ವಿಜಯ್ ಪ್ರಕಾಶ್
ವಿಜಯ್ ಪ್ರಕಾಶ್ ಜೀವನಚರಿತ್ರೆ
ವಿಜಯ ಪ್ರಕಾಶ್ ಕನ್ನಡ ಚಿತ್ರರಂಗದ ಪ್ರಖ್ಯಾತ ಗಾಯಕ. `ಜೈಹೋ' ಗೀತೆಯ ಮುಖಾಂತರ ಭಾರತದಾದ್ಯಂತ ಜನಪ್ರಿಯರಾಗಿರುವ ಇವರು ಮೂಲತಃ ಮೈಸೂರಿನವರು. 1976ರಲ್ಲಿ ಮೈಸೂರಿನಲ್ಲಿ ಎಲ್.ಶೇಷರಾಮು ಮತ್ತು ಆರ್.ಲೋಪಮುದ್ರಾ ದಂಪತಿ ಪುತ್ರನಾಗಿ ಜನಿಸಿದರು. ಇವರ ತಾತ ಕರ್ನಾಟಕದ ಕಲಾತಿಲಕ ಎಂದೇ ಪ್ರಸಿದ್ಢರಾಗಿರುವ ಲಕ್ಷ್ಮಿಪತಿ ಭಾಗವತರ್. ಇವರು ಹುಟ್ಟಿ ಬೆಳದಿದ್ದೆಲ್ಲಾ ಮೈಸೂರಿನಲ್ಲಿ. ಸೇಂಟ್ ಥಾಮಸ್ ಕಾನ್ವೆಂಟ್ ಶಾಲೆಯಲ್ಲಿ ಓದಿದ್ದು. ಚಿಕ್ಕವಯಸ್ಸಿನಿಂದಲೂ ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಇವರು ಬಾಲ್ಯದಲ್ಲಿ ಕನ್ನಡ ರಾಜ್ಯೋತ್ಸವದಲ್ಲಿ ಮೊದಲ ಬಾರಿಗೆ ಸ್ಟೇಜ್ ಮೇಲೆ ಹಾಡಿ ಪ್ರಶಸ್ತಿ ಪಡೆದರು.
ನಂತರ ಇಂಜಿನಿಯರಿಂಗ್ ಪದವಿ ಸೇರಿದರು. ಆದರೆ ಸಂಗೀತದಲ್ಲಿನ ಅತೀವ ಆಸಕ್ತಿಯಿಂದಾಗಿ ಪದವಿ ತೊರೆದು ಯಾರಿಗೂ ಹೇಳದೆ ಮನೆ ಬಿಟ್ಟು ಮುಂಬೈಗೆ ತೆರಳಿದರು. ಅಲ್ಲಿ ತಿನ್ನೋಕು ದುಡ್ಡು ಇರದೇ, ಎಲ್ಲಿ ಇರಬೇಕೆಂದು ತಿಳಿಯದೇ ಎಷ್ಟೋ ದಿನ ರೇಲ್ವೆ ಸ್ಟೇಷನ್ನಲ್ಲಿ ಕೂಡ ಮಲಗಿದ್ದುಂಟು. ನಂತರ ಕಷ್ಟಪಟ್ಟು ಸಂಗೀತ ನಿರ್ದೇಶಕ ಸುರೇಶ್ ವಾಡ್ಕರ್ ಹತ್ತಿರ ತಲುಪಿದರು. ಇವರ ವಿಜಯ ಪ್ರಕಾಶ್ರವರ ಧ್ವನಿ ಇಷ್ಟಪಟ್ಟು ಅಲ್ಲಿನ `ರಾಧಾ ಕೃಷ್ಣ' ದೇವಾಲಯದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು.
ನಂತರ ಸುರೇಶ್ ವಾಡ್ಕರ್ ಮುಖಾಂತರ ಹಲವು ಜಾಹೀರಾತುಗಳಿಗೆ ಧ್ವನಿ ನೀಡಿದರು. ನಂತರ ರೇಡಿಯೋವಾಣಿ ಎಂಬ ಸ್ಟುಡಿಯೋದಲ್ಲಿ ಇವರು ಭಾವಿ ಪತ್ನಿ ಮಹತಿ ಮುಖಾಂತರ ಸೀರಿಯಲ್ ಒಂದರಲ್ಲಿ ಹಾಡಿದರು. ಅಮಿತಾಭ್ ಬಚ್ಚನ್ ನಟನೆಯ `ಚೀನಿ ಕಮ್' ಚಿತ್ರದ ಮೂಲಕ ಸಿನಿರಂಗದಲ್ಲಿ ಹಿನ್ನಲೆ ಗಾಯಕರಾಗಿ ಪಯಣ ಆರಂಭಿಸಿದರು. ನಂತರ ಎ.ಅರ್.ರೆಹಮಾನ್ರ `ಸ್ವದೇಶ್' ಚಿತ್ರಕ್ಕೆ ಹಾಡಿದರು.
2008ರಲ್ಲಿ ತೆರೆಕಂಡ `ಸ್ಲಮಡಾಗ್ ಮಿಲಿಯನೇರ್' ಚಿತ್ರದ `ಜೈಹೋ' ಹಾಡಿನ ಮುಖಾಂತರ ಪ್ರಸಿದ್ಧರಾದರು. ಈ ಹಾಡು ಆಸ್ಕರ್ ಮತ್ತು ಗ್ರ್ಯಾಮಿ ಪ್ರಶಸ್ತಿ ಪಡೆಯಿತು. 2001ರಲ್ಲಿ ತಾವು ಪ್ರೀತಿಸಿದ ಮಹಿತಿಯರೊಡನೆ ತಿರುಪತಿಯಲ್ಲಿ ಮದುವೆಯಾದರು. ಕನ್ನಡದಲ್ಲಿ ಇವರು ಹಾಡಿದ ಮೊದಲ ಹಾಡು ಗಾಳಿಪಟ ಚಿತ್ರದ `ಕವಿತೆ' ಹಾಡು.