ಮಾರಿಯಾ ಹೀರೊಯಿನ್ ಆದ್ರೆ ಸಿನೆಮಾ ನೋಡ್ತೀರಾ?

ಮೈಸೂರಿನ ಕನ್ನಡ ನಟಿ ಮಾರಿಯಾ ಮೋನಿಕಾ ಸುಸೈರಾಜ್ ಶನಿವಾರ, ಮೂರು ವರ್ಷ ಜೈಲಿನಲ್ಲಿ ಕಳೆದು ಜು.1ರಂದು ಸ್ವತಂತ್ರ ಹಕ್ಕಿಯಾಗಿದ್ದಾರೆ. ಜೈಲು ಸರಳುಗಳಿಂದ ಹೊರಬಂದು ಇನ್ನೇನು ಹೊರಜಗತ್ತಿಗೆ ಕಾಲಿಡುತ್ತಿಲ್ಲ, ಅವರನ್ನು ಬಳಸಿಕೊಂಡು ದುಡ್ಡು ಮಾಡಿಕೊಳ್ಳಲು ನಾನಾ ಪ್ರಭೃತಿಗಳು ತುದಿಗಾಲ ಮೇಲೆ ನಿಂತಿದ್ದಾರೆ.
ಅಂಥವರಲ್ಲಿ ಪ್ರಥಮರು ಬಾಲಿವುಡ್ ಚಿತ್ರನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಮಾರಿಯಾ ಸುಸೈರಾಜ್ ಅವರನ್ನು ಸಿನೆಮಾ ಮಾಡುವುದಾಗಿ ವರ್ಮಾ ಘೋಷಿಸಿಯಾಗಿದೆ. ಕಥೆ ರೆಡಿಯಿಲ್ಲ, ಚಿತ್ರಕಥೆ ಬರೆದೇ ಇಲ್ಲ, ಆಗಲೇ ಚಿತ್ರ ನಿರ್ಮಿಸುವ ಕನಸನ್ನು ವರ್ಮಾ ತುಂಬಿಕೊಂಡುಬಿಟ್ಟಿದ್ದಾರೆ. ನೀರಜ್ ಹತ್ಯೆಯನ್ನೇ ಚಿತ್ರಮಾಡುತ್ತಾರಾ ತಿಳಿದಿಲ್ಲ.
ಇದೇ ರಾಮ್ ಗೋಪಾಲ್ ವರ್ಮಾ ಅವರು 2008ರಲ್ಲಿ ಮುಂಬೈ ದಾಳಿ ಸಂಭವಿಸಿ ತಾಜ್ ಹೊಟೇಲಿನಲ್ಲಿ ಅಂಟಿಕೊಂಡಿದ್ದ ರಕ್ತಸಿಕ್ತ ನೆಲವನ್ನೂ ಇನ್ನೂ ಒರೆಸಿರಲಿಲ್ಲ, ಆಗಲೇ ರಿತೇಶ್ ದೇಶಮುಖ್ ಜೊತೆ ಹಾಜರಾಗಿ ಕಂಡಕಂಡವರಿಂದ ಉಗಿಸಿಕೊಂಡಿದ್ದರು. ಈಗ ಮೋನಿಕಾ ಹಿಂದೆ ಬಿದ್ದಿದ್ದಾರೆ. ಈ ಚಿತ್ರವನ್ನು ಜನ ನೋಡಬೇಕಾ?
ಇಷ್ಟು ಮಾತ್ರವಲ್ಲ, ಬಿಗ್ ಬಾಸ್ ರಿಯಾಲಿಟಿ ಶೋ ನಡೆಸಿದ ಪ್ರೊಡಕ್ಷನ್ ಹೌಸ್ ತನ್ನ ಗುರಿಯನ್ನು ಮಾರಿಯಾ ಸುಸೈರಾಜ್ ಮೇಲಿಟ್ಟಿದೆ. ರಿಯಾಲಿಟಿ ಶೋಗೆ ಇಂಥವರೇ ಬೇಕು ಎಂಬಂತೆ ವರ್ತಿಸುತ್ತಿದ್ದಾರೆ. ಕಾಂಟ್ರೋವರ್ಸಿ, ಜಗಳ, ಅಪಸವ್ಯಗಳು ಇಲ್ಲದಿದ್ದರೆ ರಿಯಾಲಿಟಿ ಶೋಗಳು ಯಶಸ್ವಿಯಾಗುವುದಿಲ್ಲ ಎಂಬ ಮಟ್ಟಿಗೆ ಈ ಶೋಗಳು ಬಂದು ನಿಂತಿವೆ.
ಸಿಕ್ಕಾಪಟ್ಟೆ ಟಿಆರ್ಪಿ ಗಿಟ್ಟಿಸಬೇಕಿದ್ದರೆ ಇಂಥವರೇ ಇರಬೇಕಾ? ಕ್ರಿಮಿನಲ್ ಗಳನ್ನು ಮೆರೆದಾಡಿಸಲು ಇವರು ನಿಂತಿರುವುದು ಮತ್ತು ವೀಕ್ಷಕರು ಕೂಡ ಇಂಥ ರಿಯಾಲಿಟಿ ಇಲ್ಲದ ರಿಯಾಲಿಟಿ ಶೋಗಳನ್ನು ನೋಡುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸೈ.


Click it and Unblock the Notifications











