ಬೆಳ್ಳಿಹಬ್ಬ ಸಂಭ್ರಮದಲ್ಲಿ ಪ್ರೇಮ್ಗೆ ತೀವ್ರ ಮುಖಭಂಗ
ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯಲು ಹೋಗಿ ಜೋಗಯ್ಯ ನಿರ್ದೇಶಕ ಪ್ರೇಮ್ ಇಂಗು ತಿಂದ ಮಂಗನಂತಾದ ಸುದ್ದಿ ಇದು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಬೆಳ್ಳಿ ಹಬ್ಬ ಸಮಾರಂಭದಲ್ಲಿ 'ಜೋಗಯ್ಯ' ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಲು ಪ್ರೇಮ್ ನಿರ್ಧರಿಸಿದ್ದರು. ಆದರೆ ಅವರ ಪ್ರಯತ್ನ ವಿಫಲವಾಗಿದೆ. ಪ್ರೇಮ್ ಮೇಲೆ ಶಿವಣ್ಣ ಗರಂ ಆಗಿದ್ದೇ ಇದಕ್ಕೆಲ್ಲಾ ಕಾರಣ ಎನ್ನಲಾಗಿದೆ.
ಶಿವಣ್ಣನ ಬೆಳ್ಳಿಹಬ್ಬದ ಸಂಭ್ರಮದಲ್ಲಿ 'ಜೋಗಯ್ಯ' ಧ್ವನಿಸುರುಳಿ ಬಿಡುಗಡೆ ಮಾಡಲಾಗುತ್ತದೆ ಎಂದು ಪ್ರೇಮ್ ಈ ಹಿಂದೆ ಬುರುಡೆ ಬಿಟ್ಟಿದ್ದರು. ಅದು ಈಗ ನಿಜವೂ ಆಗಿದೆ. 'ಜೋಗಯ್ಯ' ಧ್ವನಿಸುರುಳಿ ಮಹಾಶಿವರಾತ್ರಿ ದಿನ ಬಿಡುಗಡೆ ಭಾಗ್ಯ ಕಂಡಿಲ್ಲ. ಯಾಕೀಗಾಯಿತು, ಇದಕ್ಕೆ ಬಲವಾದ ಕಾರಣ ಯಾವುದು ಎಂದು ಹುಡುಕ ಹೊರಟರೆ ಅಚ್ಚರಿ ಉತ್ತರ ಸಿಗುತ್ತದೆ.
ಶಿವರಾಜ್ ಕುಮಾರ್ ಬೆಳ್ಳಿಹಬ್ಬ ಸಮಾರಂಭದ ಬಗ್ಗೆ ಪೂರ್ವಭಾವಿಯಾಗಿ ಅಶೋಕ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಆಗ ಪ್ರೇಮ್ ತಮ್ಮ 'ಜೋಗಯ್ಯ' ಚಿತ್ರದ ಆಡಿಯೋವನ್ನು ಬೆಳ್ಳಿಹಬ್ಬದ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುತ್ತದೆ ಅಂದಿದ್ದರು. ಈ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಕಮಲ ಹಾಸನ್ ಅವರನ್ನು ಕರೆಸುತ್ತಿರುವುದಾಗಿ ತಿಳಿಸಿದ್ದರು. ಆದರೆ ಈಗ ಎಲ್ಲವೂ ಹುಸಿಯಾಗಿವೆ.
ಬಳಿಕ ಬೆಳ್ಳಿಹಬ್ಬದ ಸಂಭ್ರಮದ ಬಗ್ಗೆ ಶಿವರಾಜ್ ಕುಮಾರ್ ನಡೆಸಿದ ಪತ್ರಿಕಾಗೋಷ್ಠಿಯಲ್ಲೂ ಪ್ರೇಮ್ ಕಾಣೆಯಾಗಿದ್ದರು. ಆದರೆ ಕಾರ್ಯಕ್ರಮದ ರಿಹರ್ಸಲ್ನಲ್ಲಿ ಕಾಣಿಸಿಕೊಂಡರಾದರೂ ಈ ಕಾರ್ಯಕ್ರಮದ ಪೂರ್ಣ ಜವಾಬ್ದಾರಿಯನ್ನು ರಘುರಾಮ್ ಹೆಗಲಿಗೆ ಶಿವಣ್ಣ ವಹಿಸಿದ್ದರು. ರಘುರಾಮ್ ಕೂಡ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರ್ವಹಿಸಿದ್ದಾರೆ. ಇದರಲ್ಲಿ ಎರಡು ಮಾತಿಲ್ಲ ಬಿಡಿ.
ಶಿವಣ್ಣನ ಬೆಳ್ಳಿಹಬ್ಬದ ಸಂಭ್ರಮಕ್ಕಿಂತ ಪ್ರೇಮ್ ತಮ್ಮ ಜೋಗಯ್ಯ ಚಿತ್ರದ ಧ್ವನಿಸುರುಳಿ ಕಾರ್ಯಕ್ರಮಗಳಲ್ಲೇ ಬಿಜಿಯಾಗಿದ್ದದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಈ ಅಂಶ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಅವರ ಗಮನಕ್ಕೂ ಬಂದಿದೆ. ರು.80 ಲಕ್ಷದ ಕಾರ್ಯಕ್ರಮದ ಬಗ್ಗೆ ಪ್ರೇಮ್ ತೋರುತ್ತಿರುವ ಅಸಡ್ಡೆ ಹಾಗೂ ಜೋಗಯ್ಯನ ಬಗೆಗಿನ ಆಸಕ್ತಿಯೇ ಗೀತಾ ಅವರು ಪ್ರೇಮ್ರನ್ನು ಕಾರ್ಯಕ್ರಮದಿಂದ ದೂರ ಇಡಲು ಕಾರಣ ಎನ್ನಲಾಗಿದೆ.
ಈ ಕಾರ್ಯಕ್ರಮ ಅಷ್ಟು ಅಚ್ಚುಕಟ್ಟಾಗಿ ಮೂಡಿಬಂದಿದೆ ಎಂದರೆ ಅದಕ್ಕೆ ಪರೋಕ್ಷವಾಗಿ ಗೀತಾ ಶಿವರಾಜ್ ಕುಮಾರ್ ಅವರೇ ಕಾರಣ ಎನ್ನಬಹುದು. ಪ್ರೇಮ್ ಅವರ ಐಲು ಪೈಲು ಕೆಲಸಗಳ ಬಗ್ಗೆ ಶಿವರಾಜ್ ಕುಮಾರ್ ಕೂಡ ಗರಂ ಆಗಿದ್ದಾರೆ ಎಂಬ ಮಾಹಿತಿ ಇದೆ. ಈ ಎಲ್ಲಾ ಘಟನೆಗಳಿಂದ ಪ್ರೇಮ್ ಅತೀವ ಮುಖಭಂಗವಾದಂತಿದೆ. ಸದ್ಯಕ್ಕೆ ಪ್ರೇಮ್ ಗಪ್ ಚುಪ್ ಆಗಿದ್ದಾರೆ. ಜೋಗಯ್ಯ ಧ್ವನಿಸುರುಳಿ ಬಿಡುಗಡೆ ಯಾವಾಗೋ ಗೊತ್ತಿಲ್ಲ.


Click it and Unblock the Notifications











