ಕರಣ್ ಜೋಹರ್ ಹೆಸರು ಕೇಳಿದ್ರೆ ಕೆಂಡಕಾರುತ್ತಿದ್ದ ಕಂಗನಾ ಈಗ ಹಾಡಿಹೊಗಳಿದ್ದೇಕೆ?
ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ ಸದಾ ವಿವಾದಗಳ ಮೂಲಕವೇ ಸದ್ದು ಮಾಡುತ್ತಿದ್ದರು. ಬಾಲಿವುಡ್ ಮಾಫಿಯಾ, ಗೂಂಡಾ ಎಂದೆಲ್ಲಾ ಬಾಲಿವುಡ್ ವಿರುದ್ಧ ಕೆಂಡಕಾರುತ್ತಿದ್ದರು. ಅದರಲ್ಲೂ ನಿರ್ಮಾಪಕ ಕರಣ್ ಜೋಹರ್ ವಿರುದ್ಧ ಸದಾ ಆರೋಪಗಳನ್ನು ಮಾಡುತ್ತಾ, ಕರಣ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಕಂಗನಾ ಈಗ ಏಕಾಏಕಿ ಕರಣ್ ಜೋಹರ್ ನನ್ನು ಹೊಗಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಕರಣ್ ವಿರುದ್ಧ ಅಸಹಿಷ್ಣುತೆ, ಸ್ವಜನ ಪಕ್ಷಪಾತ ಆರೋಪ ಮಾಡಿದ್ದ ಕಂಗನಾ, ಕರಣ್ ಹೆಸರು ಹೇಳಿದ್ರೆ ಸಾಕು ಉರಿದುಬೀಳುತ್ತಿದ್ರು. ಹೊರಗಿನಿಂದ ಬಂದವರನ್ನು ಕರಣ್ ಬಾಲಿವುಡ್ನಲ್ಲಿ ಬೆಳೆಯಲು ಬಿಡುವುದಿಲ್ಲ, ಹೊರಗಿನ ಪ್ರತಿಭೆಗಳಿಗೆ ಕರಣ್ ಪ್ರೋತ್ಸಾಹ ನೀಡುವುದಿಲ್ಲ ಎಂದು ಕಂಗನಾ ಆಕ್ರೋಶ ಹೊರಹಾಕುತ್ತಿದ್ದರು. ಇದೀಗ ಅದೇ ಕರಣ್ ಜೋಹರ್ನನ್ನು ಕಂಗನಾ ಹಾಡಿಹೊಗಳಿದ್ದಾರೆ.
ಅಷ್ಟಕ್ಕೂ ಕಂಗನಾ ದಿಢೀರ್ ಅಂತ ಕರಣ್ನನ್ನು ಹೊಗಳಲು ಕಾರಣವಾಗಿದ್ದು 'ಶೇರ್ ಷಾ' ಸಿನಿಮಾ. ಕರಣ್ ಜೋಹರ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಶೇರ್ ಷಾ ಸಿನಿಮಾ ನೋಡಿ ಕಂಗನಾ ಫಿದಾ ಆಗಿದ್ದಾರೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರಪ್ರೇಕ್ಷಕರು ಸಿನಿಮಾ ನೋಡಿ ಹಾಡಿ ಹೊಗಳುತ್ತಿದ್ದಾರೆ. ಈ ನಡುವೆ ಕಂಗನಾ ಕೂಡ 'ಶೇರ್ ಷಾ' ನೋಡಿ ಪ್ರಶಂಸೆ ವ್ಯಕ್ತಪಡಿಸಿರುವುದು ಅಚ್ಚರಿ ಮೂಡಿಸಿದೆ.

