ಮೈಸೂರು ಶ್ರೀಕಂಠಯ್ಯ ಉಮೇಶ್ (MS ಉಮೇಶ್) ಕನ್ನಡ ಚಿತ್ರರಂಗದ ಪ್ರಖ್ಯಾತ ಹಾಸ್ಯನಟ,ನಿರ್ದೇಶಕ ಮತ್ತು ನಿರ್ಮಾಪಕ. ಸುಮಾರು ಐದು ದಶಕಗಳ ತಮ್ಮ ಸಿನಿಪಯಣದಲ್ಲಿ ನಾನ್ನೂರಕ್ಕೂ ಹೆಚ್ಚು ಚಿತ್ರಗಳಿಗೆ ಜೀವ ತುಂಬಿದ್ದಾರೆ. ಚಿತ್ರರಂಗಕ್ಕೆ ಬರುವ ಮುನ್ನ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದರು.
1945 ರಲ್ಲಿ ಮೈಸೂರಿನಲ್ಲಿ ಶ್ರೀಕಂಠಯ್ಯ ಮತ್ತು ನಂಜಮ್ಮ ದಂಪತಿಗಳಿಗೆ ಜನಿಸಿದ ಇವರು ಬಾಲ್ಯದಿಂದಲೇ ರಂಗಭೂಮಿಯೆಡೆಗೆ ಆಕರ್ಷಿತರಾಗಿದ್ದರು. ಬಾಲನಟನಾಗಿ ಕೇವಲ ನಾಲ್ಕು ವರ್ಷದವರಿದ್ದಾಗಲೇ ರಂಗಭೂಮಿ ಸೇರಿ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚತೊಡಗಿದರು. ಮಾಸ್ಟರ್ ಹಿರಣ್ಣಯ್ಯ ಮತ್ತು ಗುಬ್ಬಿ ಕಂಪನಿಗಳಲ್ಲಿ ಬಾಲನಟನಾಗಿದ್ದಲೇ ಇವರ ನಟನೆ ನೋಡಿದ ಪುಟ್ಟಣ್ಣ ಕಣಗಾಲ್ ಬಿ.ಆರ್.ಪಂತಲುರವರ ಚಿತ್ರ `ಮಕ್ಕಳ ರಾಜ್ಯ'ದಲ್ಲಿ ಅವಕಾಶ ನೀಡಲು ಶಿಫಾರಸು ಮಾಡಿದರು.
ಇವರಿಗೆ ಹೆಸರು ತಂದು ಕೊಟ್ಟಿದ್ದು 1977 ರಲ್ಲಿ ತೆರೆಕಂಡ ಕಣಗಾಲ್ರ ಚಿತ್ರ ಸಂಕಲನ `ಕಥಾಸಂಗಮ'. ಈ ಚಿತ್ರದ ನಟನೆಗಾಗಿ ರಾಜ್ಯ ಸರ್ಕಾರದ ಉತ್ತಮ ಪೋಷಕ ನಟ ಪ್ರಶಸ್ತಿ ಪಡೆದರು. ಇಲ್ಲಿಂದ ಉಮೇಶ್ರವರಿಗೆ ಅವಕಾಶಗಳು ಮಹಾಪೂರವೇ ಬಂದಿತು..
ಅನಂತನಾಗ ಮುಖ್ಯಭೂಮಿಕೆಯಲ್ಲಿದ್ದ `ಗೋಲ್ಮಾಲ್ ರಾಧಾಕೃಷ್ಣ' ಚಿತ್ರದ ಸೀತಾಪತಿ ಪಾತ್ರ ತುಂಬಾ ಜನಪ್ರಿಯತೆ ತಂದುಕೊಟ್ಟಿತು. ಈ ಚಿತ್ರದ `ಅಪಾರ್ಥ ಮಾಡಕ್ಕೋಬೇಡಿ' ದೃಶ್ಯ ಕನ್ನಡದ ಎವರಗ್ರೀನ್ ಕಾಮಿಡಿ ದೃಶ್ಯಗಳೊಲ್ಲಂದು.