ಅಮಿತಾಭ್ ಕುಟುಂಬದ ಚಿತ್ರಗಳಿಗೆ ಠಾಕ್ರೆ ನಿಷೇಧ
ಮುಂಬೈ, ಸೆ. 8 : ಅಮಿತಾಭ್ ಬಚ್ಚನ್ ಸೇರಿದಂತೆ ಅವರ ಕುಟುಂಬ ಸದಸ್ಯರು ನಟಿಸಿರುವ ಚಿತ್ರಗಳ ಜೊತೆಗೆ ಅವರಿರುವ ಜಾಹೀರಾತುಗಳನ್ನು ನಿಷೇಧಿಸಲಾಗುವುದು ಎಂದು ಮಹಾರಾಷ್ಟ್ರ ನವನಿರ್ಮಾಣ ವೇದಿಕೆ ಮುಖ್ಯಸ್ಥ ರಾಜ್ ಠಾಕ್ರೆ ಇಂದಿಲ್ಲಿ ಗುಡುಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಜಯಾ ಬಚ್ಚನ್ ''ನಾವು ಮೂಲತಃ ಉತ್ತರ ಪ್ರದೇಶದವರು, ನಮ್ಮ ಮನೆಯವರೆಲ್ಲಾ ಹಿಂದಿ ಭಾಷೆಯಲ್ಲಿ ಮಾತನಾಡುತ್ತಾರೆ. ಆದರೂ ಮರಾಠಿಗಳು ನಮ್ಮನ್ನು ಕ್ಷಮಿಸಿದ್ದಾರೆ'' ಎಂದು ಹೇಳಿಕೆ ಕೊಟ್ಟಿರುವ ಹಿನ್ನೆಲೆಯಲ್ಲಿ ರಾಜ್ ಠಾಕ್ರೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಭಿಷೇಕ್ ಬಚ್ಚನ್ ಅವರು ನಟಿಸುತ್ತಿರುವ ನೂತನ ಚಿತ್ರ 'ದ್ರೋಣ' ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜಯಾ ಬಚ್ಚನ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಯಾಬಚ್ಚನ್ ಮರಾಠಿ ಜನರಿಗೆ ಅವಮಾನ ಮಾಡುವಂಥ ಮಾತುಗಳನ್ನಾಡಿದ್ದಾರೆ. ತಾವಾಡಿರುವ ಮಾತನ್ನು ಕೂಡಲೆ ವಾಪಸ್ಸು ತೆಗೆದುಕೊಳ್ಳದಿದ್ದರೆ, ಉಗ್ರ ಹೋರಾಟ ನಡೆಸಲಾಗುವುದು ಎಂದು ರಾಜ್ ಠಾಕ್ರೆ ಎಚ್ಚರಿಸಿದ್ದಾರೆ.
ಜಯಾಬಚ್ಚನ್ ಕೊಟ್ಟಿರುವ ಹೇಳಿಕೆಯನ್ನು ಮಹಾರಾಷ್ಟ್ರ ರಾಜಕೀಯ ಪಕ್ಷಗಳು ಸಹ ಖಂಡಿಸಬೇಕು ಎಂದು ಮನವಿ ಮಾಡಿಕೊಂಡಿರುವ ಅವರು, ಜಯಾಬಚ್ಚನ್ ಕ್ಷಮೆ ಯಾಚಿಸುವವರೆಗೂ ಆ ಕುಟುಂಬ ನಟಿಸಿರುವ ಚಿತ್ರಗಳ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದರು.
(ದಟ್ಸ್ ಕನ್ನಡ ಸಿನಿವಾರ್ತೆ)


Click it and Unblock the Notifications











