ಅನುರಾಧಾ ಭಟ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಹಿನ್ನಲೆ ಗಾಯಕಿ. ಮಂಗಳೂರಿನಲ್ಲಿ ಜನಿಸಿದ ಇವರು MBA ಪದವಿ ಪಡೆದು ಕೆಲಕಾಲ ಬಹುರಾಷ್ಟ್ರೀಯ ಕಂಪನಿಯಲ್ಲಿ HR ಆಗಿ ಕೆಲಸ ಮಾಡಿದರು.ಆದರೆ ಸಂಗೀತ ಕಡೆಗೆ ಅಪಾರ ಒಲವನ್ನು ಹೊಂದಿದ್ದ ಇವರು ಶೀಘ್ರವೇ ಉದ್ಯೋಗ ತೊರೆದು ಪೂರ್ಣ ಸಮಯ ಸಂಗೀತ ಸಾಧನೆಗೆ ಮೀಸಲಿಟ್ಟರು. ಸಂಗೀತದ ಜೊತೆಗೆ ಭರತನಾಟ್ಯವನ್ನು ಕಲಿತರು. ಕೆಲವು ಕಿರುತೆರೆ ಗಾಯನ ಶೋಗಳಲ್ಲಿ ಸ್ಪರ್ಧಿಸುತ್ತಿದ್ದ ಇವರನ್ನು ಹಂಸಲೇಖರವರು ಗುರುತಿಸಿ ತಮ್ಮ `ಮೀರಾ ಮಾಧವ ರಾಘವ' ಚಿತ್ರದಲ್ಲಿ ಹಿನ್ನಲೆ ಗಾಯನಕ್ಕೆ ಅವಕಾಶ ಕೊಟ್ಟರು. ಹಂಸಲೇಖರ ನಿರ್ದೇಶನದಲ್ಲಿ ಸಾಕಷ್ಟು ಚಿತ್ರಗಳ ಟ್ರಾಕ್ ಹಾಡುಗಳನ್ನು ಹಾಡಿದ್ದಾರೆ. ಎಷ್ಟೋ ಸಾರಿ ಮೂಲಗೀತೆಗಳಿಗಿಂತ ಇವರ ಟ್ರ್ಯಾಕ್ ಹಾಡುಗಳನ್ನೇ ಚಿತ್ರದ ಅಲ್ಬಂಗಳಲ್ಲಿ ಉಳಿಸಿಕೊಂಡಿದ್ದುಂಟು.
ಮೊಟ್ಟ ಮೊದಲ ಬಾರಿಗೆ ತಮ್ಮ ಹಾಡುಗಳನ್ನು ಬೆಳ್ಳಿತೆರೆಯಲ್ಲಿ ಕೇಳಿದಾಗ ಆದ ಅನುಭವವನ್ನು ಅನುರಾಧಾ ಭಟ್ ಈ ಕೆಳಗಿನಂತೆ ಹೇಳುತ್ತಾರೆ.''ಆಡಿಯೋ ಲಾಂಚ್ ಆದಾಗ ಮೀಡಿಯಾ ಮುಂದೆ ಹಂಸಲೇಖ ಸರ್ ನನ್ನ ಬಗ್ಗೆ ಚೆನ್ನಾಗಿ ಮಾತನಾಡಿದರು. ಎಲ್ಲರಿಗೂ ನನ್ನನ್ನು ಪರಿಚಯ ಮಾಡಿಸಿದರು. ಆ ದಿನದ ಪ್ರತಿ ಕ್ಷಣ ಕೂಡ ಸೂಪರ್ ಆಗಿತ್ತು. ಸಿನಿಮಾ ಪ್ರಿಮಿಯರ್ ವೇಳೆ ನನ್ನ ಹಾಡುಗಳನ್ನು ಮೊದಲ ಬಾರಿಗೆ ತೆರೆ ಮೇಲೆ ನೋಡುವಾಗ ಬಹಳ ಖುಷಿ ಆಯ್ತು. ಫಸ್ಟ್ ಟೈಂ ನನ್ನ ಹಾಡುಗಳನ್ನು ದೊಡ್ಡ ಪರದೆ ಮೇಲೆ ಡಿಟಿಎಸ್ ಸೌಂಡ್ ನಲ್ಲಿ ಕೇಳುವ ಮಜಾನೇ ಬೇರೆ ಇತ್ತು.''