ಅಂಗುಲಿಮಾಲಾಗೂ 'ಡವ್' ಮಾಡಿದ ಬೆಂಕೋಶ್ರಿ...?
ಬಿ ಕೆ ಶ್ರೀನಿವಾಸ್ ಅಂದ್ರೆ ಗಾಂಧಿನಗರದಲ್ಲಿ ಅಷ್ಟಾಗಿ ಗೊತ್ತಾಗೋದಿಲ್ಲ. ಆದರೆ ಬೆಂಕೋಶ್ರಿ ಅನ್ನೋ ಅವರ ಬ್ರ್ಯಾಂಡ್ ನೇಮೇ ಸೂಪರ್. ಆದ್ರೆ ಈ ಬ್ರ್ಯಾಂಡ್ ನಲ್ಲಿ ಈಗೀಗ ಸಿನಿಮಾಗಳೇ ಹೊರ ಬರ್ತಿಲ್ಲ. ಅದ್ಯಾಕೋ ನಿರ್ಮಾಪಕರು ನಿದ್ದೆ ಹೋದಂತಿದ್ದಾರೆ.
'ಡವ್' ಚಿತ್ರ ಶುರುವಾಗಿ ಎರಡು ವರ್ಷ ಕಳೀತು, ಆದ್ರೆ ರಿಲೀಸ್ ಗೆ ಮಾತ್ರ ಇನ್ನೂ ಸಮಯ ಬಂದಿಲ್ಲ. 'ಭಾಗೀರತಿ'ಯ ನಂತರ ಮತ್ತೊಂದು ಸದಭಿರುಚಿಯ 'ಅಂಗುಲಿಮಾಲ' ಚಿತ್ರ ಮಾಡಿರೋ ಬೆಂಕೋಶ್ರಿ. ಅಂಗುಲಿಮಾಲನಾಗಿ ಅದ್ಭುತ ಅಭಿನಯ ನೀಡಿರೋ ಸಾಯಿಕುಮಾರ್ ನಟನೆಯನ್ನ ನೋಡೋಕೂ ಒಂದು ಅವಕಾಶ ಮಾಡಿಕೊಡ್ತಿಲ್ಲ. [ಪಾಕಿಸ್ತಾನ, ಕೋಲ್ಕತ್ತಾ ಚಿತ್ರೋತ್ಸವಕ್ಕೆ 'ಅಂಗುಲಿಮಾಲ']
ಇದ್ರ ನಡುವೆ ಅಶ್ವಿನಿ ಆಡಿಯೋ ಸಂಸ್ಥೆಯನ್ನ ಖರಿದಿಸಿರೋ ಬಿ ಕೆ ಶ್ರೀನಿವಾಸ್ ಆಡಿಯೋ ಸಂಸ್ಥೆಯ ಮೂಲಕ ಕೂಡ ಯಾವುದೇ ಸಿನಿಮಾಗಳ ಆಡಿಯೋ ಪಡೆದ ಸುದ್ದಿಯಿಲ್ಲ. ಸಾ ರಾ ಗೋವಿಂದು ಪುತ್ರನನ್ನ ಲಾಂಚ್ ಮಾಡೋಕೆ ಹೊರಟ ಬಿ ಕೆ ಶ್ರೀನಿವಾಸ್ ಎರಡು ಸಿನಿಮಾಗಳನ್ನ ತೆರೆಗೆ ತರೋದ್ಯಾವಾಗ?
ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ಅಂಗುಲಿಮಾಲ' ಬಿಡುಗಡೆನಾ ಇಲ್ಲಾ ಡವ್ವಾ ಗೊತ್ತಿಲ್ಲ. ಯಾಕಂದ್ರೆ ನಿರ್ಮಾಪಕರು ಇತ್ತೀಚೆಗೆ ಗಾಂಧಿನಗರದಲ್ಲೂ ಕಾಣಿಸಿಕೊಳ್ತಿಲ್ಲವಂತೆ. ಅಂಗುಲಿಮಾಲ ಚಿತ್ರ ಈಗಾಗಲೆ ಕೋಲ್ಕತ್ತಾ ಹಾಗೂ ಪಾಕಿಸ್ತಾನದ ಲಾಹೋರ್ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ.

ಅಂಗುಲಿಮಾಲ ಚಿತ್ರವು ಐತಿಹ್ಯ ಮತು ಚರಿತ್ರೆಗಳ ಜೊತೆಗೆ ಸಮಕಾಲೀನ ಭಯೋತ್ಪಾದನೆಯನ್ನು ವಿಶ್ಲೇಷಿಸುವ ಮತ್ತು ವಿರೋಧಿಸುವ ಹೊಸ ವ್ಯಾಖ್ಯಾನವನ್ನು ಒಳಗೊಂಡಿದೆ. ಅಂಗುಲಿಮಾಲನಾಗಿ ಸಾಯಿಕುಮಾರ್, ಬುದ್ಧನಾಗಿ ರಘು ಮುಖರ್ಜಿ ಅಭಿನಯಿಸಿರುವ ಈ ಚಿತ್ರದಲ್ಲಿ ಜಯಂತಿ, ಮುಖ್ಯಮಂತ್ರಿ ಚಂದ್ರು, ರಾಘವ್, ಪಲ್ಲಕ್ಕಿ, ಹಂಸ, ವತ್ಸಲಾ ಮೋಹನ್, ಗಿರಿಜಾ ಲೋಕೇಶ್, ಸುಂದರರಾಜ ಅರಸು, ಜಯಕುಮಾರ್ ಮುಂತಾದವರಿದ್ದಾರೆ.
ಮೈಸೂರಿನ ಡಾ.ರಾಜ್ ಕುಮಾರ್ ಫಿಲಮ್ ಇನ್ಸ್ ಟಿಟ್ಯೂಟ್ ನ ಅನೇಕ ಹೊಸ ಕಲಾವಿದರು ನಟಿಸಿದ್ದಾರೆ. ವಿ ಮನೋಹರ್ ಸಂಗೀತ, ಸುರೇಶ್ ಅರಸ್ ಸಂಕಲನ ಮತ್ತು ನಾಗರಾಜ ಆದವಾನಿ ಛಾಯಾಗ್ರಹಣವಿರುವ ಈ ಚಿತ್ರ ಇಷ್ಟರಲ್ಲೇ ಬಿಡುಗಡೆಯಾಗಲಿದೆ. ಚಿತ್ರಕ್ಕೆ ನಟರಾಜ್ ಶಿವು ಮತ್ತು ಪ್ರವೀಣ್ ಸಹ ನಿರ್ದೇಶನವಿದೆ.


Click it and Unblock the Notifications












