ಶ್ರೀದೇವಿಗೆ ಹಂಟರ್ನಲ್ಲಿ ಹೊಡೆದಿದ್ದೆ: ನಟ ರಂಜಿತ್
ನಟಿ ಶ್ರೀದೇವಿ ಕಾಲವಾಗಿ ಮೂರು ವರ್ಷಗಳಾದವು. ಭಾರತೀಯ ಚಿತ್ರರಂಗದಲ್ಲಿ ಬಹುದೊಡ್ಡ ಯಶಸ್ಸು ಗಳಿಸಿದ ನಾಯಕಿಯರಲ್ಲಿ ನಟಿ ಶ್ರೀದೇವಿ ಸಹ ಒಬ್ಬರು. ಅವರೊಬ್ಬ ಸೂಪರ್ ಸ್ಟಾರ್ ಆಗಿದ್ದರು. ಆದರೆ ಅವರನ್ನು ಹಂಟರ್ನಲ್ಲಿ ಹೊಡೆದಿದ್ದಾಗಿ ಹಿರಿಯ ನಟರೊಬ್ಬರು ಹೇಳಿಕೊಂಡಿದ್ದಾರೆ.
ಹಿಂದಿ ಸೇರಿದಂತೆ ಹಲವು ಭಾಷೆಗಳ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದ ರಂಜಿತ್ ತಾವು ಒಮ್ಮೆ ನಟಿ ಶ್ರೀದೇವಿಯನ್ನು ಹಂಟರ್ನಲ್ಲಿ ಹೊಡೆದಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
''ಅಂದು ನನ್ನ ತಂದೆ ತೀರಿಕೊಂಡಿದ್ದರು. ದೇಶದ ಹಲವು ಮೂಲೆಗಳಿಂದ ನಮ್ಮ ಸಂಬಂಧಿಗಳು ನಾನಿದ್ದ ಮನೆಗೆ ಬರುತ್ತಿದ್ದರು. ನಮ್ಮ ಕುಟುಂಬದ ಹಿರಿಯವರಾಗಿದ್ದರು ನಮ್ಮ ತಂದೆ. ನನಗೆ ಬಹಳ ದುಃಖವಾಗಿತ್ತು. ಆದರೆ ನಾನು ಅಲ್ಲಿ ಇರಲಿಲ್ಲ. ಕೂಡಲೆ ವಿಮಾನದಲ್ಲಿ ಹೈದರಾಬಾದ್ಗೆ ಬಂದು ಚಿತ್ರೀಕರಣದಲ್ಲಿ ತೊಡಗಿಕೊಂಡೆ'' ಎಂದಿದ್ದಾರೆ ರಂಜಿತ್.

ಶ್ರೀದೇವಿಯನ್ನು ಹಂಟರ್ನಿಂದ ಹೊಡೆದೆ: ರಂಜಿತ್
''ಅಂದು ಚಿತ್ರೀಕರಣಕ್ಕೆ ಬಂದವನೇ ಹೆಚ್ಚಿನ ಜೋಶ್ನಲ್ಲಿ ನಟನೆ ಮಾಡಿದೆ. ವಿಲನ್ ರೀತಿಯಲ್ಲಿ ಜೋರಾಗಿ ನಕ್ಕೆ. ಶ್ರೀದೇವಿಯನ್ನು ಹಂಟರ್ನಿಂದ ಹೊಡೆಯುವ ದೃಶ್ಯವಿತ್ತು. ಜೋರಾಗಿಯೇ ಹೊಡೆದೆ. ಹಾಗೆ ಹೊಡೆದ ಬಳಿಕ ಅಳುತ್ತಲೇ ನಾನು ಮೇಕಪ್ ರೂಂ ಸೇರಿದೆ'' ಎಂದಿದ್ದಾರೆ ರಂಜಿತ್. ತಾವು ಹೊಡೆದಿದ್ದಕ್ಕೆ ಶ್ರೀದೇವಿ ಹೇಗೆ ಪ್ರತಿಕ್ರಿಯಿಸಿದರು ಎಂಬುದನ್ನು ರಂಜಿತ್ ಹೇಳಿಲ್ಲ.

ಅಂದಿನ ದಿನವೆಲ್ಲ ದುಃಖದಲ್ಲಿಯೇ ಕಳೆದೆ: ರಂಜಿತ್
ಅಂದಿನ ದಿನವೆಲ್ಲ ಬಹಳ ದುಃಖದಲ್ಲಿಯೇ ಇದ್ದೆ. ಕ್ಯಾಮೆರಾದ ಮುಂದೆ ವಿಲನ್ನಂತೆ ಇದ್ದರೂ ಶಾಟ್ ಕಟ್ ಆಗುತ್ತಿದ್ದಂತೆ ವಿಷಾದ ಆವರಿಸಿಕೊಳ್ಳುತ್ತಿತ್ತು. ಅಳುತ್ತಲೇ ಇದ್ದೆ. ಆಗಾಗ್ಗೆ ತಣ್ಣಗಿನ ಸೋಡಾನಲ್ಲಿ ಮುಖ ತೊಳೆದುಕೊಳ್ಳುತ್ತಿದ್ದೆ. ನಾನು ಅಳುವುದು ಯಾರಿಗೂ ಗೊತ್ತಾಗಬಾರದೆಂದು ಹೀಗೆ ಮಾಡುತ್ತಿದ್ದೆ ಎಂದಿದ್ದಾರೆ ರಂಜಿತ್.

