ಬಾಲಿವುಡ್ ತಾರೆ ಕಾಜೋಲ್ ಬಳೆ ಕದ್ದ ಠಕ್ಕ ಸಿಕ್ಕ
ಬಾಲಿವುಡ್ ನಟ ಅಜಯ್ ದೇವಗನ್ ಹಾಗೂ ಅವರ ಅರ್ಧಾಂಗಿ ಕಾಜೋಲ್ ದಂಪತಿಗಳ ಜುಹೂ ಬಂಗಲೆಯಲ್ಲಿ ಚಿನ್ನದ ಬಳೆಗಳು ಕಳುವಾಗಿದ್ದವು. ಈ ಬಳೆಗಳನ್ನು ಕದ್ದ ಠಕ್ಕರು ಸಿಕ್ಕಿಬಿದ್ದಾರೆ. ಬಂಗಲೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ನೌಕರರೇ ಆ ಖತರ್ನಾಕ್ ಕಳ್ಳರು.
ಕಾಜೋಲ್ ದಂಪತಿಗಳ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಗಾಯತ್ರಿ ದೇವೇಂದ್ರ (22), ಸಂತೋಷ್ ಪಾಂಡೆ (33) ಬಳೆಗಳನ್ನು ಕದ್ದವರೆಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಕೊಟ್ಟ ಮಾಹಿತಿ ಹೀಗಿದೆ...ಕಳೆದ ಎರಡು, ಮೂರು ವರ್ಷಗಳಿಂದ ಗಾಯತ್ರಿ ದೇವೇಂದ್ರ, ಸಂತೋಷ್ ಪಾಂಡೆ ಎಂಬುವವರು ದೇವಗನ್ ಮನೆಯನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ.
ಉತ್ತರ ಭಾರತದಲ್ಲಿ ಗಂಡನ ದೀರ್ಘಾಯುಷ್ಯಕ್ಕಾಗಿ ಆಚರಿಸುವ ಕರ್ವಚೌತಿ ದಿನ ಮನೆಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ಇವರಿಗೆ ಒಪ್ಪಿಸಲಾಗಿತ್ತು. ಅಕ್ಟೋಬರ್ 19ರಂದು ಇವರು ಬಳೆಗಳನ್ನು ಕದ್ದಿದ್ದಾರೆ. ಆದರೆ ಕಳುವಾದ ಸಂಗತಿ ಕಾಜೋಲ್ ದಂಪತಿಗಳಿಗೆ ಗೊತ್ತಾಗಿದ್ದು ಮೂರು ದಿನಗಳ ಬಳಿಕ.ಆ ಬಳಿಕ ಕಾಜೋಲ್ ಅವರು ಜುಹೂ ಪೊಲೀಸ್ ಠಾಣೆಯಲ್ಲಿ ತಮ್ಮ ಚಿನ್ನದ ಬಳೆಗಳು ಕಳುವಾಗಿರುವ ಬಗ್ಗೆ ದೂರು ನೀಡಿದ್ದರು. ಸರಿಸುಮಾರು ರು.5 ಲಕ್ಷ ಬೆಲೆಬಾಳುವ 17 ಬಳೆಗಳು ಕಾಣೆಯಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಬೀರುವಿನಲ್ಲಿದ್ದ ಆಭರಣಗಳ ಕಪಾಟಿನಿಂದ ಬಳೆಗಳನ್ನು ಅಪಹರಿಸಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕೇಸು ನಮೂದಿಸಿಕೊಂಡಿದ್ದರು. ಮನೆಯ ನೌಕರರು, ಅನುಮಾನಿತರನ್ನು ವಿಚಾರಣೆ ನಡೆಸಿದರು. ಮನೆಯ ನೌಕರರ ಪಾಲಿಗ್ರಾಫಿ ಪರೀಕ್ಷೆ ಮಾಡಿದ ಮೇಲೆ ಇವರಿಬ್ಬರೂ ಸಿಕ್ಕಿಬಿದ್ದಿದ್ದಾರೆ.
ವಿಚಾರಣೆ ಬಳಿಕ ಕದ್ದಿರುವುದನ್ನು ದೇವೇಂದ್ರ ಹಾಗೂ ಸಂತೋಷ್ ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ ನಾಲ್ಕು ಬಳೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಬಳೆಗಳನ್ನು ಕರಗಿಸಲಾಗಿದೆ. ಅಂದಹಾಗೆ ಅಜಯ್ ದೇವಗನ್ ಮನೆಯಲ್ಲಿ ಕಳ್ಳತನ ನಡೆಯುತ್ತಿರುವುದು ಇದು ಎರಡನೇ ಬಾರಿ. 2008ರಲ್ಲಿ ಒಮ್ಮೆ ಮನೆಯಲ್ಲಿ ಆಭರಣಗಳು ಕಳುವಾಗಿದ್ದವು. ಆಗಲೂ ಮನೆಯ ನೌಕರನೇ ಕದ್ದಿದ್ದ. (ಏಜೆನ್ಸೀಸ್)


Click it and Unblock the Notifications












