಹಿ ಮರೆತು ಹೊಸ ವರ್ಷವನ್ನು ಹೊಸದಾಗಿ ಆರಂಭಿಸಲು ಜನ ಕಾಯುತ್ತಿದ್ದಾರೆ. ಇನ್ನು ಕನ್ನಡ ಚಿತ್ರರಂಗ ಹಾಗೂ ಕನ್ನಡ ಕಿರುತೆರೆರಂಗದಲ್ಲಿ ಈ ವರ್ಷ ಸಾಕಷ್ಟು ವಿದ್ಯಮಾನಗಳು ನಡೆದವು. ಸಾಕಷ್ಟು ವಿವಾದಗಳಿಗೂ ಈ ವರ್ಷ ಸಾಕ್ಷಿ ಆಗಿತ್ತು.
ಬರೀ ಚಿತ್ರರಂಗ ಮಾತ್ರವಲ್ಲ ಕಿರುತೆರೆಯನ್ನು ಜನ ಬೆರಗುಗಣ್ಣಿನಿಂದ ನೋಡುತ್ತಾರೆ. ಕಿರುತೆರೆ ಧಾರಾವಾಹಿ, ಕಾರ್ಯಕ್ರಮಗಳನ್ನು ಫಾಲೋ ಮಾಡುತ್ತಾರೆ. ಕಿರುತೆರೆಯಲ್ಲಿ ಸ್ಟಾರ್ಗಳಿದ್ದಾರೆ. ಅವರ ಸಣ್ಣ ವಿವಾದಗಳು ದೊಡ್ಡದಾಗಿ ಸದ್ದು ಮಾಡುತ್ತವೆ. ಈ ವರ್ಷ ಕನ್ನಡ ಕಿರುತೆರೆಯಲ್ಲೂ ಸಾಕಷ್ಟು ವಿವಾದಗಳು ದಾಖಲಾಗಿದೆ. 'ಜೊತೆ ಜೊತೆಯಲಿ' ಧಾರಾವಾಹಿ ತಂಡದ ಜೊತೆ ನಟ ಅನಿರುದ್ಧ್ ಕಿರಿಕ್, 'ಪದವಿ ಪೂರ್ವ' ಚಿತ್ರದ ಸ್ಯಾಟಲೈಟ್ ಮಾರಾಟಕ್ಕೆ ಸಂಬಂಧಿಸಿದ ವಿವಾದ ಹೀಗೆ ಲಿಸ್ಟ್ ಬೆಳೆಯುತ್ತಾ ಹೋಗುತ್ತದೆ.
ಇನ್ನು ಬಿಗ್ಬಾಸ್ ಮನೆಯಲ್ಲಿ ಕನ್ನಡಪರ ಸಂಘಟನೆಗಳ ಬಗ್ಗೆ ಪ್ರಶಾಂತ್ ಸಂಬರಗಿ ಆಡಿದ್ದ ಮಾತು ಪ್ರತಿಭಟನೆಗೆ ಕಾರಣವಾಗಿತ್ತು. ಇನ್ನು ನಟಿ ವೈಷ್ಣವಿ ಗೌಡ ಮದುವೆ ಮಾತುಕತೆ ನಡೆದು ಎರಡೇ ದಿನಕ್ಕೆ ಆ ಮದುವೆ ಮುರಿದು ಬಿದ್ದಿತ್ತು.

