ಮುಖ್ಯಮಂತ್ರಿ ಚಂದ್ರು
ಮುಖ್ಯಮಂತ್ರಿ ಚಂದ್ರು ಜೀವನಚರಿತ್ರೆ
ಬೆಂಗಳೂರಿನಲ್ಲಿ ನೆಲೆಸಿರುವ ಮುಖ್ಯಮಂತ್ರಿ ಚಂದ್ರು ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ. ಖಳನಾಯಕನ ಪಾತ್ರದಿಂದ ಹಿಡಿದು,ಹಾಸ್ಯ, ಪೋಷಕ ಪಾತ್ರಗಳಲ್ಲಿ ತಮ್ಮದೆ ಛಾಪು ಮೂಡಿಸಿರುವ ಚಂದ್ರು ರಂಗಭೂಮಿಯ ಹಿನ್ನಲೆಯಿಂದ ಚಿತ್ರರಂಗಕ್ಕೆ ಬಂದರು. ಕಲಾಗಂಗೋತ್ರಿ ತಂಡದ `ಮುಖ್ಯಮಂತ್ರಿ' ನಾಟಕದಲ್ಲಿ ಮುಖ್ಯಮಂತ್ರಿಯ ಪಾತ್ರ ಮಾಡಿದ ಮೇಲೆ ಇವರ ಹೆಸರಿಗೆ ಮುಖ್ಯಮಂತ್ರಿ ಪ್ರತ್ಯಯ ಸೇರಿಕೊಂಡಿತು. 40 ವರ್ಷಗಳ ನಂತರವೂ ಇನ್ನು ಆ ನಾಟಕದ ಜನಪ್ರಿಯತೆ ಕಡಿಮೆಯಾಗಿಲ್ಲ. ಈಗಲೂ ಚಂದ್ರುರವರು ಆ ನಾಟಕದಲ್ಲಿ `ಮುಖ್ಯಮಂತ್ರಿ' ಪಾತ್ರ ಮಾಡುತ್ತಿದ್ದಾರೆ.
1983 ರಲ್ಲಿ ಅಂಬರೀಶ್ ಅಭಿನಯದ `ಚಕ್ರವ್ಯೂಹ' ಚಿತ್ರದಲ್ಲಿ ರಾಜಕಾರಣಿಯ ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಇವರು ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡಪರ ಹೋರಾಟಗಳಿಗೆ ಹೆಸರಾಗಿರುವ ಚಂದ್ರು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು.
ವೈಯಕ್ತಿಕ ಜೀವನ
1953 ರಲ್ಲಿ ನೆಲಮಂಗಲದ ಹೊನ್ನಸಂದ್ರದ ರೈತ ಕುಟುಂಬದಲ್ಲಿ ಜನಿಸಿದ ಚಂದ್ರು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶಿಕ್ಷಣ ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗುಮಾಸ್ತನ ಕೆಲಸ ಮಾಡುತ್ತಲೇ ನಾಟಕದತ್ತ ಆಕರ್ಷಿತರಾದ ಚಂದ್ರು `ರವೀಂದ್ರ ಕಲಾಕ್ಷೇತ್ರ'ದ ನಿತ್ಯ ಅತಿಥಿಯಾದರು. 1983 ರಲ್ಲಿ ನಟಿ ಪದ್ಮಾ ಅವರನ್ನು ಕೈಹಿಡಿದರು. ಈ ದಂಪತಿಗೆ ಇಬ್ಬರು ಮಕ್ಕಳು.