ಬ್ರಹ್ಮಚಾರಿ ದೇವರು ಅಯ್ಯಪ್ಪನಿಗೆ ಜಯಮಾಲಾರಿಂದ ಅಪಚಾರ?

'ನಾನು ಅಯ್ಯಪ್ಪನ ಪಾದವನ್ನು ಮುಟ್ಟಬಾರದಿತ್ತು. ಮುಟ್ಟಿ ತಪ್ಪು ಮಾಡಿದೆ" ಎಂದು ಜಯಮಾಲಾ ಕೊರಗುತ್ತಿದ್ದಾರೆ. ಈ ಸಂಬಂಧ 'ತಮ್ಮದು ತಪ್ಪಾಗಿದೆ, ಕ್ಷಮಿಸಿ" ಎಂದು ತಪ್ಪೋಲೆಯನ್ನು ಶಬರಿಮಲೆಯ ಆಡಳಿತ ಮಂಡಳಿಗೆ ಕಳುಹಿಸಿದ್ದಾರೆ.
ಏನಿದು ವಿವಾದ? : ಜಯಮಾಲಾ ಅವರೇ ಹೇಳುವಂತೆ 1987ರಲ್ಲಿ ತಮ್ಮ ಗಂಡನ ಆರೋಗ್ಯ ಸುಧಾರಣೆಗಾಗಿ, ಶಬರಿಮಲೆಗೆ ಹೋಗಿದ್ದರಂತೆ. ಅಂದು ಗರ್ಭಗುಡಿಯಲ್ಲಿ ಜನರ ನೂಕುನುಗ್ಗಲಿಂದಾಗಿ ಕೆಳಕ್ಕೆ ಬಿದ್ದರಂತೆ. ಬಿದ್ದಾಗ ಆಯ್ಯಪ್ಪ ವಿಗ್ರಹದ ಪಾದ ಸ್ಪರ್ಶಿಸಿ, ನಮಸ್ಕಾರ ಮಾಡಿದರಂತೆ -ಇದು ಹಳೆಯ ಸಂಗತಿ.
ಕಳೆದ ವಾರ ಶಬರಿಮಲೆ ಅಯ್ಯಪ್ಪನ ಸನ್ನಿಧಿಯಲ್ಲಿ ಅಷ್ಟಮಂಗಲ ಪ್ರಶ್ನೆ ಕಾರ್ಯಕ್ರಮ ನಡೆಯಿತು. ಆಗ ಈ ಕ್ಷೇತ್ರದಲ್ಲಿ ಮಹಿಳೆಯಾಬ್ಬಳು ಈ ಹಿಂದೆ ಅಪಚಾರವೆಸಗಿದ್ದಾಳೆ ಎಂದು ಜ್ಯೋತಿಷಿ ಪರಪ್ಪನಂಗಡಿ ಉನ್ನಿಕೃಷ್ಣ ಹೇಳಿದರು. ಅದು ಕೇರಳದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿತ್ತು. ಯಾರಿರಬಹುದು ಆ ಮಹಿಳೆ ಎಂಬ ಕುತೂಹಲ ವ್ಯಕ್ತವಾಗಿತ್ತು.
ಈ ಬಗ್ಗೆ ಪತ್ರಿಕೆಗಳಲ್ಲಿ ಓದಿದ ಜಯಮಾಲಾ ಕೂಡಲೇ, ತಮ್ಮ ತಪ್ಪನ್ನು ಒಪ್ಪಿಕೊಂಡರು. ಈ ಹಳೆಯ ಘಟನೆಯನ್ನು ವಿವಾದವಾಗಿ ಪರಿವರ್ತಿಸಬೇಡಿ ಎಂದು ಮನವಿ ಸಲ್ಲಿಸಿದರು. ಆದರೂ ಕೇರಳದ ಪತ್ರಿಕೆಗಳು ಸುದ್ದಿಯನ್ನು ವಿವಾದ ಮಾಡಿಬಿಟ್ಟವು.
'ಅಯ್ಯಪ್ಪ ಹೇಳಿಕೇಳಿ ಬ್ರಹ್ಮಚಾರಿ. ಆತನ ಸನ್ನಿಧಿಗೆ ಮಹಿಳೆಯರು ಹೋಗಬಾರದು. ಅದರಲ್ಲೂ ಅವನ ಗರ್ಭಗುಡಿಗೆ 10ರಿಂದ 50ವರ್ಷದೊಳಗಿನ ಮಹಿಳೆಯರು ಯಾವುದೇ ಕಾರಣಕ್ಕೂ ಪ್ರವೇಶಿಸಬಾರದು. 1987ರಲ್ಲಿ ಈ ಜಯಮಾಲಾ ಹಾಗೆ ಮಾಡಬಾರದಿತ್ತು. ಆಗ ಆಕೆಗೆ ಕೇವಲ 28ವರ್ಷ. ಅವರಿಂದಾಗಿ ಅಯ್ಯಪ್ಪನಿಗೆ ಸಿಟ್ಟು ಬಂದಿದೆ" ಎಂಬುದು ಭಕ್ತ ಸಮುದಾಯದ ಅಸಮಾಧಾನ. ದಯವಿಟ್ಟು ಇಷ್ಟೆಲ್ಲಾ ರಂಪ ಮಾಡಬೇಡಿ ಅನ್ನೋದು ಜಯಮಾಲಾ ಅವರ ವಿನಂತಿ.


Click it and Unblock the Notifications