ನಟ ಅನಿರುದ್ಧ್ ಕಿರಿಕ್
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಜೊತೆ ಜೊತೆಯಲಿ' ಈ ವರ್ಷ ಬೇರೆ ಬೇರೆ ಕಾರಣಕ್ಕೆ ಸುದ್ದಿ ಆಗಿದ್ದು ವಿಪರ್ಯಾಸ. ನಟ ಅನಿರುದ್ಧ್ ಧಾರಾವಾಹಿಯಲ್ಲಿ ಖ್ಯಾತ ಉದ್ಯಮಿ ಆರ್ಯವರ್ಧನ್ ಪಾತ್ರದಲ್ಲಿ ನಟಿಸುತ್ತಿದ್ದರು. ಆರ್ಯವರ್ಧನ್- ಅನು ಜೋಡಿ ಮನೆ ಮಾತಾಗಿದ್ದರು. ಆದರೆ ನಟ ಅನಿರುದ್ಧ್ ಶೂಟಿಂಗ್ ಸೆಟ್ನಲ್ಲಿ ಕಿರಿಕ್ ಮಾಡಿಕೊಂಡಿದ್ದರು. ಇದು ತಂಡಕ್ಕೆ ಅಸಮಾಧಾನ ತಂದಿದೆ. ನಿರ್ಮಾಪಕ ಆರೂರು ಜಗದೀಶ್ ಹಾಗೂ ಅನಿರುದ್ಧ್ ಆರೋಪ ಪ್ರತ್ಯಾರೋಪಗಳನ್ನು ಮಾಡಿದ್ದರು. ಆದರೆ ಧಾರಾವಾಹಿಯಿಂದ ಅನಿರುದ್ಧ್ ಅವರನ್ನು ಕೈಬಿಡಲು ತಂಡ ನಿರ್ಧರಿಸಿತ್ತು. ಜೊತೆಗೆ 2 ವರ್ಷಗಳ ಕಾಲ ಅವರನ್ನು ಕಿರುತೆರೆಯಿಂದ ದೂರ ಇಡಲು ನಿರ್ಮಾಪಕರು ತೀರ್ಮಾನಿಸಿದ್ದರು.

'ಜೊತೆ ಜೊತೆಯಲಿ' ವಿವಾದ ಸುಖಾಂತ್ಯ
ಅನಿರುದ್ಧ್ ಅವರನ್ನು ಕೈಬಿಟ್ಟ ಮೇಲೆ ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಎಂಟ್ರಿ ಕೊಟ್ಟರು. ಅನಿರುದ್ಧ್ ಸದ್ಯ 'ಸೂರ್ಯವಂಶ' ಎನ್ನುವ ಹೊಸ ಧಾರಾವಾಹಿಗೆ ಬಣ್ಣ ಹಚ್ಚಿದ್ದರು. ಈ ಸಂದರ್ಭದಲ್ಲಿ ಮತ್ತೆ ಬ್ಯಾನ್ ವಿಚಾರ ಚರ್ಚೆಗೆ ಬಂದಿತ್ತು. ನಂತರ ಕರ್ನಾಟಕ ಫಿಲ್ಮ್ ಚೇಂಬರ್ನಲ್ಲಿ ಅನಿರುದ್ಧ್ ಹಾಗೂ ಕಿರುತೆರೆ ನಿರ್ಮಾಪಕರ ಸಂಘದ ಸದಸ್ಯರ ಸಂಧಾನ ಸಭೆ ನಡೀತು. ಸಭೆಯಲ್ಲಿ ಅನಿರುದ್ಧ್ ಹಾಗೂ ಆರೂರು ಜಗದೀಶ್ ಮಾತುಕತೆ ನಡೆಸಿ ವಿವಾದ ಬಗೆಹರಿಸಿಕೊಂಡಿದ್ದರು.

ವೈಷ್ಣವಿ ಗೌಡ ಮದುವೆ ನಿಶ್ಚಯ ವಿವಾದ
ಕಿರುತೆರೆ ನಟಿ ವೈಷ್ಣವಿ ಗೌಡ ಹಾಗೂ ನಟ ವಿದ್ಯಾಭರಣ್ ಮದುವೆ ಮಾತುಕತೆ ನಡೆಸಲಾಗಿತ್ತು. ಹಣ್ಣು ಕಾಯಿ ಇಡುವ ಶಾಸ್ತ್ರದ ವಿಡಿಯೋ, ಫೋಟೊ ವೈರಲ್ ಆಗಿತ್ತು. ಇದನ್ನು ಕೆಲವರು ಎಂಗೇಜ್ಮೆಂಟ್ ಎಂದು ಹೇಳಿದ್ದರು. ಆದರೆ ಈ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದರು. ಆದರೆ ನಟ ವಿದ್ಯಾಭರಣ್ ಇಬ್ಬರು ಹುಡುಗಿಯರಿಗೆ ಮೋಸ ಮಾಡಿದ್ದಾರೆ ಎನ್ನಲಾಗಿದ್ದ ಆಡಿಯೋ ಕ್ಲಿಪ್ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ವಿವಾದಕ್ಕೆ ಕಾರಣವಾಗಿತ್ತು. ಆದರೆ ವಿದ್ಯಾಭರಣ್ ಇದು ನಾನು ಮಾತನಾಡಿರುವುದು ಅಲ್ಲ, ಯಾರೋ ಬೇಕು ಅಂತ ನನ್ನ ತಂದೆ ಹೆಸರು ಹಾಳು ಮಾಡಲು ಹೀಗೆ ಮಾಡಿದ್ದಾರೆ ಎಂದಿದ್ದರು. ಆದರೆ ನಂತರ ನಟಿ ವೈಷ್ಣವಿ ಗೌಡ ಈ ಮದುವೆ ನಿರ್ಧಾರದಿಂದ ಹಿಂದೆ ಸರಿದಿದ್ದರು.

