Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೋಕಾಕ್ ಚಳವಳಿ ಮತ್ತು ಡಾ ರಾಜ್ಕುಮಾರ್: ಒಂದು ನೆನಪು
ಕನ್ನಡ ರಾಜ್ಯೋತ್ಸವ ಬಂತೆಂದರೆ ನಮ್ಮ ಭಾಷೆಯನ್ನು ಬೆಳೆಸಿದ, ಮೆರೆಸಿದ, ಗಡಿ-ಸೀಮೆಗಳಾಚೆಗೆ ಕನ್ನಡದ ಕಂಪನ್ನು ಹರಿಸಿದ ರಾಜ್ಯದ ಅನೇಕ ಮಹನೀಯರ ನೆನಪಾಗುತ್ತದೆ. ಈ ಎಲ್ಲ ಮಹನೀಯರ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಅಲಂಕರಿಸಿರುವವರು ಕನ್ನಡಿಗರ ಆರಾಧ್ಯ ದೈವ ಡಾ ರಾಜ್ಕುಮಾರ್.
ಕರ್ನಾಟಕ ಇತಿಹಾಸದಲ್ಲಿ ಕನ್ನಡ ಭಾಷೆಯ ಬಗ್ಗೆ ಈವರೆಗೆ ನಡೆದ ಅರ್ಥಪೂರ್ಣ, ಪರಿಣಾಮಕಾರಿ ಹಾಗೂ ಅತ್ಯಂತ ಪ್ರಬಲ ಹೋರಾಟವೆಂದು ಅದು ಗೋಕಾಕ್ ಚಳವಳಿ. ಈ ಚಳವಳಿಗೆ ಜೀವ ನೀಡಿದ್ದು, ಪ್ರಬಲ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಮಣಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಡಾ ರಾಜ್ಕುಮಾರ್.
ಇಂದು ಕನ್ನಡಿಗರಲ್ಲಿ ಭಾಷೆಯ ಬಗ್ಗೆ ಅಪಾರ ಪ್ರೇಮ, ಗೌರವ, ಹೆಮ್ಮೆ ಭಾಷೆಗಾಗಿ ಬಡಿದಾಡುವ ಕೆಚ್ಚು ತುಂಬಿದೆಯೆಂದರೆ ಅಂದು ಡಾ ರಾಜ್ಕುಮಾರ್ ಮಾಡಿದ್ದ ಹೋರಾಟದ ಫಲವೇ ಎಂದರೆ ಅತಿಶಯೋಕ್ತಿಯಲ್ಲ. ಚಲನಚಿತ್ರ ನಟರುಗಳನ್ನು ಸಿನಿಮಾಕ್ಕೆ ಸೀಮಿತ ಮಾಡಲಾಗಿದ್ದ ಸಮಯದಲ್ಲಿ ದೇಶಕ್ಕೆ ಮಾದರಿಯಾಗುವಂತೆ ಚಳವಳಿಯನ್ನು ಯಶಸ್ವಿಗೊಳಿಸಿದ್ದು ಡಾ ರಾಜ್ಕುಮಾರ್. ಕರ್ನಾಟಕ ರಾಜ್ಯೋತ್ಸವದಂದು ಈ ಗೋಕಾಕ್ ಚಳವಳಿಯ ಬಗ್ಗೆ ಸಣ್ಣ ಮೆಲುಕು ಹಾಕೋಣ.
