ಭಗವಾನ್ ಎಂದೇ ಪ್ರಸಿದ್ಧರಾಗಿರುವ ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರು, ನಿರ್ಮಾಪಕರು ಮತ್ತು ನಟರು. 1933ರಲ್ಲಿ ಮೈಸೂರಿನಲ್ಲಿ ತಮಿಳು ಅಯ್ಯಂಗಾರ್ ಕುಟುಂಬದಲ್ಲಿ ಜನಿಸಿದ ಇವರು ಯುವಕರಾಗಿದ್ದಾಗಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. 1956 ರಲ್ಲಿ ಕಣಗಾಲ್ ಪ್ರಭಾಕರ ಶಾಸ್ತ್ರೀಗಳಿಗೆ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸದ ಇವರು 1966 ರಲ್ಲಿ ತೆರೆಕಂಡ `ಸಂಧ್ಯಾರಾಗ' ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ಬಡ್ತಿ ಪಡೆದರು. ನಂತರ ನಿರ್ದೇಶಕ ದೊರೈರಾಜ್ ಜೊತೆಗೂಡಿದ ಇವರು ಸ್ವತಂತ್ರರಾಗಿ ಚಿತ್ರನಿರ್ದೇಶಿಸಲು ಆರಂಭಿಸಿದರು. ಈ ನಿರ್ದೇಶಕ ಜೋಡಿ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದೆ.
1993ರಲ್ಲಿ ದೊರೈರಾಜ್ ನಿಧನದ ನಂತರ ಚಿತ್ರನಿರ್ದೇಶನಕ್ಕೆ ವಿದಾಯ ಹೇಳಿದರು. ಸುಮಾರು 49 ಚಿತ್ರಗಳನ್ನು ನಿರ್ದೇಶಿಸಿದ ಈ ಜೋಡಿಯ 32 ಚಿತ್ರಗಳಲ್ಲಿ ಡಾ.ರಾಜಕುಮಾರ್ ನಾಯಕನಟರಾಗಿ ನಟಿಸಿದ್ದು ವಿಶೇಷ. ಸಾಮಾಜಿಕ ಕಳಕಳಿ ಹೊಂದಿದ್ದ ಇವರು 24 ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸದ್ದಾರೆ. ಚಿತ್ರ ನಿರ್ದೇಶನಕ್ಕೆ ವಿದಾಯ ಹೇಳಿದ ನಂತರ `ಆದರ್ಶ ಸಿನಿಮಾ ಇನ್ಸ್ಟಿಟ್ಯೂಟ್'ನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದು ರಾಜನ್-ನಾಗೇಂದ್ರ ಜೋಡಿ.
ನಿಧನ: ಚಂದನವನ ಕಂಡ ಅತಿ ಯಶಸ್ವಿಯುತ ನಿರ್ದೇಶಕರಲ್ಲಿ ಓರ್ವರಾದ ಹಿರಿಯ ನಿರ್ದೇಶಕ ಎಸ್ ಕೆ ಭಗವಾನ್, 2023ರ ಫೆಬ್ರವರಿ 20ರಂದು ಇಹಲೋಕ ತ್ಯಜಿಸಿ ಬಾರದ ಲೋಕಕ್ಕೆ ಪಯಣ ಬೆಳೆಸಿದರು. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಭಗವಾನ್ ಅವರು ಚಿಕತ್ಸೆ ಫಲಕಾರಿಯಾಗದೇ ಅಸುನೀಗಿದರು. ಎಸ್ ಕೆ ಭಗವಾನ್ ಅವರಿಗೆ 90 ವರ್ಷ ವಯಸ್ಸಾಗಿತ್ತು.
ಪ್ರಸಿದ್ಧ ಚಿತ್ರಗಳು
ಜೇಡರ ಬಲೆ (1968)
ಕಸ್ತೂರಿ ನಿವಾಸ (1971)
ಎರಡು ಕನಸು (1974)
ಬಯಲು ದಾರಿ (1976)
ಆಪರೇಷನ್ ಡೈಮಂಡ್ ರಾಕೆಟ್ (1978)
ಗಿರಿಕನ್ಯೆ (1977)
ಚಂದನದ ಗೊಂಬೆ (1979)
ಮುನಿಯನ ಮಾದರಿ (1981)
ಹೊಸಬೆಳಕು (1982)
ಬೆಂಕಿಯ ಬಲೆ (1982)
ಯಾರಿವನು (1984)
ನೀನು ನಕ್ಕರೆ ಹಾಲು ಸಕ್ಕರೆ (1991)
ಜೀವನ ಚೈತ್ರ (1992)
ಒಡಹುಟ್ಟಿದವರು (1994)