'ಗನ್' ನಾಯಕ ನಟ ಹರೀಶ್ ರಾಜ್ ಅರೆಸ್ಟ್
'ಗನ್' ಚಿತ್ರದ ಹಕ್ಕುಗಳನ್ನು ಆ ಚಿತ್ರದ ನಿರ್ಮಾಪಕರಿಗೆ ಗೊತ್ತಿಲ್ಲದಂತೆ ಮತ್ತೊಬ್ಬರಿಗೆ ಮಾರಿದ ಆರೋಪದ ಮೇಲೆ ನಾಯಕ ನಟ ಹರೀಶ್ ರಾಜ್ ಅವರನ್ನುಹೈಗ್ರೌಂಡ್ ಠಾಣೆಯ ಪೊಲೀಸರು ಗುರುವಾರ (ಮೇ.26) ಬಂಧಿಸಿದ್ದಾರೆ.
ಗನ್ ಚಿತ್ರದ ನಿರ್ಮಾಪಕ ಮುರಳಿ ಅವರು ಈ ಸಂಬಂಧ ಹೈಗ್ರೌಂಡ್ ಪೊಲೀಸರಿಗೆ ದೂರು ನೀಡಿದ್ದರು. ತಮಗೆ ಯಾವುದೇ ಮಾಹಿತಿ ನೀಡದೆ ಗನ್ ಚಿತ್ರದ ರೈಟ್ಸ್ ಮಾರಿದ್ದಾರೆ ಎಂದು ಮುರಳಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಚಿತ್ರದ ನಿರ್ಮಾಪಕರಿಗೆ ನಯಾಪೈಸೆಯನ್ನೂ ಕೊಡದೆ 'ಗನ್' ಚಿತ್ರದ ಹಕ್ಕನ್ನು ನಿರ್ಮಾಪರಿಗೆ ಗೊತ್ತಿಲ್ಲದಂತೆ ಉದಯ ವಾಹಿನಿಗೆ ಹರೀಶ್ ರಾಜ್ ಮಾರಿದ್ದರು ಎಂಬ ಆರೋಪ ಅವರ ಮೇಲಿದೆ. ಕಳೆದ ಎರಡು ವಾರಗಳಿಂದ ಹರೀಶ್ ರಾಜ್ ತಲೆಮರೆಸಿಕೊಂಡಿದ್ದರು.
ಇಂದು ವಸಂತನಗರ ಅವರ ಮನೆಯಲ್ಲಿ ಹರೀಶ್ ಅವರನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಮುರಳಿ ಅವರು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೂ ದೂರು ಕೊಟ್ಟಿದ್ದರು.
ತಲೆಮರೆಸಿಕೊಂಡಿದ್ದ ಹರೀಶ್ ವಸಂತನಗರದ ತನ್ನ ಮನೆಗೆ ಬರುತ್ತಿದ್ದಂತೆ ಪೊಲೀಸರು ಏಕಾಏಕಿ ದಾಳಿ ಮಾಡಿದರು. ಕಾಂಪೌಂಡ್ ಹಾರಿ ಹರೀಶ್ ತಪ್ಪಿಸಿಕೊಳ್ಳುವ ವಿಫಲಯತ್ನ ಮಾಡಿದರಾದರೂ ಬಳಿಕ ಪೊಲೀಸರ ಅತಿಥಿಯಾದರು.
ಮುರಳಿ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ನನ್ನ ಮೇಲೆ ಕಲ್ಲೆತ್ತಿಹಾಕಲು ಬಂದಿದ್ದ. ಈ ಎಲ್ಲಾ ವಿಷಯಗಳನ್ನು ಬಂದ ನಂತರಹೇಳುತ್ತೇನೆ ಎಂದಿದ್ದಾರೆ ಹರೀಶ್. ಬಳಿಕ ಅವರು ಜಾಮೀನ ಮೇಲೆ ಬಿಡುಗಡೆಯಾಗಿದ್ದಾರೆ. ನಿರ್ಮಾಪಕ ಮುರಳಿಯಿಂದ ಹರೀಶ್ ರಾಜ್ ರು.30 ಲಕ್ಷ ಸಾಲವನ್ನು ಪಡೆದಿದ್ದ್ದರಂತೆ. ವಸಂತನಗರ ಮನೆ ಮಾರಲು ಹರೀಶ್ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