ಹಿಂದಿ ಆಡಳಿತ ಭಾಷೆಯಾಗಿ ತಿದ್ದುಪಡಿ
1967 ರಲ್ಲಿ ಹಿಂದಿಯನ್ನು ಆಡಳಿತ ಭಾಷೆಯನ್ನಾಗಿ ಸಾವಿಂಧಾನಿಕ ತಿದ್ದುಪಡಿ ತರಲಾಯಿತು. ದಕ್ಷಿಣ ಭಾರತದಲ್ಲಿ ಹಿಂದಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಿಂದಿ ಜೊತೆಗೆ ಇಂಗ್ಲೀಷನ್ನು ಸೇರಿಸಲಾಯಿತು. ಹಾಗೆಯೇ ಶಾಲೆಗಳಲ್ಲಿ ಸಹ ಹಿಂದಿ ಮತ್ತು ಇಂಗ್ಲೀಷ್ ಶಿಕ್ಷಣ ಕಡ್ಡಾಯ ಎಂಬಂತಾಯಿತು. ಆದರೆ ಕನ್ನಡ ಐಚ್ಛಿಕ ಭಾಷೆಯಾಗಿಬಿಟ್ಟಿತು. ಬಹುತೇಕ ಶಾಲೆಗಳಲ್ಲಿ ಕನ್ನಡದ ಬದಲು ಸಂಸ್ಕೃತವನ್ನು ಕಲಿಸಲಾಗುತ್ತಿತ್ತು. ಹೆಚ್ಚು ಅಂಕ ಬರುವ ಸಾಧ್ಯತೆಯಿಂದ ಪೋಷಕರು, ವಿದ್ಯಾರ್ಥಿಗಳು ಸಂಸ್ಕೃತ ಹಾಗೂ ಇತರ ಭಾಷೆಗಳನ್ನೇ ಆಯ್ಕೆ ಮಾಡಿಕೊಳ್ಳಲಾರಂಭಿಸಿದರು.
ಹೋರಾಟದ ಆರಂಭ
ಇದಕ್ಕೆಲ್ಲ ಅಂತ್ಯ ಹಾಡಲು ಕನ್ನಡದ ಕವಿ ವಿ.ಕೃ.ಗೋಕಾಕರು ವಿಸ್ತೃತ ವರದಿಯೊಂದನ್ನು ಸಿದ್ಧಪಡಿಸಿದರು. ಅದರ ಅನುಷ್ಠಾನಕ್ಕೆ ಸಾಹಿತಿಗಳು, ಬೋಧಕ ವರ್ಗದವರು, ವಿದ್ಯಾರ್ಥಿಗಳು ಕೆಲವು ಸಂಘಟನೆಗಳು ಹೋರಾಟಕ್ಕೆ ಇಳಿದವು. ಈ ಹೋರಾಟದ ಮುಂಚೂಣಿಯಲ್ಲಿ ಜಿ ನಾರಾಯಣ ರಾವ್ ಇದ್ದರು. ಆಗಿನ ಕಾಲಕ್ಕೆ ಕಬ್ಬನ್ ಪಾರ್ಕ್ ನಿಂದ ವಿಧಾನಸೌಧಕ್ಕೆ ಪ್ರತಿಭಟನಾ ಮೆರವಣಿಗೆ ಮಾಡಿದರು. ಸಾಹಿತಿ ಚಂಪಾ ಧಾರಾವಾಡದಲ್ಲಿ ಪ್ರತಿಭಟನೆ ಮಾಡಿದರು. ಬಳಿಕ ಇನ್ನಷ್ಟು ಜನ ಪ್ರತಿಭಟನೆಗೆ ಸೇರಿಕೊಂಡರು. ಸರ್ಕಾರಗಳಿಗೆ ಸತತವಾಗಿ ಪತ್ರಗಳನ್ನು ಬರೆಯಲಾಯ್ತು. ಪ್ರತಿಭಟನೆಗೆ ಖಚಿತತೆ ಇತ್ತಾದರೂ ಜನರ ಪಾಲ್ಗೊಳ್ಳುವಿಕೆ ಇರಲಿಲ್ಲ.
