ಆರ್ಎಸ್ಎಸ್ ಅನ್ನು ತಾಲಿಬಾನ್ಗೆ ಹೋಲಿಸಿದ ಜಾವೇದ್ ಅಖ್ತರ್: ಕ್ಷಮೆ ಕೋರುವಂತೆ ಬಿಜೆಪಿ ಪಟ್ಟು
ಬಾಲಿವುಡ್ನ ಹಿರಿಯ, ಜನಪ್ರಿಯ ಗೀತ ರಚನೆಕಾರ, ಚಿತ್ರಕತೆ ರಚನೆಕಾರ, ಮಾಜಿ ರಾಜ್ಯಸಭಾ ಸದಸ್ಯ ಜಾವೇದ್ ಅಖ್ತರ್ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ಹೊರಹಾಕಿದೆ.
ಜಾವೇದ್ ಅಖ್ತರ್ ಇತ್ತೀಚೆಗೆ ಮಾಧ್ಯಮದೊಟ್ಟಿಗೆ ಮಾತನಾಡುತ್ತಾ, ಆರ್ಎಸ್ಎಸ್ ಅನ್ನು ತಾಲಿಬಾನ್ ಜೊತೆ ಹೋಲಿಸಿದ್ದಾರೆ. ಇದು ಬಿಜೆಪಿ ಮುಂಖಡರನ್ನು ಕೆರಳಿಸಿದೆ. ಜಾವೇದ್ ಅಖ್ತರ್ ಕೈ ಮುಗಿದು ಆರ್ಎಸ್ಎಸ್ನ ಕ್ಷಮೆ ಕೇಳಬೇಕು, ಇಲ್ಲವಾದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಕೆಲವು ಬಿಜೆಪಿ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
''ಜಾವೇದ್ ಅಖ್ತರ್ ಕೆಲಸ ಮಾಡಿರುವ ಯಾವುದೇ ಸಿನಿಮಾವನ್ನು ಪ್ರದರ್ಶನ ಮಾಡಲು ಬಿಡುವುದಿಲ್ಲ'' ಎಂದು ಮಹಾರಾಷ್ಟ್ರದ ಬಿಜೆಪಿ ಶಾಸಕ ಮತ್ತು ವಕ್ತಾರ ರಾಮ್ ಕದಮ್ ಗುಡುಗಿದ್ದಾರೆ.

ಮಾಧ್ಯಮವೊಂದರಲ್ಲಿ ಮಾತನಾಡಿದ್ದ ಜಾವೇದ್ ಅಖ್ತರ್, ''ಯಾವುದೇ ಧರ್ಮದ ಬಲಪಂಥೀಯರನ್ನು ಗಮನಿಸಿ ಅವರೆಲ್ಲ ಒಂದೇ ಅಗಿರುತ್ತಾರೆ. ಮುಸ್ಲಿಂ ಬಲಪಂಥೀಯರು, ಕ್ರಿಶ್ಚಿಯನ್ ಬಲಪಂಥೀಯರು, ಹಿಂದಿ ಬಲಪಂಥೀಯರು ಎಲ್ಲರೂ ಒಂದೇ. ಎಲ್ಲರೂ ಧರ್ಮವೇ ದೊಡ್ಡದು, ಧರ್ಮಕ್ಕೆ ಮಿಗಿಲಾದ ಕಾನೂನು ಇಲ್ಲವೆಂದು ವಾದಿಸುತ್ತಾರೆ. ಆಧುನಿಕತೆಯು ಮನುಷ್ಯನನ್ನು ಹಾಳು ಮಾಡುತ್ತದೆ ಎನ್ನುತ್ತಾರೆ. ಎಲ್ಲ ಧರ್ಮದ ಬಲಪಂಥೀಯರು ಒಂದೇ ಆದರೆ ಮುಖಗಳಷ್ಟೆ ಬದಲು'' ಎಂದಿದ್ದರು ಜಾವೇದ್.
ಮುಂದುವರೆದು, ''ಯಾವ ಕಾನೂನು ಸಹ ಧರ್ಮಕ್ಕಿಂತ ದೊಡ್ಡದಲ್ಲ ಎಂಬುದು ತಾಲಿಬಾನಿಗಳ ವಾದ. ಅದೇ ವಾದವನ್ನು ಹಿಂದು ಬಲಪಂಥೀಯರು ಸಹ ಮಾಡುತ್ತಾರೆ. ಬಳೆ ಮಾರುವ ಮುಸ್ಲಿಂ ಅನ್ನು ಹೊಡೆಯುವುದು, ಟೀ ಮಾರುವ ಮುಸ್ಲಿಂ ಮೇಲೆ ದಾಳಿ ಮಾಡುವುದು ಇದೆಲ್ಲವೂ ಇವರೂ ಸಹ ತಾಲಿಬಾನಿಗಳಾಗುತ್ತಿರುವ ಕುರುಹುಗಳು. ಇಬ್ಬರೂ ಒಂದೇ ಆದರೆ ಹೆಸರುಗಳು ಮಾತ್ರ ಬೇರೆ'' ಎಂದು ಜಾವೇದ್ ಅಖ್ತರ್ ಹಿಂದು ಬಲಪಂಥೀಯರನ್ನು ತಾಲಿಬಾನ್ಗೆ ಹೋಲಿಸಿದರು.
