ಜೂನ್ 18ಕ್ಕೆ ಬಹುನಿರೀಕ್ಷಿತ ಮಣಿರತ್ನಂ 'ರಾವಣ'
ಖ್ಯಾತ ನಿರ್ದೇಶಕ ಮಣಿರತ್ನಂ ಅವರ 'ರಾವಣ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಕೇವಲ ಹಿಂದಿ ಭಾಷೆಯಲ್ಲಷ್ಟೆ ಅಲ್ಲದೆ ತಮಿಳು, ತೆಲುಗು ಭಾಷೆಗಳಲ್ಲೂ ಈ ಚಿತ್ರ ತೆರೆಕಾಣಲಿದೆ. ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಮತ್ತು ವಿಕ್ರಮ್ ಮುಖ್ಯಪಾತ್ರದಲ್ಲಿ ನಟಿಸಿರುವ ಚಿತ್ರ.
ಮಾಹಾಕಾವ್ಯ ರಾಮಾಯಣದ ಕೆಲವು ಮುಖ್ಯ ಘಟನೆಗಳ ಆಧಾರವಾಗಿ ಚಿತ್ರಕತೆಯನ್ನು ಹೆಣೆಯಲಾಗಿರುವ ಚಿತ್ರ ಇದಾಗಿದೆ. ಚಿತ್ರದಲ್ಲಿ ರಾವಣ ಖಳನಾಯಕನಲ್ಲ ನಾಯಕನಾಗಿ ಕಾಣುತ್ತಾನೆ. ಚಿತ್ರಕತೆ ರಾವಣನ ಪರವಾಗಿ ಸಾಗುತ್ತದೆ ಎಂಬುದು ಬಾಲಿವುಡ್ ಸಮಾಚಾರ. ಆದರೆ ಮಣಿರತ್ನಂ ಮಾತ್ರ ಈ ಚಿತ್ರದ ಬಗೆಗಿನ ಗುಟ್ಟ ಬಿಟ್ಟುಕೊಟ್ಟಿಲ್ಲ.
ಸದ್ಯಕ್ಕೆ ರಾವಣ ಚಿತ್ರೀಕರಣ ಮುಗಿದಿದೆ. ನಂಬಲರ್ಹ ಮೂಲಗಳ ಪ್ರಕಾರ ಬಹುನಿರೀಕ್ಷಿತ 'ರಾವಣ' ಚಿತ್ರವನ್ನು ವಿಶ್ವದಾದ್ಯಂತ ಜೂನ್ 18ರಂದು ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ. ಬಿಡುಗಡೆಗೂ ಮುನ್ನ ರಾವಣ ಚಿತ್ರವನ್ನು ಕೇನ್ಸ್ ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ.
ಮಣಿರತ್ನಂ ಚಿತ್ರಗಳೆಂದರೆ ಅದೊಂದು ದೃಶ್ಯ ಕಾವ್ಯವಿದ್ದಂತೆ. ಕ್ಯಾಮೆರಾ ಕೈಚಳಕ, ನಿರ್ದೇಶನದಲ್ಲಿ ಹೊಸತನ, ವಿಭಿನ್ನವಾದ ಕಥೆ...ಹೀಗೆ ಪ್ರೇಕ್ಷಕರ ನಿರೀಕ್ಷೆಗಳು ಗರಿಗೆದರುತ್ತವೆ. ಹಾಗಾಗಿ ಈ ಚಿತ್ರ ಎಲ್ಲಿಲ್ಲದ ಕುತೂಹಲ, ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಅಮೆರಿಕಾ, ಕೆನಡಾ, ಲಂಡನ್, ಫ್ರಾನ್ಸ್ ನಲ್ಲಿ 'ರಾವಣ'ನ ಪ್ರಚಾರಕ್ಕಾಗಿ ಅಭಿಷೇಕ್, ಐಶ್ವರ್ಯ, ವಿಕ್ರಂ ಮತ್ತು ಮಣಿರತ್ನಂ ಹೊರಡಲು ಅಣಿಯಾಗಿದ್ದಾರೆ.


Click it and Unblock the Notifications