ನನ್ನ ತಂದೆ ಶ್ರೀದೇವಿಗೆ ಹೊಡೆದಿದ್ದರು: ಬಾಲಕೃಷ್ಣ
ಕೆಲವು ದಿನಗಳ ಹಿಂದೆ ತೆಲುಗು ನಟ ಬಾಲಕೃಷ್ಣ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ''ನನ್ನ ತಂದೆ ಎನ್ಟಿಆರ್ ಶ್ರೀದೇವಿಗೆ ಹೊಡೆದು ನಟನೆ-ನೃತ್ಯ ಕಲಿಸುತ್ತಿದ್ದರು'' ಎಂದು ಹೇಳಿದ್ದರು. ಶ್ರೀದೇವಿಗೆ ಮಾತ್ರವೇ ಅಲ್ಲ ಇನ್ನೂ ಕೆಲವು ನಟಿಯರಿಗೆ ತಮ್ಮ ತಂದೆ ಹೊಡೆದು-ಹೊಡೆದು ಹೇಳಿಕೊಡುತ್ತಿದ್ದರು ಎಂದಿದ್ದರು ನಟ ಬಾಲಕೃಷ್ಣ.

ನಟಿಯರಿಗೆ ಹೊಡೆಯುವ ಸುದ್ದಿಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ
60-70 ರ ದಶಕದಲ್ಲಿ ನಿರ್ದೇಶಕರು ನಟಿಯರಿಗೆ, ಹೊಸ ನಟರಿಗೆ ಸೆಟ್ನಲ್ಲಿ ಹೊಡೆಯುವುದು ಸಾಮಾನ್ಯ ಎಂಬಂಥ ಪರಿಸ್ಥಿತಿ ಇತ್ತು. ಕೆಲವು ದಿನಗಳ ಹಿಂದೆ ಹಿರಿಯ ನಟಿ ಜಯಂತಿ ನಿಧನರಾದಾಗ, ನಟಿ ಲಕ್ಷ್ಮಿ, ತೆಲುಗಿನ ಸಿನಿಮಾ ನಿರ್ದೇಶಕನೊಬ್ಬ ನಟಿ ಜಯಂತಿ ಅವರ ಕಪಾಳಕ್ಕೆ ಹೊಡೆದಿದ್ದ ಸನ್ನಿವೇಶವನ್ನು ನೆನಪಿಸಿಕೊಂಡಿದ್ದರು. ಅಷ್ಟೇ ಅಲ್ಲ ಖ್ಯಾತ ನಟ ಮಣಿರತ್ನಂ ಸಹ ಸರಿಯಾಗಿ ನಟಿಸದಿದ್ದರೆ ನಟಿಯರನ್ನು ಹೊಡೆಯುತ್ತಾರೆ ಎಂಬ ಸುದ್ದಿ ಜೋರಾಗಿಯೇ ಹರಿದಾಡುತ್ತಿತ್ತು. ಕನ್ನಡದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ವಿರುದ್ಧವೂ ನಟಿ ಐಂದ್ರಿತಾ ಇದೇ ಮಾದರಿಯ ಆರೋಪವನ್ನು ಮಾಡಿದ್ದರು.

ಯಾರು ನಟ ರಂಜಿತ್
ನಟ ರಂಜಿತ್ ವಿಷಯಕ್ಕೆ ಮರಳುವುದಾದರೆ, 200 ಕ್ಕೂ ಹೆಚ್ಚು ಹಿಂದಿ ಸಿನಿಮಾಗಳಲ್ಲಿ ಈ ನಟ ನಟಿಸಿದ್ದಾರೆ. ವಿಲನ್ ಪಾತ್ರಗಳಿಗೆ ರಂಜಿತ್ ಬಹಳ ಖ್ಯಾತರಾಗಿದ್ದರು. ಹಿಂದಿ ಚಿತ್ರರಂಗದ ಬಹುತೇಕ ಎಲ್ಲ ಖ್ಯಾತ ನಟರ ಎದುರು ರಂಜಿತ್ ವಿಲನ್ ಆಗಿ ನಟಿಸಿದ್ದಾರೆ. ಎರಡು ಹಿಂದಿ ಸಿನಿಮಾಗಳನ್ನು ನಿರ್ದೇಶನ ಸಹ ಮಾಡಿದ್ದಾರೆ. ಒಂದು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. 79 ವರ್ಷ ವಯಸ್ಸಾಗಿರುವ ರಂಜಿತ್ ಈಗಲೂ ನಟಿಸಲು ಆಸಕ್ತಿ ಇರುವುದಾಗಿಯೂ ಪಾತ್ರಗಳು ಸಿಕ್ಕರೆ ನಟಿಸುವುದಾಗಿಯೂ ಹೇಳಿಕೊಂಡಿದ್ದಾರೆ. ಜೊತೆಗೆ ಒಂದು ಐತಿಹಾಸಿಕ ಸಿನಿಮಾ ನಿರ್ದೇಶನ ಮಾಡುವ ಕನಸೂ ಇದೆ ಎಂದು ಹೇಳಿಕೊಂಡಿದ್ದಾರೆ.


Click it and Unblock the Notifications