ಕರಣ್ ಜೋಹರ್ ನಿರ್ಮಾಣದ ಧರ್ಮ ಪ್ರೊಡಕ್ಷನ್ ನಲ್ಲಿ ಶೇರ್ ಷಾ ಸಿನಿಮಾ ಮೂಡಿಬಂದಿದೆ. ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ 'ಶೇರ್ ಷಾ' ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಬಯೋಪಿಕ್. ಈ ಬಗ್ಗೆ ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
1999 ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಫೋಟೋವನ್ನು ಕಂಗನಾ ಶೇರ್ ಮಾಡಿದ್ದಾರೆ. "ನ್ಯಾಷನಲ್ ಹೀರೋ ವಿಕ್ರಮ್ ಬಾತ್ರಾ, ಹಿಮಾಚಲದ ಪಾಲಂಪುರದ ಹುಡುಗ, ಅತ್ಯಂತ ಜನಪ್ರಿಯ ಮತ್ತು ಪ್ರೀತಿಯ ಸೈನಿಕ. ದುರಂತ ಸಂಭವಿಸಿದಾಗ ಈ ಸುದ್ದಿ ಹಿಮಾಚಲ ಪ್ರದೇಶದಕಲ್ಲಿ ಕಾಳ್ಗಿಚ್ಚಿನಂತೆ ಹರಡಿತು. ಆಗ ನಾನಿನ್ನು ಚಿಕ್ಕ ಹುಡುಗಿ, ಆ ಘಟನೆ ನನ್ನನ್ನು ತುಂಬಾ ನೋವುತಂದಿತ್ತು" ಎಂದಿದ್ದಾರೆ.

ರಿಯಲ್ ಹೀರೋ ವಿಕ್ರಮ್ ಬಾತ್ರಾ ಅವರ ಬಗ್ಗೆ ಮಾತನಾಡಿದ ಕಂಗನಾ, ಚಿತ್ರದಲ್ಲಿ ವಿಕ್ರಮ್ ಬಾತ್ರಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರನ್ನು ಹಾಡಿಹೊಗಳಿದ್ದಾರೆ. "ಎಂಥಹ ಅದ್ಭುತ ಗೌರವ ಸಿದ್ಧಾರ್ಥ್ ಮಲ್ಹೋತ್ರ. ಇಡೀ ತಂಡಕ್ಕೆ ಅಭಿನಂದನೆಗಳು. ಇದು ಒಂದು ದೊಡ್ಡ ಜವಾಬ್ದಾರಿಯಾಗಿತ್ತು" ಎಂದು ಕಂಗನಾ ಶೇರ್ ಷಾ ಚಿತ್ರ ಮತ್ತು ಇಡೀ ತಂಡವನ್ನು ಹಾಡಿಹೊಗಳಿದ್ದಾರೆ.
ಇನ್ನು ಕಂಗನಾ ಸಿನಿಮಾ ವಿಚಾರಕ್ಕೆ ಬರುವುದಾದರೆ, ಸದ್ಯ ತಲೈವಿ ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಬಹುನಿರೀಕ್ಷೆಯ ತಲೈವಿ ಸಿನಿಮಾ ಇದೆ ಗಣೇಶ ಹಬ್ಬಕ್ಕೆ ತೆರೆಗೆ ಬರುತ್ತಿದೆ. ಸೆಪ್ಟಂಬರ್ 10ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ.
ಈ ಸಿನಿಮಾ ಜೊತೆಗೆ ಧಾಕಡ್ ಸಿನಿಮಾದ ಚಿತ್ರೀಕರಣವನ್ನು ಮುಗಿಸಿದ್ದಾರೆ.ಯೂರೋಪ್ನಲ್ಲಿ ಕೊನೆಯ ಹಂತದ ಚಿತ್ರೀಕರಣ ಮುಗಿಸಿದ ಸಿನಿಮಾತಂಡ ಪಾರ್ಟಿಯಲ್ಲಿ ಭಾಗಿಯಾಗಿತ್ತು. ಧಾಕಡ್ ಕೊನೆಯ ದಿನದ ಪಾರ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಂಗನಾ ಸದ್ಯ ತೇಜಸ್ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಚಿತ್ರದಲ್ಲಿ ಕಂಗನಾ ವಾಯುಸೇನೆಯ ಪೈಲೆಟ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಮೊದಲ ಲುಕ್ ಈಗಾಗಲೇ ಬಿಡುಗಡೆಯಾಗಿದ್ದು, ಕಂಗನಾ ತೇಜಸ್ ಲುಕ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.


Click it and Unblock the Notifications










