ಅಮೃತಧಾರೆ ಸುರಿಸಿದ್ದ ರಮ್ಯಾಳ ಕಣ್ಣೀರಧಾರೆ
ದಂಡಂ ದಶಗುಣಂ ಚಿತ್ರದ ನಿರ್ಮಾಪಕರೊಂದಿಗೆ ಹುಟ್ಟಿಕೊಂಡಿದ್ದ ವಿವಾದಕ್ಕೆ ಕೇವಲ ಟ್ವಿಟ್ಟರ್ ಮೂಲಕ ಮಾತ್ರ ಪ್ರತಿಕ್ರಿಯಿಸುತ್ತಿದ್ದ ಕನ್ನಡ ಚಿತ್ರನಟಿ 'ಲಕ್ಕಿ ಸ್ಟಾರ್' ರಮ್ಯಾ ಬಹಿರಂಗವಾಗಿ ಮೌನ ಮುರಿದಿದ್ದು, ಒಬ್ಬ ಪ್ರಾಮಾಣಿಕ ನಟಿಗೆ ಬಂದಂತಹ ಸ್ಥಿತಿ ಯಾವ ನಟಿಗೂ ಬರುವುದು ಬರುವುದು ಬೇಡ ಎಂದು ಹೇಳಿ ಗಳಗಳನೆ ಕಣ್ಣೀರಿಟ್ಟಿದ್ದಾರೆ.
ಸುದೀಪ್ ಜೊತೆಗಿನ ಮಾತ್ ಮಾತಲ್ಲಿ, ರಾಜೇಂದ್ರ ಸಿಂಗ್ ಬಾಬು ಜೊತೆ ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್ ಚಿತ್ರ ಸೇರಿದಂತೆ ಅನೇಕ ನಟ, ನಿರ್ದೇಶಕ, ನಿರ್ಮಾಪಕರೊಂದಿಗೆ ಒಂದಿಲ್ಲೊಂದು ವಿವಾದದಲ್ಲಿ ಸೃಷ್ಟಿಸಿಕೊಳ್ಳುತ್ತಿದ್ದ ರಮ್ಯಾ ಅಕಾ ದಿವ್ಯಾ ಸ್ಪಂದನ ಯಾವತ್ತೂ ತಮ್ಮ ಗೋಳನ್ನು ಪತ್ರಕರ್ತರೆದಿರು ತೋಡಿಕೊಂಡಿರಲಿಲ್ಲ.
ಇಂದು ಗ್ರೀನ್ ಹೌಸ್ ನಲ್ಲಿ ಕರೆಯಲಾಗಿದ್ದ ಸಂಜು ವೆಡ್ಸ್ ಗೀತಾ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಪ್ರಪ್ರಥಮ ಬಾರಿಗೆ ಕಣ್ಣೀರಿಡುತ್ತಲೇ ಮನಬಿಚ್ಚಿ ಮಾತನಾಡಿದ ರಮ್ಯಾ, "ಈ ಎಲ್ಲಾ ಬೆಳವಣಿಗೆಗಳಿಂದ ನನಗೆ ತುಂಬಾ ನೋವಾಗಿದೆ. ಚಿತ್ರರಂಗದಲ್ಲಿ ತುಂಬಾ ಕಷ್ಟಪಟ್ಟಿದ್ದೇನೆ. ಆದರೂ ಇಂಡಸ್ಟ್ರಿನಲ್ಲಿ ಏನೂ ಮಾಡೇ ಇಲ್ಲ ಎಂಬಂತೆ ಟೀಕಿಸಲಾಗುತ್ತಿದೆ. ನನ್ನನ್ನು ಟೀಕಿಸುವ ಮುನ್ನ ಒಮ್ಮೆ ಚಿಂತಿಸಿ" ಎಂದು ಗೋಳು ತೋಡಿಕೊಂಡರು.
ಮನದಾಳದಲ್ಲಿ ಮಡುಗಟ್ಟಿದ್ದ ನೋವು ಸ್ಫೋಟಿಸಿ, ತಾವು ಬೇರೊಂದು ಚಿತ್ರದ ಪತ್ರಿಕಾಗೋಷ್ಠಿಗೆ ಬಂದಿದ್ದೇನೆಂಬುದನ್ನೂ ಮರೆತು ಕಂಬನಿಗರೆದ ರಮ್ಯಾ, ಇನ್ನು ಮುಂದೆ ಯಾವತ್ತೂ ನಟಿಸುವುದಿಲ್ಲ. ಕನ್ನಡ ಚಿತ್ರದಿಂದ ಸ್ವಯಂನಿವೃತ್ತಿ ಪಡೆಯುತ್ತೇನೆ. ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನನ್ನ ಜೀವನವನ್ನು ನಾನೇ ಹೊಸದಾಗಿ ಕಟ್ಟಿಕೊಳ್ಳುತ್ತೇನೆ. ಚಿತ್ರರಂಗದ ಸಹವಾಸ ಸಾಕು ಎಂದು ನೊಂದು ನುಡಿದರು.
