ಅಜ್ಞಾತದಿಂದ ಎದ್ದು ಬಂದ ರಂಜಿತಾ ಹೇಳಿದ್ದೇನು
ಇಷ್ಟು ದಿನ ಅಜ್ಞಾನವಾಸ ಅನುಭವಿಸುತ್ತಿದ್ದ ಚಿತ್ರನಟಿ ರಂಜಿತಾ ದಿಢೀರ್ ಅಂತ ಪ್ರತ್ಯಕ್ಷವಾಗಿದ್ದಾರೆ. ಸ್ವಾಮಿ ನಿತ್ಯಾನಂದ ರಾಸಲೀಲೆ ಪ್ರಕರಣದ ಬಗ್ಗೆ ಆಕೆ ಹೊಸದಾಗಿ ಏನನ್ನಾದರೂ ಬಾಯಿಬಿಡುತ್ತಾರಾ? ಎಂದು ನಿರೀಕ್ಷಿಸಿದ್ದ ಪತ್ರಕರ್ತರಿಗೆ "ರಾಸಲೀಲೆ ವಿಡಿಯೋದಲ್ಲಿ ಇರೋದು ನಾನಲ್ಲ" ಎಂದು ಹೇಳುವ ಮೂಲಕ ಮತ್ತೊಮ್ಮೆ ದಂಗುಬಡಿಸಿದ್ದಾರೆ.
ರಾಸಲೀಲೆ ವಿಡಿಯೋ ಬಿಡುಗಡೆಯಾದ ಎರಡು ತಿಂಗಳ ಬಳಿಕ ಗೂಗಲ್ ಮತ್ತು ಯೂಟ್ಯೂಬ್ ತಾಣಗಳಿಗೆ ರಂಜಿತಾ ನೋಟೀಸ್ ಜಾರಿಮಾಡಿದ್ದರಂತೆ. 72 ಗಂಟೆಗಳಲ್ಲಿ ರಾಸಲೀಲೆ ವಿಡಿಯೋವನ್ನು ತಮ್ಮ ತಾಣಗಳಿಂದ ತೊಲಗಿಸುವಂತೆ ಆಕೆ ನೋಟೀಸ್ ನಲ್ಲಿ ತಿಳಿಸಿದ್ದರು. ವಿಡಿಯೋಗಳನ್ನು ತೆಗೆಯದೇ ಇದ್ದ ಪಕ್ಷ ತಾವು ಕ್ರಿಮಿನಲ್ ಮತ್ತು ಸಿವಿಲ್ ಮೊಕದ್ದಮೆಯನ್ನು ಹೂಡುವುದಾಗಿ ಎಚ್ಚರಿಸಿದ್ದಾಗಿ ತಿಳಿಸಿದ್ದಾರೆ.
"ಮೇ 2ರಂದು ವಿವಾದಾತ್ಮಕ ವಿಡಿಯೋಗಳನ್ನು ತೆಗೆಯುವಂತೆ ವೆಬ್ ಸೈಟ್ ಗಳಿಗೆ ತಿಳಿಸಿದ್ದೆವು. ಒಂದು ವೇಳೆ ತೆಗೆಯದಿದ್ದರೆ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾನೂನುಗಳಡಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದೆವು" ಎಂದು ರಂಜಿತಾ ಪರ ವಕೀಲ ಪ್ರಶಾಂತ್ ಮೆಂಡಿರಟ್ಟ ಸುದ್ದ್ದಿಗಾರರಿಗೆ ತಿಳಿಸಿದ್ದಾರೆ.
"ವಿಡಿಯೋವನ್ನು ತಿರುಚಲಾಗಿದೆ. ನನ್ನ ಕಕ್ಷಿದಾರರು ನಿತ್ಯಾನಂದನ ಭಕ್ತೆಯಲ್ಲ. ಆದರೆ ಅವರನ್ನು ಭೇಟಿ ಮಾಡಿದ್ದರು. ವಿಡಿಯೋದಲ್ಲಿರುವುದು ರಂಜಿತಾ ಅಲ್ಲ. ಇಡೀ ವಿಡಿಯೋವನ್ನು ಎಡಿಟ್ ಮಾಡಲಾಗಿದೆ. ಈ ವಿಡಿಯೋ ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ನಿಲ್ಲುವುದಿಲ್ಲ. ರಂಜಿತಾರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಆಕೆಯ ಹೆಸರನ್ನು ಬಳಸಲಾಗಿದೆ" ಎಂದು ವಕೀಲರು ವಿವರ ನೀಡಿದ್ದಾರೆ.
ಆದರೆ ವಿಡಿಯೋದಲ್ಲಿರುವುದು ನಟಿ ರಂಜಿತಾ ಎಂದು ಸ್ವತಃ ಸ್ವಾಮಿ ನಿತ್ಯಾನಂದ ಅವರು ಒಪ್ಪಿಕೊಂಡಿದ್ದಾರಲ್ಲಾ ಎಂದು ಕೇಳಲಾಗಿ, ವಿಡಿಯೋದಲ್ಲಿರುವುದು ನಿತ್ಯಾನಂದ ಅಲ್ಲ ಎಂದು ಅವರೇ ಹೇಳಿರಬೇಕಾದರೆ ಇನ್ನು ರಂಜಿತಾ ಎಲ್ಲಿಂದ ಬರಲು ಸಾಧ್ಯ ಎಂದಿದ್ದಾರೆ. ವಿಡಿಯೋದ ಸೂತ್ರಧಾರಿ ಲೆನಿನ್ ಕುರುಪ್ಪನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ರಂಜಿತಾ ನಿರ್ಧರಿಸಿದ್ದಾರೆ.


Click it and Unblock the Notifications











