ಅಂದದ ಕಣ್ಣು ದಾನ ಮಾಡಲಿದ್ದಾರೆ ಐಶ್ವರ್ಯ ರೈ
ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ ಎಂದು ಸಿನಿಮಾ ಕವಿ ಹಾಡಿದ್ದು ಎಷ್ಟು ಸತ್ಯ ಅಲ್ಲವೆ? ಸುಂದರ ಕಣ್ಣುಗಳೆ ಹೆಣ್ಣಿಗೆ ಭೂಷಣ. ಮೈಮಾಟ, ಮೈಬಣ್ಣ ಏನೇ ಇದ್ದರೂ ಮೊದಲು ಗಮನ ಸೆಳೆಯುವುದು ಕಣ್ಣುಗಳು. ಅದರಲ್ಲೂ ಐಶ್ವರ್ಯ ರೈ ನೀಲಿ ಮಿಶ್ರಿತ ಹಸಿರು ಕಣ್ಣುಗಳನ್ನು ನೋಡುತ್ತಿದ್ದರೆ ಅಬ್ಬಬ್ಬಾ ಇನ್ನೂ ನೋಡುತ್ತಲೇ ಇರಬೇಕು ಅನ್ನಿಸದೆ ಇರದು!
ಇಷ್ಟೆಲ್ಲಾ ಪೀಠಿಕೆ ಯಾತಕೆ ವಿಷಯ ಹೇಳಿ ಗುರು ಅನ್ನುತ್ತಿದ್ದಾರಾ? ವಿಷಯ ಏನಿಲ್ಲಾ ನೇತ್ರದಾನವೇ ಮಹಾದಾನ ಎಂಬ ಮಾತಿನಂತೆ ಐಶ್ವರ್ಯ ರೈ ತಮ್ಮ ಸುಂದರ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ತಮ್ಮ ನಿಧನಾ ನಂತರ ಕಣ್ಣುಗಳು ಮಣ್ಣಾಗುವ ಬದಲು ಇನ್ನೊಬ್ಬರ ಬಾಳಿನ ಬೆಳಕಾಗಲಿ ಎಂಬುದು ಆಕೆಯ ಹೆಬ್ಬಯಕೆ.
ನೇತ್ರದಾನ ಶಿಬಿರವೊಂದರಲ್ಲಿ ಭಾಗವಹಿಸಿದ್ದ ಆಕೆ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಭಾರತೀಯ ನೇತ್ರ ಬ್ಯಾಂಕ್ ಸಂಘ (Eye Bank association of India) ಸಂಸ್ಥೆಗೆ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಅಭಿಮಾನಿಗಳಿಗೆ ತಮ್ಮ ಈ ನಿರ್ಧಾರ ಸ್ಫೂರ್ತಿಯಾಗುತ್ತದೆ ಎಂಬ ದೊಡ್ಡ ಆಶಯ ಆಕೆಯದು.
ನೇತ್ರದಾನದ ಪತ್ರಗಳಿಗೆ ಸಹಿ ಮಾಡಿದ ಬಳಿಕ ಮಾತನಾಡಿದ ಐಶ್ವರ್ಯ ರೈ, "ಇಷ್ಟು ಜನಕ್ಕೆ ಗೊತ್ತಾಗಿದ್ದೀನಿ ಎಂದರೆ ಅದಕ್ಕೆ ಕಾರಣ ನನ್ನ ಕಣ್ಣುಗಳು. ಹಾಗಾಗಿ ಈ ಅಮೂಲ್ಯ ಕಣ್ಣುಗಳನ್ನು ನಾನು ದಾನವಾಗಿ ಕೊಡಲು ಮುಂದೆ ಬಂದಿದ್ದೇನೆ" ಎಂದಿದ್ದಾರೆ. ಆಹಾ ಎಂತಹ ಮಾತಲ್ಲವೆ? ಈ ನೇತ್ರದಾನ ಶಿಬಿರದಲ್ಲಿ ಹಿರಿಯ ನಟ ಓಂ ಪುರಿ ಸಹ ಪಾಲ್ಗೊಂಡಿದ್ದರು.


Click it and Unblock the Notifications