''ತಾಲಿಬಾನಿಗಳಿಗೆ ಇಸ್ಲಾಮಿಕ್ ರಾಷ್ಟ್ರ ಬೇಕು ಹಾಗೆಯೇ ಇವರಿಗೆ ಹಿಂದು ರಾಷ್ಟ್ರ ಬೇಕು. ತಾಲಿಬಾನಿಗಳ ಕಾರ್ಯಗಳು ಖಂಡನೀಯ. ಅವರು ಅನಾಗರೀಕರು. ಹಾಗೆಯೇ ಇತರೆ ಧರ್ಮದ ಬಲಪಂಥೀಯರು ಸಹ. ಹಾಗೂ ಆರ್ಎಸ್ಎಸ್, ವಿಎಚ್ಪಿ, ಬಜರಂಗದಳಕ್ಕೆ ಬೆಂಬಲ ನೀಡುವವರೂ ಸಹ'' ಎಂದಿದ್ದಾರೆ ಜಾವೇದ್ ಅಖ್ತರ್.
ಜಾವೇದ್ ಅಖ್ತರ್ ಮಾತಿಗೆ ಬಿಜೆಪಿ, ಆರ್ಎಸ್ಎಸ್ ಹಾಗೂ ಇತರೆ ಹಿಂದು ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಬಿಜೆಪಿ ಶಾಸಕ ರಾಮ್ ಕದಮ್ ಮಾತನಾಡಿ, ಜಾವೇದ್ ಅಖ್ತರ್ ಕೆಲಸ ಮಾಡಿರುವ ಯಾವುದೆ ಸಿನಿಮಾವನ್ನು ದೇಶದೆಲ್ಲೆಡೆ ಬಿಡುಗಡೆ ಆಗಲು ಬಿಡುವುದಿಲ್ಲ. ಜಾವೇದ್ ಅಖ್ತರ್ ಎರಡೂ ಕೈ ಜೋಡಿಸಿ ಆರ್ಎಸ್ಎಸ್ಗೆ, ವಿಎಚ್ಪಿಗೆ, ಭಜರಂಗ ದಳಕ್ಕೆ ಕ್ಷಮೆ ಕೋರಬೇಕು'' ಎಂದಿದ್ದಾರೆ.
''ಆರ್ಎಸ್ಎಸ್ ಹಿನ್ನೆಲೆಯ ಮುಖಂಡರು ಸರ್ಕಾರವನ್ನು ರಾಜಧರ್ಮದ ಮೂಲಕ ಪಾಲಿಸುತ್ತಿದ್ದಾರೆ. ಅದೇ ಒಂದೊಮ್ಮೆ ತಾಲಿಬಾನ್ ಆಡಳಿತ ಇದ್ದಿದ್ದರೆ ಜಾವೇದ್ ಅಖ್ತರ್ ಈ ಮಾತನ್ನು ಹೇಳಲು ಸಾಧ್ಯವಾಗುತ್ತಿತ್ತೆ. ಆರ್ಎಸ್ಎಸ್ ಅನ್ನು ತಾಲಿಬಾನಿಗಳ ಜೊತೆಗೆ ಹೋಲಿಸಿ ಆರ್ಎಸ್ಎಸ್ ಕಾರ್ಯಕರ್ತರಿಗೆ ಜಾವೇದ್ ಅಖ್ತರ್ ಅಪಮಾನ ಮಾಡಿದ್ದಾರೆ. ಕೂಡಲೇ ಅವರು ಕ್ಷಮೆ ಕೇಳಬೇಕು'' ಎಂದಿದ್ದಾರೆ.
ಬಿಜೆಪಿ ಯುವ ಮೋರ್ಚಾ ಸದಸ್ಯರು ಜುಹುವಿನಲ್ಲಿರುವ ಜಾವೇದ್ ಅಖ್ತರ್ ನಿವಾಸದ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಯುವ ಮೋರ್ಚಾ ಮುಖಂಡ, ''ಜಾವೇದ್ ಅಖ್ತರ್ಗೆ ಮಾನಸಿಕ ಸ್ಥಿತಿಮಿತ ತಪ್ಪಿದೆ ಎನಿಸುತ್ತದೆ. ಈ ದೇಶ ಜಾವೇದ್ಗೆ ಎಲ್ಲವನ್ನೂ ನೀಡಿದೆ. ಆರ್ಎಸ್ಎಸ್ ಜನಗಳ ಜೀವನ ಸುಧಾರಣೆಗೆ ಸಹಾಯ ಮಾಡುತ್ತಿದೆ ಆದರೆ ಅದನ್ನು ಜಾವೇದ್ ತಾಲಿಬಾನ್ಗೆ ಹೋಲಿಸಿದ್ದಾರೆ. ಕೂಡಲೇ ಜಾವೇದ್ ಅಖ್ತರ್ ಕ್ಷಮೆ ಕೇಳದೆ ಇದ್ದರೆ ಅವರ ವಿರುದ್ಧ ನಮ್ಮ ಹೋರಾಟ ಇನ್ನಷ್ಟು ತೀವ್ರವಾಗಲಿದೆ'' ಎಂದಿದ್ದಾರೆ.


Click it and Unblock the Notifications











