ಶರ್ಮಿಳಾ ಮಾಂಡ್ರೆಗೆ ಬಯಸದೆ ಬಂದ ಭಾಗ್ಯ
ಮಲ್ಲು ಬೆಡಗಿ ಪಾರ್ವತಿ ಮೆನನ್ ಒಪ್ಪಿದ್ದರೆ 'ಧನ್ ಧನಾ ಧನ್' ಚಿತ್ರ ಆಕೆಯ ಖಾತೆಗೆ ಜಮೆಯಾಗುತ್ತಿತ್ತು. ಆದರೆ ಬಿಲ್ ಕುಲ್ ಅಂದ್ರು ಆಕೆ 'ಧನ್ ಧನಾ ಧನ್' ಚಿತ್ರದ ಪಾತ್ರವನ್ನು ಒಪ್ಪಿಲ್ಲ. ಮೆನನ್ ಸ್ಥಾನ ಮತ್ತೊಬ್ಬ ಬೆಡಗಿ ಶರ್ಮಿಳಾ ಮಾಂಡ್ರೆ ಪಾಲಾಗಿದೆ.
ನಾಯಕಿ ಪ್ರಧಾನ ಪಾತ್ರವಾದರೆ ಮಾತ್ರ ಬಣ್ಣ ಹಚ್ಚುತ್ತೇನೆ ಎಂದು ಮೆನನ್ ಪಟ್ಟುಹಿಡಿದಿದ್ದರಂತೆ. ಆದರೆ ಆಕೆ ಬಯಸಿದ ಪಾತ್ರ ಇದಾಗದ ಕಾರಣ ಕಡೆಗೂ ಆಕೆಯಿಂದ ನಿರೀಕ್ಷಿತ ಉತ್ತರ ಬರಲಿಲ್ಲವಂತೆ. ಇನ್ನು ಕಾಯುವುದರಲ್ಲಿ ಅರ್ಥವಿಲ್ಲ ಎಂದು ಅರಿತ ಚಿತ್ರದ ನಿರ್ಮಾಪಕರು ಶರ್ಮಿಳಾ ಮಾಂಡ್ರೆಗೆ ಅವಕಾಶ ಕೊಟ್ಟಿದ್ದಾರೆ. ಹಾಗಂತ ರಿಹಾನ್ ಎಂಟರ್ಪ್ರೈಸಸ್ನ ಖಮ್ಮಾರ್ ವಿವರ ನೀಡಿದ್ದಾರೆ.
ಈ ಚಿತ್ರದ ನಾಯಕ ನಟ್ ಲವ್ಲಿ ಸ್ಟಾರ್ ಪ್ರೇಮ್ಕುಮಾರ್. ಇದೊಂದು ಬಹುತಾರಾಗಣದ ಚಿತ್ರವಾಗಿದ್ದು, ಶಶಿಕುಮಾರ್, ಕಿಶೋರ್, ರವಿಶಂಕರ್, ಆದಿ ಲೋಕೇಶ್ ಕೂಡ ಚಿತ್ರದಲ್ಲಿದ್ದಾರೆ. ಈಗಾಗಲೆ ಎರಡನೇ ಹಂತದ ಚಿತ್ರೀಕರಣ ಶುರುವಾಗಿದೆ. ಚಿತ್ರದ ಹಾಡುಗಳನ್ನು ಪ್ಯಾರಿಸ್ನಲ್ಲಿ ಚಿತ್ರೀಕರಿಸುವ ಯೋಜನೆ 'ಧನ್ ಧನಾ ಧನ್' ಚಿತ್ರತಂಡಕ್ಕಿದೆ.
ಪಾರ್ವತಿ ಮೆನನ್ ಜೊತೆಗೆ ಚಿತ್ರದ ನಿರ್ದೇಶಕ ವಿಕ್ಟರಿ ವಾಸು ಕೂಡ 'ಧನ್ ಧನಾ ಧನ್' ಚಿತ್ರದಿಂದ ಹೊರಬಿದ್ದಿದ್ದಾರೆ. ಈಗ 'ಬುದ್ಧಿವಂತ' ನಿರ್ದೇಶಕ ರಾಮನಾಥ್ ರಿಗ್ವೇದಿ ಆಕ್ಷನ್, ಕಟ್ನಲ್ಲಿ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಒಟ್ಟಿನಲ್ಲಿ ಅತ್ತ ಶರ್ಮಿಳಾ ಮಾಂಡ್ರೆ ಇತ್ತ ರಿಗ್ವೇದಿ ಇಬ್ಬರಿಗೂ ಇದು ಬಯಸದೇ ಬಂದ ಭಾಗ್ಯ! [ಪಾರ್ವತಿ ಮೆನನ್]


Click it and Unblock the Notifications











