ರಾಜ್ ಬಿಡುಗಡೆಗೆ ಹಣ ಕೊಟ್ಟಿದ್ದ್ದು ನಿಜ: ಶಿವಣ್ಣ

ಅಪ್ಪಾಜಿ ಅವರನ್ನು ಬಿಡಿಸಿಕೊಂಡು ಬರಲು ದುಡ್ಡು ಕೊಟ್ಟಿರುವುದು ನಿಜ. ಆದರೆ, ಎಷ್ಟು ಎಂದು ಕೇಳಬೇಡಿ. ಈಗ ಅದನ್ನು ಕೆದಕುವುದು ಬೇಡ. ದುಡ್ಡು ಕೊಟ್ಟು ಬಿಡಿಸಿಕೊಂಡು ಬಂದಿರುವುದಕ್ಕೆ ಅಪ್ಪಾಜಿಗೂ ತೀವ್ರ ಬೇಸರವಿತ್ತು ಎಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಸಂವಾದದಲ್ಲಿ ಶಿವರಾಜ್ ಕುಮಾರ್ ಹೇಳಿದರು. ಆದರೆ, ದುಡ್ಡು ಕೊಟ್ಟಿದ್ದು ಸರ್ಕಾರವೋ, ತಮ್ಮ ಕುಟುಂಬವೋ ಎಂಬ ಬಗ್ಗೆ ಅವರು ಏನನ್ನೂ ಹೇಳಲಿಲ್ಲ. ನನ್ನನ್ನು ಬಿಡಿಸುವುದಕ್ಕೆ ದುಡ್ಡು ಕೊಡಬೇಕಿತ್ತಾ ಎಂದು ಅಪ್ಪಾಜಿ ಕೇಳಿದ್ದರು ಎಂದರು.
ಅಷ್ಟೇ ಅಲ್ಲ, ಕಾಡಿನಿಂದ ಬರುವಾಗ ಕೆಲವರು ಆಡಿದ ಚುಚ್ಚು ಮಾತಿನಿಂದ ಅವರು ಮಾನಸಿಕವಾಗಿ ನೊಂದಿದ್ದರು. ಅದೆಲ್ಲಾ ಈಗ ಮುಗಿದ ಅಧ್ಯಾಯ. ಅದೆಲ್ಲ ಕೆದಕುತ್ತಾ ಹೋದರೆ ಏನೇನೋ ಆಗುತ್ತದೆ. ಈಗ ಅಪ್ಪಾಜಿಯೂ ಇಲ್ಲ, ವೀರಪ್ಪನ್ ಕೂಡಾ ಇಲ್ಲ ಎಂದಾಗ ಶಿವರಾಜ್ ಕುಮಾರ್ ಮುಖದಲ್ಲಿ ನೂರೆಂಟು ಪ್ರಶ್ನೆಗಳು ಹುದುಗಿರುವುದು ಎದ್ದು ಕಾಣುತ್ತಿತ್ತು.
ಅಪ್ಪಾಜಿ ಅಪಹರಣವಾದಾಗ ನಮ್ಮ ಮನೆ ಸರ್ವಧರ್ಮಗಳ ಸಮನ್ವಯ ಕೇಂದ್ರವಾಗಿತ್ತು. ಒಂದೇ ಕಾಲಕ್ಕೆ ದೇವಸ್ಥಾನ, ಚರ್ಚ್ ಹಾಗೂ ಮಸೀದಿಯಂತೆ ಕಂಗೂಳಿಸುತ್ತಿತ್ತು. ಯಾವ ಜಾತಿ, ಮತ ಭೇದವಿಲ್ಲದೆ ಎಲ್ಲರೂ ಅಪ್ಪಾಜಿ ಸುರಕ್ಷಿತವಾಗಿ ಬಿಡುಗಡೆಯಾಗಿ ಬರಲಿ ಎಂದು ಹಾರೈರಿಸಿದ್ದರು ಎಂದು ಅಭಿಮಾನಿ ದೇವರುಗಳ ಪ್ರೀತಿಯನ್ನು ಪ್ರಶಂಸಿದರು. ರಾಜಕೀಯ ಪ್ರವೇಶವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಅವರು, ನನಗೂ ರಾಜಕೀಯಕ್ಕೂ ಆಗಿ ಬರುವುದಿಲ್ಲ. ಜೀವನದಲ್ಲಿ ಎಂದಿಗೂ ರಾಜಕೀಯ ಮಾಡಿಲ್ಲ. ಅದರಲ್ಲಿ ನನಗೆ ಆಸಕ್ತಿಯೂ ಇಲ್ಲ ಎಂದು ಗಾಳಿ ಸುದ್ದಿಗೆ ಶಿವರಾಜ್ ಕುಮಾರ್ ತೆರೆ ಎಳೆದರು.
(ದಟ್ಸ್ ಕನ್ನಡ ಚಿತ್ರ ವಾರ್ತೆ)
ಶಿವರಾಜ್ ಕುಮಾರ್ ನೂರನೇ ಚಿತ್ರ ಜೋಗಯ್ಯ
ಶಿವಣ್ಣನಿಗೆ ಹೊಸ ತಂಗಿಯಾಗಿ ಮೀರಾ ಜಾಸ್ಮಿನ್
ನನ್ನ ಒಲುಮೆಯ ವ್ಯಕ್ತಿ ಡಾ.ರಾಜ್: ಅಮಿತಾಬ್
ಕಡೆಗೂ ಡಾ.ರಾಜ್ ಅಂಚೆ ಚೀಟಿಗೆ ಠಸ್ಸೆ ಒತ್ತಿದ ಕೇಂದ್ರ


Click it and Unblock the Notifications