ಚಿರು ಸರ್ಜಾ ನಾಯಕನಾಗಿ ನಟಿಸಿರುವ ದಂಡಂ ದಶಗುಣಂ ಚಿತ್ರದ ಆಡಿಯೋ ಪ್ರಚಾರಕ್ಕೆ ಬರಲಿಲ್ಲವೆಂದು ಚಿತ್ರದ ನಿರ್ಮಾಪಕ ಗಣೇಶ್ ದೂರಿದ್ದು, ಎರಡು ದಿನಗಳೊಳಗೆ ಸ್ಪಷ್ಟೀಕರಣ ನೀಡಬೇಕೆಂದು ನಿರ್ಮಾಪಕರ ಸಂಘ ರಮ್ಯಾಗೆ ಗಡುವು ನೀಡಿತ್ತು. ಆದರೆ, ಯಾವುದೇ ರೀತಿಯ ಸ್ಪಷ್ಟೀಕರಣ ನೀಡುವ ಅಗತ್ಯವಿಲ್ಲ ಎಂದು ರಮ್ಯಾ ಖಡಾಖಂಡಿತವಾಗಿ ಹೇಳಿದರು.
ನಾನು ಗಣೇಶ್ ಅವರಿಗೆ ಸಾಕಷ್ಟು ಸಹಾಯ ಮಾಡಿದ್ದೇನೆ. ಆದರೆ, ಆಡಿಯೋ ಪ್ರಚಾರಕ್ಕೆ ಬಂದಿಲ್ಲವೆಂಬ ಕಾರಣಕ್ಕೆ ವಿವಾದ ಸೃಷ್ಟಿಸಿದ್ದು ಸರಿಯಲ್ಲ. ಪತ್ರಕರ್ತರು ಕೂಡ ನನ್ನನ್ನು ಆರೋಪಿ ಎಂಬಂತಲೇ ಬಿಂಬಿಸುತ್ತಿದ್ದಾರೆ. ಇದು ನನಗೆ ಮಾತ್ರ ಏಕಾಗುತ್ತದೆ. ವಿನಾಕಾರಣ ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ. ಇದರಿಂದ ನನ್ನ ಮತ್ತು ಚಿತ್ರರಂಗದ ವರ್ಚಸ್ಸಿಗೆ ಧಕ್ಕೆಯಾಗಿದೆ. ಪತ್ರಕರ್ತರು ಕೂಡ ಜವಾಬ್ದಾರಿಯುತವಾಗಿ ಬರೆಯಬೇಕು ಎಂದು ಅಳಲು ತೋಡಿಕೊಂಡರು.
ಚಿತ್ರರಂಗಕ್ಕೆ ನಾನು ಏನೂ ಮಾಡೇ ಇಲ್ಲ ಎಂದು ಹೇಳಿದರೂ ನನಗೇನೂ ಬೇಜಾರಿಲ್ಲ. ನನಗೆ ತೊಂದರೆಯಾದಾಗ ಯಾರೂ ಬೆಂಬಲಕ್ಕೆ ಬಂದಿಲ್ಲ, ಬರುವುದೂ ಇಲ್ಲ. ಯಾವ ಹೀರೋಯಿನ್ ಗೂ ಹೀಗೆ ಆಗಬಾರದು ಎಂದು ಬೇಸರವನ್ನು ಬಯಲು ಮಾಡಿಕೊಂಡು ಕಣ್ಣುಗಳನ್ನು ಕೊಳಗಳನ್ನಾಗಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಸಂಜು ವೆಡ್ಸ್ ಗೀತಾ ಚಿತ್ರದ ನಾಯಕ ನಟ ಶ್ರೀನಗರ ಕಿಟ್ಟಿ ಮತ್ತು ನಿರ್ಮಾಪಕ ರಾಜಶೇಖರ್ ಹಾಜರಿದ್ದರು.


Click it and Unblock the Notifications