ಭಟ್ರ ಆಡಿಯೋ ಕ್ಲಿಪ್ ವೈರಲ್
'ಪದವಿ ಪೂರ್ವ' ಚಿತ್ರದ ಸ್ಯಾಟಲೈಟ್ ರೈಟ್ಸ್ ಮಾರಾಟಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿಯ ಮುಖ್ಯಸ್ಥರ ಮೇಲೆ ನಿರ್ದೇಶಕ ಯೋಗರಾಜ್ ಭಟ್ ಗರಂ ಆಗಿದ್ದರು. ತಮ್ಮ ನಿರ್ದೇಶನದ 'ಪದವಿ ಪೂರ್ವ' ಚಿತ್ರದ ಸ್ಯಾಟಲೈಟ್ ರೈಟ್ಸ್ ಖರೀದಿ ಮಾಡುವುದಾಗಿ ರಾಘವೇಂದ್ರ ಹುಣಸೂರು ಹೇಳಿದ್ದರು. ಆದರೆ ಈಗ ಸ್ಪಂದಿಸುತ್ತಿಲ್ಲ ಎಂದು ಕಿಡಿ ಕಾರಿದ್ದರು. ಇದಕ್ಕೆ ಸಂಬಂಧಿಸಿದ ವಾಯ್ಸ್ ನೋಟ್ಗಳು ಭಾರೀ ವೈರಲ್ ಆಗಿತ್ತು. ನಂತರ ವಾಹಿನಿಯ ಕಾರ್ಯಕ್ರಮಗಳಿಂದಲೂ ಯೋಗರಾಜ್ ಭಟ್ ಹೊರ ಬಂದಿದ್ದರು.

ಸಂಬರಗಿ ವಿರುದ್ಧ ಪ್ರತಿಭಟನೆ
ಬಿಗ್ಬಾಸ್ -9 ಮನೆಯಲ್ಲಿ ಸ್ಪರ್ಧಿಯಾಗಿದ್ದ ಪ್ರಶಾಂತ್ ಸಂಬರಗಿ ಅವರು ಮತ್ತೊಬ್ಬ ಸ್ಪರ್ಧಿ ರೂಪೇಶ್ ರಾಜಣ್ಣ ನಡುವೆ ಪದೇ ಪದೇ ಜಗಳ ನಡೀತಿತ್ತು. ಒಮ್ಮೆ ರೂಪೇಶ್ ರಾಜಣ್ಣ ಕನ್ನಡ ಹೋರಾಟದ ಬಗ್ಗೆ ಸಂಬರಗಿ ಲಘುವಾಗಿ ಮಾತನಾಡಿದ್ದರು. ಮಾತಿನ ಭರದಲ್ಲಿ "ಎಲ್ಲ ಕನ್ನಡ ಹೋರಾಟಗಾರರಿಗೆ ನಾನು ಬಿಸಿ ಮುಟ್ಟಿಸಿದ್ದೇನೆ' ಎಂದಿದ್ದರು. ಇದು ಕನ್ನಡಪರ ಸಂಘಟನೆಗಳ ಸದಸ್ಯರನ್ನು ಕೆರಳಿಸಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿ ಇನೋವೇಟಿವ್ ಫಿಲ್ಮ್ ಸಿಟಿ ಮುಂದೆ ಕನ್ನಡಪರ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಈ ಪ್ರಶಾಂತ್ ಸಂಬರಗಿ ಕ್ಷಮೆ ಕೇಳಬೇಕು, ಆತನನ್ನು ಮನೆಯಿಂದ ಹೊರಹಾಕಿ ಎಂದು ಆಗ್ರಹಿಸಿದ್ದರು. ನಂತರ ಬಿಗ್ ಬಾಸ್ ಮನೆ ಒಳಗಿನಿಂದಲೇ ಸಂಬರಗಿ ಕಣ್ಣೀರು ಹಾಕುತ್ತಾ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ್ದರು.


Click it and Unblock the Notifications











