ಶ್ರುತಿ ಹರಿಹರನ್ ಕನ್ನಡ ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಇವರು 1989ರ ಫೆಬ್ರವರಿ 02ರಂದು ತಮಿಳು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಮೂಲತಃ ಕೇರಳ ಮೂಲದವರಾಗಿದ್ದರೂ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಮ್ಮ ಬಾಲ್ಯ ವಿದ್ಯಾಭ್ಯಾಸವನ್ನು ಶಿಶುಗೃಹ ಮಾಂಟೆಸರಿ ಶಾಲೆಯಲ್ಲಿ ಪೂರ್ಣಗೊಳಿಸಿದ ಇವರು, ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿಬಿಎಂನಲ್ಲಿ ಪದವಿ ಪಡೆದರು.
ನಂತರ ಭರತನಾಟ್ಯ ನೃತ್ಯದ ತರಬೇತಿ ಪಡೆದ ಶ್ರುತಿ, ಕಾಲೇಜು ದಿನಗಳಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಹೀಗೆ ಬಾಲ್ಯದಿಂದಲೇ ನೃತ್ಯ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದ ಇವರಿಗೆ ಮೊದಲು ಕನ್ನಡ ಚಿತ್ರಗಳ ನಾಯಕ ಮತ್ತು ನಾಯಕಿಯರ ಜೊತೆ ನೃತ್ಯ ಮಾಡುವ ಅವಕಾಶ ದೊರೆಯಿತು. ಸುಮಾರು ಮೂರು ವರ್ಷಗಳ ಕಾಲ ನೃತ್ಯ ಮಾಡುತ್ತಾ, ಶಾರ್ಟ್ ಫಿಲ್ಮಗಳಲ್ಲಿ ನಟಿಸುವ ಅವಕಾಶ ಪಡೆದರು.
ನಂತರದಲ್ಲಿ ಮಾಲಯಾಳಂ ಸಿನಿಮಾ ನಟಿಸಲು ಆರಂಭಿಸಿದರು. ಆದರೆ, ಮಲಯಾಳಂ ಚಿತ್ರರಂಗದಲ್ಲಿ ಅಷ್ಟು ಯಶಸ್ಸು ಸಿಗಲಿಲ್ಲ. 2013ರಲ್ಲಿ ಲೂಸಿಯಾ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟರು. ಈ ಚಿತ್ರ ಇವರಿಗೆ ಒಳ್ಳೆ ಇಮೇಜ್ ನೀಡಿತು. ಜೊತೆಗೆ ಹಲವು ಕನ್ನಡ ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಬಂದವು.
ಮೀಟೂ ಪ್ರಕರಣ: 2018ರಲ್ಲಿ ವಿವಿಧ ಚಿತ್ರರಂಗಗಳಲ್ಲಿ ಹುಟ್ಟಿಕೊಂಡಿದ್ದ ಮೀಟೂ ಅಭಿಯಾನ ದೊಡ್ಡ ಮಟ್ಟದ ವಿವಾದಗಳನ್ನು ಸೃಷ್ಟಿಸಿತ್ತು. ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ನಟಿ ಶೃತಿ ಹರಿಹರನ್ ಸಹ ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಅಭಿಯಾನದಡಿಯಲ್ಲಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.
ನಿರ್ದೇಶಕ ಅರುಣ್ ವೈದ್ಯನಾಥನ್ ನಿರ್ದೇಶಿಸಿದ್ದ ವಿಸ್ಮಯ ಚಿತ್ರದಲ್ಲಿ ನಟ ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ನಾಯಕ ಹಾಗೂ ನಾಯಕಿಯಾಗಿ ಗಂಡ - ಹೆಂಡತಿ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿನ ಕೆಲ ದೃಶ್ಯಗಳ ಚಿತ್ರೀಕರಣದ ಸಂದರ್ಭದಲ್ಲಿ ತನಗೆ ಅರ್ಜುನ್ ಸರ್ಜಾರಿಂದ ಲೈಂಗಿಕ ಕಿರುಕುಳ ಆಗಿತ್ತು ಎಂದು ಶೃತಿ ಹರಿಹರನ್ ಆರೋಪಿಸಿದ್ದರು. ಹೀಗೆ ಶೃತಿ ಹರಿಹರನ್ ಆರೋಪದ ಆಧಾರದ ಮೇಲೆ ತನಿಖೆ ಆರಂಭಿಸಿದ್ದ ಕಬ್ಬನ್ ಪಾರ್ಕ್ ಪೊಲೀಸರಿಗೂ ಸಹ ಅರ್ಜುನ್ ಸರ್ಜಾ ಅವರನ್ನು ವಿಚಾರಣೆಗೆ ಕರೆತರುವಷ್ಟು ಸಾಕ್ಷಿ ಆಧಾರಗಳು ಸಿಗದಿದ್ದ ಕಾರಣ ಬಿ ರಿಪೋರ್ಟ್ ಸಲ್ಲಿಸಿದ್ದರು.