ಚಳವಳಿಗೆ ಧುಮುಕಿದ ರಾಜ್ಕುಮಾರ್
ಇದೇ ಕಾರಣದಿಂದ ಪ್ರತಿಭಟನೆ ವಿಫಲವಾಗುತ್ತಿರುವಂತೆ ತೋರುತ್ತಿರುವ ಸಮಯದಲ್ಲಿ ಗೋಕಾಕ್ ಹೋರಾಟದ ಮುಂಚೂಣಿಯಲ್ಲಿದ್ದ ಸಾಹಿತಿಗಳಲ್ಲಿ ಕೆಲವರು ಡಾ ರಾಜ್ಕುಮಾರ್ ಅವರನ್ನು ರಂಗಕ್ಕೆ ಕರೆತಂದರು. ಜಿ ನಾರಾಯಣ ರಾವ್ ಅವರು ಮದ್ರಾಸ್ಗೆ ತೆರಳಿ, ರಾಜ್ಕುಮಾರ್ ಅವರನ್ನು ಭೇಟಿಯಾಗಿ ಅವರಿಗೆ ಹೋರಾಟದ ಉದ್ದೇಶಗಳನ್ನು ವಿವರಿಸಿದರು, ಕನ್ನಡ ಹಾಗೂ ಕರ್ನಾಟಕವೇ ಉಸಿರು ಎಂದು ಭಾವಿಸಿದ್ದ ಡಾ ರಾಜ್ಕುಮಾರ್ ಅವರು ಅರೆ ಕ್ಷಣ ತಡ ಮಾಡದೆ ಪ್ರತಿಭಟನೆಗೆ ಧುಮುಕಿದರು. ಆ ಮೇಲೆ ನಡೆದಿದ್ದೆಲ್ಲ ಇತಿಹಾಸ.
ಹೋರಾಟಕ್ಕೆ ಬಲ ತಂದ ರಾಜ್ಕುಮಾರ್
ರಾಜ್ಕುಮಾರ್ ಅವರು ಪ್ರತಿಭಟನೆಗೆ ಧುಮುಕಿ ರಾಜ್ಯ ಪ್ರವಾಸ ಕೈಗೊಂಡರು. ಬೆಂಗಳೂರು, ಕೋಲಾರಗಳಿಂದ ಹಿಡಿದು ಬೆಳಗಾವಿ ವರೆಗೆ ಹಲವಾರು ಜಿಲ್ಲೆಗಳನ್ನು ಸುತ್ತಿದರು. ಗೋಕಾಕ್ ವರದಿಯ ಮಹತ್ವವನ್ನು ಸಾರಿದರು. ಭಾಷಾ ಪ್ರೇಮವನ್ನು ಬಿತ್ತಿದರು, ಅಣ್ಣಾವ್ರು ಹೋದಲ್ಲೆಲ್ಲ ಜನ ಸಾಗರವೇ ಸೇರುತ್ತಿತ್ತು. ಅಣ್ಣಾವ್ರ ಜೊತೆಗೆ ವಿಷ್ಣುವರ್ಧನ್, ಅನಂತ್ನಾಗ್ ಸೇರಿದಂತೆ ಇನ್ನೂ ಕೆಲವರು ಸೇರಿಕೊಳ್ಳುತ್ತಿದ್ದರು. ಚಿತ್ರರಂಗವೇ ಬಂದ್ ಮಾಡಿ ಪ್ರತಿಭಟನೆಗೆ ಬಂದು ಬಿಟ್ಟಿತು. ಪ್ರತಿಭಟನೆ ದಿನೇ-ದಿನೇ ಬಿರುಸು ಪಡೆದುಕೊಂಡಿತು. ಜನರ ಬೆಂಬಲ ಅಭೂತಪೂರ್ವವಾಗಿ ದೊರಕಿತು. ಪ್ರತಿಭಟನಾ ಕಾರರಿಗೆ ಸರ್ಕಾರ ಮಣಿಯಲೇ ಬೇಕಾಯ್ತು. ಕರ್ನಾಟಕದ ಶಾಲೆಗಳಲ್ಲಿ ಇಂದು ಕನ್ನಡ ಪ್ರಥಮ ಭಾಷೆಯಾಗಿದೆ, ಇತರ ವಿಷಯಗಳನ್ನು ಕನ್ನಡದಲ್ಲಿ ಕಲಿಸಲಾಗುತ್ತಿದೆಯೆಂದರೆ ಅದಕ್ಕೆ ಡಾ ರಾಜ್ಕುಮಾರ್ ಪ್ರಮುಖ ಕಾರಣ ಎನ್ನಬಹುದು.