ಕ್ರೇಜಿಸ್ಟಾರ್ ರವಿಚಂದ್ರನ್ಗೆ ಏನೋ ಆಗಿದೆಯಂತೆ ನಿಜವೇ?
ಮಳವಳ್ಳಿ ಗಂಡು ರೆಬಲ್ ಸ್ಟಾರ್ ಅಂಬರೀಷ್ ಅವರಿಗೆ ಹೃದಯಾಘಾತವಾಗಿದೆಯಂತೆ ಎಂಬ ಗಾಳಿಸುದ್ದಿ ಕೆಲದಿನಗಳ ಹಿಂದೆ ಬಲವಾಗಿ ಬೀಸಿತ್ತು. ಬಳಿಕ ಸ್ವತಃ ಅಂಬರೀಷ್ ಅವರೇ ನನಗೇನು ಆಗಿಲ್ಲ. ನಾನು ಆರಾಮವಾಗಿದ್ದೇನೆ. ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಹೇಳುವಷ್ಟಿಗೆ ಸಾಕಪ್ಪ ಸಾಕು ಅನ್ನಿಸಿಬಿಟ್ಟಿತ್ತು. ಈಗ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಏನೋ ಆಗಿದೆಯಂತೆ ಎಂಬ ನ್ಯೂಸ್ ಕನ್ನಡ ಚಿತ್ರರಂಗಕ್ಕೆ ಶಾಕ್ ನೀಡಿದೆ!
ಭಾನುವಾರ(ಫೆ.21) ಮಧ್ಯರಾತ್ರಿ ರವಿಚಂದ್ರನ್ಗೆ ಏನೋ ಆಗಿದೆಯಂತೆ, ನಿಜವೇ ಎಂಬ ಎಸ್ಎಂಎಸ್ಗಳು ಮೊಬೈನ್ನಿಂದ ಮೊಬೈಲ್ಗೆ ಹರಿದಾಡಿವೆ. ಆದರೆ ಕನಸುಗಾರ ವಿ ರವಿಚಂದ್ರನ್ ಅವರಿಗೆ ಏನೂ ಆಗಿಲ್ಲ. ಅವರು ಆರೋಗ್ಯವಾಗಿಯೇ ಇದ್ದಾರೆ. ಇದೆಲ್ಲಾ ಯಾರೋ ಹಬ್ಬಿಸಿರುವ ಗಾಳಿ ಸುದ್ದಿ ಅಷ್ಟೆ. ಅವರು ಆರಾಮವಾಗಿಯೇ ಇದ್ದಾರೆ ಎಂದಿದ್ದಾರೆ ಅವರ ಸಹೋದರ ಬಾಲಾಜಿ.
ವಿ ಬಾಲಾಜಿ ಅವರು ಮಾತನಾಡುತ್ತಾ, ಅಣ್ಣನಿಗೆ ಏನೂ ಆಗಿಲ್ಲ. ಗೋವಾಗೆ ಹೋಗಿದ್ದ ಅವರು ಮಧ್ಯರಾತ್ರಿ ತಡವಾಗಿ ಬೆಂಗಳೂರಿಗೆ ಆಗಮಿಸಿದರು. ಅಷ್ಟೇ ಹೊರತು ಇನ್ನೇನು ಆಗಿಲ್ಲ ಎಂದಿದ್ದಾರೆ. ಅಷ್ಟರಲ್ಲಾಗಲೆ ಕೆಲವು ಟಿವಿ ಚಾನಲ್ಗಳಿಗೂ ಈ ಸುದ್ದಿ ಮುಟ್ಟಿದೆ. ಬ್ರೇಕಿಂಗ್ ನ್ಯೂಸ್ ನೀಡಲು ಕೆಲವು ಟಿವಿ ಚಾನಲ್ಗಳು ಡಾ.ರಾಜ್ ಕುಮಾರ್ ರಸ್ತೆಯಲ್ಲಿ ರವಿಚಂದ್ರನ್ ಮನೆಗೆ ಕ್ಯಾಮೆರಾ ಸಮೇತ ದೌಡಾಯಿಸಿದ್ದವು. ಆದರೆ ಅವರಿಗೂ ನಿರಾಸೆ ಕಾದಿತ್ತು.
ರವಿಚಂದ್ರನ್ಗೆ ಏನೋ ಆಗಿದೆಯಂತೆ ಎಂಬ ಸುದ್ದಿ ದಿಢೀರೆಂದು ಹಬ್ಬಿದ ಕಾರಣ ಅವರ ಮನೆ ಮುಂದೆ ಜನರ ಗುಂಪು ಜಮಾಯಿಸಿದೆ. ಅಲ್ಲಿ ಸಣ್ಣಗೆ ಗದ್ದಲವೂ ಶುರುವಾಗಿದೆ. ಕಡೆಗೆ ರಾಜಾಜಿನಗರ ಪೊಲೀಸರು ಬಂದು ಎಲ್ಲರನ್ನೂ ಮನೆಗೆ ಸಾಗಹಾಕುವಲ್ಲಿ ಮಧ್ಯರಾತ್ರಿ ಮೀರಿತ್ತು. ಆಗ ರವಿಚಂದ್ರನ್ ಇನ್ನೂ ಗೋವಾದಿಂದ ಬಂದಿರಲಿಲ್ಲ. ನಡೆದದ್ದು ಇಷ್ಟೇ.


Click it and Unblock the Notifications











