ಮೇಘನಾ, ಚಿರಂಜೀವಿ ಸರ್ಜಾ ಮದುವೆ ನಿಜವೇ?
ಈ ಗಾಸಿಪ್ ಸುದ್ದಿಗಳಿಗೆ ತಲೆಬುಡ ಎರಡೂ ಇರಲ್ಲ. ಕೆಲವೊಮ್ಮೆ ನಿಜವೂ ಆಗಿಬಿಡುತ್ತದೆ. ಕೆಲವು ಸಲ ಭಾರಿ ಇಕ್ಕಟ್ಟಿಗೆ ಸಿಲುಕಿಸಿಬಿಡುತ್ತವೆ. ಈಗ ಅಂತಹದ್ದೇ ಪರಿಸ್ಥಿತಿ ನಟ ಚಿರಂಜೀವಿ ಸರ್ಜಾ ಹಾಗೂ ಸುಂದರ್ ರಾಜ್-ಪ್ರಮೀಳಾ ಜೋಶಾಯ್ ಪುತ್ರಿ ಮೇಘನಾ ರಾಜ್ ಗೆ ಎದುರಾಗಿದೆ.
ನಟ ಚಿರಂಜೀವಿ ಸರ್ಜಾ ಅವರು ಮೇಘನಾ ರಾಜ್ ಕೈಹಿಡಿಯುತ್ತಿದ್ದಾರೆ ಎಂಬುದೇ ಆ ಸುದ್ದಿ. ಕಡೆಗೆ ಸುಂದರ್ ರಾಜ್ ಅವರು ಮಧ್ಯ ಪ್ರವೇಶಿಸಿ ತಮ್ಮ ಪುತ್ರಿಯ ವಿವಾಹದ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ಆದರೂ ಸುಂದರ್ ರಾಜ್ ಈ ಗಾಸಿಪ್ ಸುದ್ದಿಯನ್ನು ಸೀರಿಯಸ್ ಪರಿಗಣಿಸದೆ ಇರುವುದು ವಿಶೇಷ. [ಸ್ಯಾಂಡಲ್ ವುಡ್ ನಲ್ಲಿ ಕೈ ಬಿಡೋರೇ ಜಾಸ್ತಿ]

ತಮ್ಮ ಮಗಳ ಮದುವೆ ಸುದ್ದಿಯನ್ನು ಹಗುರವಾಗಿಯೇ ತೆಗೆದುಕೊಂಡಿರುವ ಅವರು ನಕ್ಕು ಸುಮ್ಮನಾಗಿದ್ದಾರೆ. ಇಷ್ಟಕ್ಕೂ ಈ ಸುದ್ದಿ ಹಬ್ಬಿದ್ದು ಹೇಗೆಂದರೆ. ಈ ಬಾರಿಯ ಕ್ರಿಸ್ ಮಸ್ ಹಬ್ಬಕ್ಕೆ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಶಾಯಿ ದಂಪತಿಗಳ ಮನೆಗೆ ಬಹುತೇಕ ಅತಿಥಿಗಳು ಬಂದಿದ್ದರು.
ಅದರಲ್ಲಿ ಚಿರಂಜೀವಿ ಸರ್ಜಾ ಸಹ ಒಬ್ಬರು ಎನ್ನಲಾಗಿದೆ. ಮನೆ, ಸಮಾರಂಭ ಎಂದ ಮೇಲೆ ಒಬ್ಬರಿಗೊಬ್ಬರು ಮಾತನಾಡದಿರಲು ಸಾಧ್ಯವೇ? ಮೇಘನಾ ಹಾಗೂ ಚಿರು ಅವರನ್ನು ಯಾರೋ ತಪ್ಪಾಗಿ ಅರ್ಥೈಸಿಕೊಂಡು ಈ ರೀತಿ ಸುದ್ದಿ ಹಬ್ಬಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸುಂದರ್ ರಾಜ್ ಅವರು ಈ ಬಾರಿಯ ಕ್ರಿಸ್ ಮಸ್ ಸೆಲೆಬ್ರೇಷನ್ಸ್ ಗಾಗಿ ನಮ್ಮ ಮನೆಗೆ 30-35 ಮಂದಿ ಅತಿಥಿಗಳು ಬಂದಿದ್ದರು. ಅವರಲ್ಲಿ ಚಿರು ಸಹ ಒಬ್ಬ. ಮೊದಲು ತಮ್ಮ ಮಗಳ ಮದುವೆ ಸುದ್ದಿ ಕೇಳಿದಾಗ ನನಗೆ ನಗು ತಡೆದುಕೊಳ್ಳಲಾಗಲಿಲ್ಲ ಎಂದಿದ್ದಾರೆ ಸುಂದರ್ ರಾಜ್.
ಚಿರು ಜೊತೆ ಮದುವೆ ಮಾತುಕತೆ ಎಂತಹದ್ದೂ ನಡೆದಿಲ್ಲ. ಇದು ಯಾರೋ ಸುಖಾಸುಮ್ಮನೆ ಹಬ್ಬಿಸಿರುವ ಸುದ್ದಿ. ತಳಬುಡ ಇಲ್ಲದ ಸುದ್ದಿ. ಮೇಘನಾ ಇನ್ನೂ ನಾಲ್ಕು ವರ್ಷಗಳ ಕಾಲ ಮದುವೆಯಾಗುತ್ತಿಲ್ಲ. ಸದ್ಯಕ್ಕೆ ಅವರ ಗಮನವೆಲ್ಲಾ ತನ್ನ ವೃತ್ತಿಜೀವನದ ಮೇಲೆ ಇದೆ ಎಂದಿದ್ದಾರೆ ಸುಂದರ್ ರಾಜ್. (ಏಜೆನ್ಸೀಸ್)


Click it and Unblock the Notifications











