ಸ್ವಾಮೀಜಿ ಐ ಲವ್ ಯೂ ಎನ್ನಲು ಅಶೋಕ್ ಖೇಣಿ ಸ್ಕೆಚ್?

ಇಷ್ಟಕ್ಕೂ ಈ ಸುದ್ದಿ ಹುಟ್ಟಿಕೊಂಡಿದ್ದು ಹೇಗೆ? ಮೂಲವನ್ನು ಕೆದಕುತ್ತಾ ಹೋದರೆ ಅದು ಸೀದಾ ಹೋಗಿ ನಿಲ್ಲುವುದು ಅಶೋಕ್ ಖೇಣಿಯ ಬಳಿಗೆ. ಕಾರಣವಿಷ್ಟೇ. 'ಪಾರು ಐ ಲವ್ ಯೂ' ಸಿನಿಮಾದ ಆಡಿಯೋ ಬಿಡುಗಡೆಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದವರು ಅಶೋಕ್ ಖೇಣಿ. ಮತ್ತೊಬ್ಬ ಮುಖ್ಯ ಅತಿಥಿಯಾಗಿ ಬಂದಿದ್ದವರು ಶ್ರೀ ಗುರು ಬಸವಸ್ವಾಮಿ ಸ್ವಾಮೀಜಿ. ಇಬ್ಬರೂ ಸೇರಿ ಆಡಿಯೋ ಬಿಡುಗಡೆ ಮಾಡಿದರು.
ಆ ಸಮಯದಲ್ಲಿ ಮಾತನಾಡಿದ ಅಶೋಕ್ ಖೇಣಿಗೆ ಪಕ್ಕದಲ್ಲಿದ್ದ ಸ್ವಾಮೀಜಿ ನೋಡಿದಾಗ ಅದೇನು ಚೇಷ್ಟೆ ಮಾಡಬೇಕೆನಿಸತೋ, "ಈಗಂತೂ ಎಲ್ಲಾಕಡೆ ಸ್ವಾಮೀಜಿಗಳದ್ದೇ ಸುದ್ದಿ. ಅವರಷ್ಟು ಪ್ರಚಾರ ಪಡೆಯುತ್ತಿರುವವರು ಬೇರಾರೂ ಇಲ್ಲ. ಅವರ ಕಥೆಗಳನ್ನೇ ಇಟ್ಟುಕೊಂಡು ಸಿನಿಮಾ ಮಾಡಿದರೆ ಸೂಪರ್ ಹಿಟ್ ಆಗಬಹುದೇನೋ! 'ಸ್ವಾಮೀಜಿ ಐ ಲವ್ ಯೂ' ಎಂಬ ಹೆಸರಿಟ್ಟು ಯಾಕೆ ಸಿನಿಮಾ ಮಾಡಬಾರದೆಂದು ನಾನು ಯೋಚಿಸುತ್ತಿದ್ದೇನೆ ಅಂದುಬಿಟ್ಟರು.
ಪಕ್ಕದಲ್ಲಿದ್ದ ಸ್ವಾಮೀಜಿ ಸಿಕ್ಕಾಪಟ್ಟೆ ಕಸಿವಿಸಿ ಅನುಭವಿಸಿದರು. ಆದರೆ ಏನೂ ಮಾತನಾಡಲಿಲ್ಲ. ನಿತ್ಯಾನಂದರ ಕಥೆ ಆಧರಿಸಿ ಚಿತ್ರ ಮಾಡುತ್ತೇನೆ ಎಂದು ಅಶೋಕ್ ಖೇಣಿ ಹೇಳಿದ್ದರೆ ಬಂದ ಸ್ವಾಮೀಜಿಗಳಿಗೆ ಕಸಿವಿಸಿ ಆಗುತ್ತಿರಲಿಲ್ಲ. ಆದರೆ ಇಡೀ ಸ್ವಾಮೀಜಿ ಸಂಕುಲಕ್ಕೇ ನಾಟುವಂತೆ ಖೇಣಿ ಲೇವಡಿ ಮಾಡಿದ್ದರು. ಅವರ ಉದ್ದೇಶ ಅದೇನಿತ್ತೋ, ಆದರೆ ಕುಚೇಷ್ಟೆ ಹೊರಬಂದಿತ್ತು.
ಬಹುಶಃ 'ಕಠಾರಿವೀರ ಸುರಸುಂದರಾಂಗಿ' ಚಿತ್ರದ ವಿವಾದದ ವೇಳೆ ಬಹಳಷ್ಟು ಸ್ವಾಮೀಜಿಗಳು ಬೀದಿಗಿಳಿದಿದ್ದರು. ಆ ವಿಷಯ ಖೇಣಿಗೆ ನೆನಪಾಯ್ತೋ ಏನೋ! ಅಥವಾ ನಿತ್ಯಾನಂದ ಸ್ವಾಮಿಗಳ ಕುರಿತೇ ಹೇಳಬೇಕಾಗಿದ್ದನ್ನು ಸ್ವಾಮೀಜಿಗಳು ಎಂಬ ಶಬ್ಧದ ಮೂಲಕ ಹೇಳಿದರೋ! ಒಟ್ಟಿನಲ್ಲಿ ಅವರ ಅಂದಿನ ಮಾತಿನ ನಂತರ 'ಸ್ವಾಮೀಜಿ ಐ ಲವ್ ಯೂ' ಚಿತ್ರ ಬರಲಿದೆ ಎಂಬ ಸುದ್ದಿಯಂತೂ ಸುತ್ತುತ್ತಿದೆ.
ಅಂದಹಾಗೆ, ಖೇಣಿಗೆ ಸಿನಿಮಾ ನಿರ್ಮಾಣವೇನೂ ಹೊಸದಲ್ಲ. ಈ ಮೊದಲು 'ಪ್ರಸಾದ್' ಎಮಬ ಚಿತ್ರ ನಿರ್ಮಿಸಿದ್ದ ಖೇಣಿ, ಈಗ 'ನೀನೆ ಬರಿ ನೀನೆ' ಎಂಬ ಚಿತ್ರವನ್ನು ಪ್ರಾರಂಭಿಸಿದ್ದಾರೆ. ಅಂದು ಮಾತನಾಡಿದಂತೆ ನೀನೆ ಬರಿ ನೀನೆ ಚಿತ್ರದ ನಂತರ ಸ್ವಾಮೀಜಿ ಐ ಲವ್ ಯೂ ಚಿತ್ರ ಮಾಡಬಹುದೇನೋ. ಸದ್ಯಕ್ಕೆ ಅಶೋಕ್ ಖೇಣಿ ಚಿತ್ರವನ್ನು ಘೋಷಿಸಿಲ್ಲವಾದರೂ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. (ಒನ್ ಇಂಡಿಯಾ ಕನ್ನಡ)


Click it and Unblock the Notifications











