ನೀನ್ಯಾರೆ ಎತ್ತಂಗಡಿಯಿಂದ ನಿರ್ಮಾಪಕ ಗರಂ

ಉತ್ತಮ ವಿಮರ್ಶೆಗೆ ಪಾತ್ರವಾಗಿರುವ ನೀನ್ಯಾರೆ ಚಿತ್ರ ದಿನದಿಂದ ದಿನಕ್ಕೆ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದ್ದರೂ ಎತ್ತಂಗಡಿಯಾಗಿರುವುದು ಇಡೀ ಚಿತ್ರತಂಡದಲ್ಲಿ ನಿರಾಶೆ ಮೂಡಿಸಿದೆ. ಸಾಗರ್ ಚಿತ್ರಮಂದಿರದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ನಮ್ಮ ಚಿತ್ರವನ್ನು ಹೊರಹಾಕಿ ಡಿ.26ರಂದು ಬಿಡುಗಡೆಯಾಗುತ್ತಿರುವ 'ಹಾಗೆ ಸುಮ್ಮನೆ' ಚಿತ್ರಕ್ಕೆ ಸ್ಥಾನ ನೀಡಲಾಗಿದೆ ಎಂದು ವರದರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ವರ್ಷ ಕಷ್ಟಪಟ್ಟು ಈ ಚಿತ್ರವನ್ನು 2.5 ಕೋಟಿ ರು.ಗಳಲ್ಲಿ ನಿರ್ಮಿಸಿದ್ದೇನೆ. ಕನ್ನಡ ಚಿತ್ರೋದ್ಯಮದಲ್ಲಿ ಹೊಸಬರನ್ನು ಕಾಲಕಸವಾಗಿ ಕಾಣಲಾಗುತ್ತಿದೆ. ಅವರಿಗೆ ಉತ್ತಮ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ವರದರೆಡ್ಡಿ ಖೇದ ವ್ಯಕ್ತಪಡಿಸಿದ್ದಾರೆ. ನನ್ನ ದುಸ್ಥಿತಿ ಯಾವೊಬ್ಬ ಹೊಸಬನಿಗೂ ಬರಬಾರದು. ದಯವಿಟ್ಟು ಕನ್ನಡಚಿತ್ರಗಳನ್ನು ಮಾಡಬೇಡಿ ಎಂದು ಹೊಸಬರಿಗೆ ಕಿವಿಮಾತು ಕೊಟ್ಟರು. ಇಷ್ಟೆಲ್ಲಾ ಕಷ್ಟಪಟ್ಟು ಚಿತ್ರ ಮಾಡಿದಕ್ಕೆ ಚಿತ್ರೋದ್ಯಮ ನಡೆದುಕೊಂಡ ರೀತಿಯ ಬಗ್ಗೆ ವರದ ರೆಡ್ಡಿ ಖಿನ್ನರಾಗಿದ್ದರು.
ಮನೋಹರ್ ಹೆಸರು ನಾಪತ್ತೆ: ಚಿತ್ರ ಬಿಡುಗಡೆಗೂ ಮುನ್ನ ವಿ.ಮನೋಹರ್ ಅವರ 100ನೆಯ ಚಿತ್ರ ಇದು ಎಂದು ತಿಂಗಳುಗಟ್ಟಲೆ ಪುಕ್ಕಟೆ ಪ್ರಚಾರ ನೀಡಲಾಗಿತ್ತು. ಆದರೆ ಸಿನಿಮಾ ಬಿಡುಗಡೆಯ ಮುಂಚಿನ ದಿನ ಮನೋಹರ್ ಅವರ ಫೋಟೊ ಇರಲಿ ಅವರ ಹೆಸರನ್ನು ಬೇಕಂತಲೇ ಕೈಬಿಡಲಾಗಿತ್ತು. ಸಿನಿಮಾ ಗೆದ್ದರೆ ಅದರ ಶ್ರೇಯಸ್ಸನ್ನು ಎಲ್ಲಿ ಮನೋಹರ್ ಹೊಡೆದುಕೊಳ್ಳುತಾರೊ ಎಂಬ ಕಾರಣಕ್ಕೆ ನಿರ್ದೇಶಕ ಸಿಂಧೇಶ್ ಹಾಗೆ ಮಾಡಿದ್ದರು. ಈಗ ಒಂದೇ ವಾರದಲ್ಲಿ ಚಿತ್ರ ಎತ್ತಂಗಡಿಯಾಗಿ ಇವರ ಶ್ರಮವೆಲ್ಲಾ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ನೀನ್ಯಾರೆ?, ಛಾಯಾಗ್ರಾಹಕ ವಿಷ್ಣುಗೆ ಹ್ಯಾಟ್ಸಾಫ್!


Click it and Unblock the Notifications











