ಪ್ರೇಮ್ ಮತ್ತು ರಕ್ಷಿತಾ ದಾಂಪತ್ಯದಲ್ಲಿ ದೊಡ್ಡ ಬಿರುಕು!?
ಈ ರೀತಿಯ ಸುದ್ದಿಯೊಂದು ಗಾಂಧಿನಗರದಲ್ಲಿ ಗಿರಿಗಿಟ್ಲೆ ಹೊಡೆಯುತ್ತಿದೆ. ಕೆಲವರು ಇದು ಹದಿನಾರಾಣೆ ಸತ್ಯ ಅಂತಿದ್ದಾರೆ. ಇನ್ನೂ ಕೆಲವರು ಎಲ್ಲಾ ಬೋಗಸ್ ರೀ ಅಂತಿದ್ದಾರೆ. ನಿಜ ಏನು ಎಂಬುದು ಮಾತ್ರ ಗೊತ್ತಿಲ್ಲ. ಇದು ನಿಜವೆ ಎಂದು ಕೇಳಿದರೆ ನಗುವಷ್ಟು ಟೈಮ್ ನನಗಿಲ್ಲ ಗುರು ಎನ್ನುತ್ತಾರೆ ಪ್ರೇಮ್. ಅವರಿಗೆ ಆ ಜರೂರತ್ತೂ ಇಲ್ಲ ಎನ್ನಿಸುತ್ತದೆ.
"ಜೋಗಯ್ಯ ಬಿಡುಗಡೆ ಬಳಿಕ ರಕ್ಷಿತಾ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಿದ್ದಾರೆ" ಎಂಬ ಸುದ್ದಿಯಂತೂ ದಟ್ಟವಾಗಿ ಹಬ್ಬಿದೆ. ಈ ಬಗ್ಗೆ ರಕ್ಷಿತಾ ಅವರನ್ನು ಕೇಳಿದರೆ, ಚಿತ್ರೀಕರಣದಲ್ಲಿ ಸಣ್ಣಪುಟ್ಟ ಕಿರಿಕ್ಗಳಾಗಿದ್ದವು. ಈ ವದಂತಿ ಮೂರು ತಿಂಗಳ ಹಿಂದೆಯೇ ನನ್ನ ಕಿವಿಗೂ ಬಿದ್ದಿತ್ತು. ಇವೆಲ್ಲಾ ಇದ್ದಿದ್ದೆ ಎಂದು ಸುಮ್ಮನಾಗಿದ್ದೆ. ಈಗ ಮತ್ತಷ್ಟು ಮಸಾಲೆ ಸೇರಿಸಿ ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಪ್ರೇಮ್ ನನಗೆ ಯಾವತ್ತೂ ಸ್ವೀಟ್ ಹಾರ್ಟ್ ಇದ್ದಂತೆ. ನಮ್ಮಿಬ್ಬರ ಪ್ರೇಮದ ಕಾಣಿಕೆಯಾಗಿ ಮಗನೂ ಇದ್ದಾನೆ.ವಿಚ್ಛೇದನ ಗಿಚ್ಛೇದನ ಎಲ್ಲಾ ಸುಳ್ಳು ಎಂದಿದ್ದಾರೆ.
ಜೋಗಯ್ಯ ಚಿತ್ರೀಕರಣದಲ್ಲಿರುವ ಪ್ರೇಮ್ ಕೂಡ ಇದನ್ನೇ ಹೇಳುತ್ತಾರೆ. "ಕೆರಕೊಳ್ಳೋದಕ್ಕೂ ಪುರುಸೊತ್ತಿಲ್ಲಷ್ಟು ಬ್ಯುಸಿಯಾಗಿದ್ದೇನೆ. ತಲೆಬುಡ ಇಲ್ಲದ ಈ ರೀತಿಯ ವದಂತಿಗಳನ್ನು ಯಾಕಾದರೂ ಹಬ್ಬಿಸುತ್ತಾರೋ. ನನ್ನನ್ನು ಅರ್ಥ ಮಾಡಿಕೊಳ್ಳುವ ಪತ್ನಿಇದ್ದಾಳೆ.ನನಗಿನ್ನೇನು ಬೇಕು" ಎಂದಿದ್ದಾರೆ. ಜೋಗಯ್ಯ ಚಿತ್ರದ ನಾಯಕಿ ಸುಮಿತ್ ಕೌರ್ ಜೊತೆ ಪ್ರೇಮ್ ಸಲುಗೆಯಿಂದ ಇದ್ದದ್ದೇ ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣ ಎಂಬುದು ವದಂತಿಯ ಹಿಂದಿನ ವದಂತಿ. (ಏಜೆನ್ಸೀಸ್)


Click it and Unblock the Notifications











