ಪ್ರತೀ ವರ್ಷದಂತೆ ಈ ಬಾರಿ ಅದ್ದೂರಿ ಗಣೇಶೋತ್ಸವ ಇಲ್ಲ: ಸಂಜಯ್ ದತ್
ನಟ ಸಂಜಯ್ ದತ್ 4ನೇ ಹಂತದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಸದ್ಯ ಸಂಜಯ್ ದತ್ ಗೆ ಮೊದಲ ಹಂತದ ಚಿಕಿತ್ಸೆ ಪ್ರಾರಂಭವಾಗಿದ್ದು, ಮುಂಬೈನ ಕೋಕಿಲಾಬೇನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ಅನಾರೋಗ್ಯದ ನಡುವೆಯೂ ಸಂಜಯ್ ದತ್ ಮನೆಯಲ್ಲಿ ಕುಟುಂಬದ ಜೊತೆ ಗಣೇಶ ಹಬ್ಬ ಆಚರಣೆ ಮಾಡಿದ್ದಾರೆ.
ಸಂಜಯ್ ದತ್ ಪತ್ನಿ ಮಾನ್ಯತಾ ದತ್ ಜೊತೆ ಗಣೇಶನಿಗೆ ಪೂಜೆ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸರಳವಾಗಿ ಹಬ್ಬ ಆಚರಣೆ ಮಾಡಿರುವ ಸಂಜಯ್ ದತ್, ಪ್ರತೀ ವರ್ಷ ಇರುತ್ತಿದ್ದ ಅದ್ದೂರಿ ಆಚರಣೆ ಈ ಬಾರಿ ಇಲ್ಲ ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಮುಂದೆ ಓದಿ...

ಸಂಜಯ್ ದತ್ ಪೋಸ್ಟ್
"ಪ್ರತೀ ವರ್ಷ ಇರುತ್ತಿದ್ದ ಅದ್ದೂರಿ ಆಚರಣೆ ಈ ಬಾರಿ ಇಲ್ಲ. ಆದರೆ ಗಣಪನ ಮೇಲಿನ ನಂಬಿಕೆ ಹಾಗೆ ಇದೆ. ಈ ಹಬ್ಬ ನಮ್ಮ ಜೀವನದ ಎಲ್ಲಾ ವಿಘ್ನವನ್ನು ದೂರ ಮಾಡಲಿ. ಎಲ್ಲರಿಗೂ ಸಂತೋಷ ಮತ್ತು ಆರೋಗ್ಯವನ್ನು ಆ ದೇವರು ಕರುಣಿಸಲಿ. ಗಣಪತಿ ಬಪ್ಪಾ ಮೋರಿಯಾ" ಎಂದು ಬರೆದುಕೊಂಡಿದ್ದಾರೆ.

ಬೇಗ ಗುಣಮುಖರಾಗುವಂತೆ ಅಭಿಮಾನಿಗಳ ಪ್ರಾರ್ಥನೆ
ಸಂಜಯ್ ದತ್ ಪೋಸ್ಟ್ ಗೆ ಅಭಿಮಾನಿಗಳು ಶುಭಕೋರಿ ಬೇಗ ಗುಣಮುಖರಾಗಿ ಎಂದು ಹಾರೈಸುತ್ತಿದ್ದಾರೆ. ಇತ್ತೀಚಿಗೆ ಮೊದಲ ಹಂತದ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತೆರಳುತ್ತಿದ್ದ ಸಮಯದಲ್ಲಿ ಸಂಜಯ್ ದತ್ ಕ್ಯಾಮರಾ ಮುಂದೆ 'ನನಗಾಗಿ ಪ್ರಾರ್ಥಿಸಿ' ಎಂದು ಹೇಳುತ್ತಾ ಚಿಕಿತ್ಸೆಗೆ ತೆರಳಿದ್ದರು.

ಸಂಜಯ್ ದತ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಪತ್ನಿ
ಸಂಜಯ್ ದತ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ಪತ್ನಿ ಮಾನ್ಯತಾ ದತ್ "ಸಂಜಯ್ ದತ್ ಪ್ರಾಥಮಿಕ ಚಿಕಿತ್ಸೆಯನ್ನು ಮುಂಬೈನಲ್ಲಿ ಪೂರ್ಣಗೊಳಿಸಲಿದ್ದಾರೆ. ಕೊರೊನಾ ಪರಿಸ್ಥಿತಿಯ ಆಧಾರದ ಮೇಲೆ ಮುಂದಿನ ಯೋಜನೆ ನಿರ್ಧಾರವಾಗಲಿದೆ. ಅನಾರೋಗ್ಯದ ಬಗ್ಗೆ ವದಂತಿ ಹಬ್ಬಿಸದಂತೆ ಕೈ ಮುಗಿದು ಕೇಳಿ ಕೊಳ್ಳುತ್ತೇನೆ. ವೈದ್ಯರು ಅವರ ಕೆಲಸವನ್ನು ಮಾಡುತ್ತಿದ್ದಾರೆ. ನಾವು ಸಂಜಯ್ ದತ್ ಆರೋಗ್ಯದ ಬಗ್ಗೆ ಅಪ್ ಡೇಟ್ ನೀಡುತ್ತೇವೆ" ಎಂದು ಹೇಳಿದ್ದಾರೆ.

ಸಂಜಯ್ ದತ್ ಸಿನಿಮಾಗಳು
ಸಂಜಯ್ ಕನ್ನಡದ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅಧೀರನ ಪಾತ್ರದಲ್ಲಿ ಮಿಂಚುತ್ತಿರುವ ಸಂಜಯ್ ದತ್ ಲುಕ್ ಈಗಾಗಲೇ ರಿವೀಲ್ ಆಗಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಸಂಜಯ್ ದತ್ ಅವರ ಒಂದೆರಡು ದೃಶ್ಯಗಳು ಬಾಕಿ ಇದೆಯಂತೆ. ಇನ್ನೂ ಮಹೇಶ್ ಭಟ್ ನಿರ್ದೇಶನದ ಸಡಕ್-2 ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಜೊತೆಗೆ ಭುಜ್: ಪ್ರೈಡ್ ಆಫ್ ಇಂಡಿಯಾ ಸಿನಿಮಾದಲ್ಲಿಯೂ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ.


Click it and Unblock the Notifications










