ಕೆ ಮಂಜು ಜೀವನಚರಿತ್ರೆ
ಕೆ.ಮಂಜು ಎಂದೇ ಪ್ರಖ್ಯಾತವಾಗಿರುವ ಕೊಬ್ಬರಿ ಮಂಜು ಕನ್ನಡ ಚಲನಚಿತ್ರರಂಗದ ಪ್ರಖ್ಯಾತ ನಿರ್ಮಾಪಕರು. ತುರುವೇಕೆರೆಯಲ್ಲಿ ಜನಿಸಿದ ಇವರು ಚಿತ್ರವಿತರಕರಾಗಿ ,ನಿರ್ಮಾಪಕರಾಗಿ ಪ್ರಸಿದ್ಧರು. `ಕೆ ಮಂಜು ಸಿನಿಮಾಸ್' ಮತ್ತು `ಲಕ್ಷ್ಮಿಶ್ರೀ ಕಂಬೈನ್ಸ್' ಪ್ರೊಡಕ್ಷನ್ಸ್ ಅಡಿಯಲ್ಲಿ ಸುಮಾರು ನಲವತ್ತಕ್ಕಿಂತಲೂ ಹೆಚ್ಚಿಗೆ ಚಿತ್ರಗಳನ್ನು ನಿರ್ಮಿಸಿದ್ದಾರೆ. ಇವರ ಹಲವಾರು ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿವೆ.
ಬಾಲ್ಯ,ಸಿನಿಪಯಣ
ಬಾಲ್ಯದಿಂದಲೂ ವಿಷ್ಣುವರ್ಧನವರ ಅಭಿಮಾನಿಯಾಗಿದ್ದ ಇವರು ವಿಷ್ಣು ಚಿತ್ರಗಳನ್ನು ನೋಡಲು ಚಿತ್ರಮಂದಿರಕ್ಕೆ ಹೋಗುವಾಗ ಹಾರ ತೆಗೆದುಕೊಳ್ಳಲು ತಂದೆಯ ಪೆಟ್ಟಿಗೆಯಿಂದ ಹಣ ಕದಿಯುತ್ತಿದ್ದರು. ಇವರ ತಂದೆ ಕೊಬ್ಬರಿ ಮಾರುತ್ತಿದ್ದರು. ಮೊದಲು ತಂದೆಗೆ ಸಹಾಯ ಮಾಡುತ್ತಿದ್ದ ಮಂಜು ನಂತರ ಅಟೋ ಡ್ರೈವರ್ ಆಗಿ ದುಡಿಯತೊಡಗಿದರು. ಮದುವೆಯಾಗಿ ,ಒಂದು ಚಿಕ್ಕ ಮನೆಯನ್ನು ಕೂಡ ಕಟ್ಟಿದರು. ಒಬ್ಬ ಚಿತ್ರ ನಿರ್ದೇಶಕ ಇವರಿಂದ ಸಾಲ ಪಡೆದಾಗ ಇವರಿಗೆ ಚಿತ್ರರಂಗದ ಮೊದಲ ಪರಿಚಯವಾಗಿದ್ದು. ನಂತರ `ಪೋಲಿಸ್ ಸ್ಟೋರಿ' ಚಿತ್ರದಲ್ಲಿ ಸ್ವಲ್ಪ ಹಣ ಹಾಕಿ ಚಿಕ್ಕ ಲಾಭ ಮಾಡಿಕೊಂಡರು. ಮುಂದೆ ಚಿತ್ರನಿರ್ಮಾಣಕ್ಕೆ ಇಳಿದ ಇವರು ತನ್ನ ಅಭಿಮಾನದ ಮೂರ್ತ ಸ್ವರೂಪ ವಿಷ್ಣುವರ್ಧನರಿಗೆ `ಜಮೀನ್ದಾರು' ಚಿತ್ರ ನಿರ್ಮಿಸಿದರು. ನಂತರ ವಿಷ್ಣುರ ಆಪ್ತ ಬಳಗಕ್ಕೆ ಸೇರಿದ ಇವರು ವಿಷ್ಣು ಮನೆಯ ಹತ್ತಿರವೇ ಒಂದು ಪ್ಲಾಟ್ ಖರೀದಿ ಮಾಡಿ ವಾಸಿಸತೊಡಗಿದರು. ಕನ್ನಡ ಹೊರತಾಗಿ ಬೇರೆ ಭಾಷೆಗಳಲ್ಲೂ ಚಿತ್ರ ನಿರ್ಮಿಸಿದ್ದಾರೆ. ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ಹಿರೋಗಳ ಚಿತ್ರಗಳನ್ನು ನಿರ್ಮಿಸಿದ್ದಾರೆ.
ಸಿನಿಮಾ ಕ್ಷೇತ್ರದಲ್ಲಿನ ಸಾಧನೆಗಾಗಿ 'ಇಂಡಿಯನ್ ವರ್ಚುವಲ್ ಅಕಾಡೆಮಿ ಫಾರ್ ಪೀಸ್ ಅಂಡ್ ಎಜುಕೇಷನ್' ಕೆ.ಮಂಜು ಅವರಿಗೆ ಡಾಕ್ಟರೇಟ್ ನೀಡಿ ಗೌರವಿಸಿದೆ.