ಸರಿಗಮ ವಿಜಿ 'ಸಂಸಾರ'ದ ಮೇಲೆ ದಿನೇಶ್ ಬಾಬು ಕಣ್ಣು
ಕಡಿಮೆ ಅವಧಿಯಲ್ಲಿ ಚಿತ್ರಗಳನ್ನು ಮುಗಿಸಿ ನಿರ್ಮಾಪಕರ ಪಾಲಿನ ಡಾರ್ಲಿಂಗ್ ಎನ್ನಿಸಿಕೊಂಡ ನಿರ್ದೇಶಕ ದಿನೇಶ್ ಬಾಬು. ಕಡಿಮೆ ಬಜೆಟ್ನಲ್ಲಿ ಚಿತ್ರಗಳನ್ನು ಹೆಣೆದರೂ ಬಾಕ್ಸಾಫೀಸಲ್ಲಿ ಸದ್ದು ಮಾಡಿದ ಚಿತ್ರಗಳನ್ನೇ ಹೆಚ್ಚಾಗಿ ಮಾಡಿದ್ದಾರೆ. ದಿನೇಶ್ ಬಾಬು ವೃತ್ತಿ ಜೀವನದಲ್ಲಿ ಸೆಂಚುರಿ ಬಾರಿಸಿದ್ದು 101ನೇ ಚಿತ್ರವಾಗಿ 'ಲಿಮಿಟ್' ಬರುತ್ತಿದೆ.
ಉಮೇಶ್ ಬಣಕಾರ್ ನಿರ್ಮಿಸುತ್ತಿರುವ ಈ ಚಿತ್ರದ ಟೈಟಲ್ ಬಗ್ಗೆ ಯಾಕೋ ಅವರಿಗೆ ಸಮಾಧಾನವಿಲ್ಲ. ಅದನ್ನು ಬದಲಾಯಿಸಲು ಚಿಂತಿಸಿದ್ದಾರೆ. 'ಲಿಮಿಟ್' ಚಿತ್ರಕ್ಕೆ 'ಸಂಸಾರದಲ್ಲಿ ಸರಿಗಮ' ಎಂದು ಶೀರ್ಷಿಕೆ ಇಡಲು ಮುಂದಾಗಿದ್ದಾರೆ. ಆದರೆ ಈ ಶೀರ್ಷಿಕೆ ಈಗಾಗಲೆ ಹಿರಿಯ ತಂತ್ರಜ್ಞ, ನಟ ಮತ್ತು ನಿರ್ದೇಶಕ ಸರಿಗಮ ವಿಜಿ ಅವರ ಬಳಿ ಇದೆ.
ಸರಿಗಮ ವಿಜಿ ಅವರ 'ಸಂಸಾರದಲ್ಲಿ ಸರಿಗಮ' ನಾಟಕ 500 ಪ್ರದರ್ಶನಗಳನ್ನು ಕಂಡಿದ್ದು ದಾಖಲೆ ನಿರ್ಮಿಸಿದೆ. ಪ್ರತಿ ಯುಗಾದಿ ಹಬ್ಬದ ದಿನ ವಿಜಿ ಗಣ್ಯರನ್ನು ಕರೆಸಿ ಸಂಸಾರದಲ್ಲಿ ಸರಿಗಮ ವಿಶೇಷ ಪ್ರದರ್ಶನಗಳನ್ನು ಏರ್ಪಡಿಸುವುದು ವಾಡಿಕೆ. ತಮ್ಮ 'ಸಂಸಾರ'ದ ಬಗ್ಗೆ ಇಷ್ಟೆಲ್ಲಾ ಕಾಳಜಿ ಇಟ್ಟುಕೊಂಡಿರುವ ವಿಜಿ ಈ ಶೀರ್ಷಿಕೆಯನ್ನು ಕೊಡಲು ಸುತಾರಾಂ ಒಪ್ಪುತ್ತಿಲ್ಲ.
'ಲಿಮಿಟ್' ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದ್ದು ಆಗಸ್ಟ್ 15ರಂದು ತೆರೆಗೆ ಅಪ್ಪಳಿಸಲಿದೆ. ಆದರೆ ಚಿತ್ರದ ಶೀರ್ಷಿಕೆ ಬದಲಾವಣೆಯ ತೆರೆಮರೆ ಕಸರತ್ತುಗಳು ಮಾತ್ರ ನಡೆಯುತ್ತಿವೆ. ಅಕ್ಷಯ್ ಹಾಗೂ ನಯನಾ ಚಿತ್ರದ ಮುಖ್ಯ ಪಾತ್ರಧಾರಿಗಳು. ಶ್ರೀನಿವಾಸ ಮೂರ್ತಿ, ರಾಮಕೃಷ್ಣ, ರಾಜು ತಾಳಿಕೋಟೆ ಚಿತ್ರದ ತಾರಾಗಣದಲ್ಲಿದ್ದಾರೆ. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











