ಪ್ರೊಡ್ಯೂಸರ್ ಸೂರಪ್ಪ ಬಾಬು ಆತ್ಮಹತ್ಯೆ ಯತ್ನ ನಿಜವೇ?

ಶ್ರೀಮತಿ ಮೀನಾ ತೂಗುದೀಪ ಶ್ರೀನಿವಾಸ್ ಅವರ ಕಾಲಿಗೆ ಬಿದ್ದು ಸೂರಪ್ಪ ಬಾಬು ಕ್ಷಮೆಯಾಚಿಸಬೇಕು ಎಂದು ಅಖಿಲ ಕರ್ನಾಟಕ ದರ್ಶನ್ ಅಭಿಮಾನಿಗಳ ಸಂಘ ಆಗ್ರಹಿಸಿತ್ತು. ಬಳಿಕ ಸೂರಪ್ಪ ಬಾಬು ಅಭಿಮಾನಿಗಳು ಹಾಗೂ ತೂಗುದೀಪ ಕುಟುಂಬದ ಕ್ಷಮೆಯಾಚಿಸಿದ್ದರು.
ಈ ಘಟನೆಗಳ ಬಳಿಕ ಸೂರಪ್ಪ ಖಿನ್ನರಾಗಿದ್ದರು ಎನ್ನಲಾಗಿದೆ. ಅವರು ಸ್ವಲ್ಪ ಅಸ್ವಸ್ಥತೆಗೆ ಒಳಗಾಗಿದ್ದರು. ಇದರಿಂದ ಹೊರಬರಲು ಅವರು ಅಲ್ಪ ಪ್ರಮಾಣದಲ್ಲಿ ನಿದ್ರೆ ಮಾತ್ರೆಗಳನ್ನು ಸೇವಿಸಿ ವಿಶ್ರಾಂತಿ ಪಡೆದಿದ್ದಾರೆ. ಮಂಗಳವಾರ (ಜು.10) ವೈಯಾಲಿಕಾವಲ್ ನಲ್ಲಿರುವ ತಮ್ಮ ಕಚೇರಿಗೆ ಬಂದಾಗ ನಿತ್ರಾಣಗೊಂಡು ಕುಸಿದುಬಿದ್ದಿದ್ದಾರೆ.
ತಕ್ಷಣ ಅವರನ್ನು ಚಿಕಿತ್ಸೆಗಾಗಿ ಮಲ್ಲೇಶ್ವರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಈಗವರ ಆರೋಗ್ಯ ಸುಧಾರಿಸಿದ್ದು ಚೇತರಿಸಿಕೊಳ್ಳುತ್ತಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ. ಈ ಘಟನೆಯ ಬಳಿಕ ಸೂರಪ್ಪ ಬಾಬು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿ ಹಬ್ಬಿತ್ತು.
ಆದರೆ ಸೂರಪ್ಪ ಬಾಬು ಅವರ ಕುಟುಂಬ ವರ್ಗ 'ಆತ್ಮಹತ್ಯೆ' ಸುದ್ದಿಯನ್ನು ಎಂಬ ಸಾರಾಸಗಟಾಗಿ ತಳ್ಳಿಹಾಕಿದೆ. ಅವರು ಸದ್ಯಕ್ಕೆ ವಿಶ್ರಾಂತಿ ಪಡೆಯುತ್ತಿದ್ದು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಫಿಲಂ ಚೇಂಬರ್ ಅಧ್ಯಕ್ಷ ಕೆವಿ ಚಂದ್ರಶೇಖರ್, ಸಾರಾ ಗೋವಿಂದು, ಥಾಮಸ್ ಡಿಸೋಜ ಅವರು ಸೂರಪ್ಪ ಬಾಬು ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಅವರ ಆರೋಗ್ಯವನ್ನು ವಿಚಾರಿಸಿದರು. ಸೂರಪ್ಪ ಬಾಬು ಇದುವರೆಗೂ 22 ಚಿತ್ರಗಳ ನಿರ್ಮಿಸಿದ್ದಾರೆ.
ಘಟನೆಯ ಹಿನ್ನೆಲೆ: ಮದ್ಯದ ಅಮಲಿನಲ್ಲಿ ಸೂರಪ್ಪ ಬಾಬು ಹೆಸರಾಂತ ಕಲಾವಿದ ದಿವಂಗತ ತೂಗುದೀಪ ಶ್ರೀನಿವಾಸ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋ ಯೂಟ್ಯೂಬ್ ನಲ್ಲಿ ಬಿತ್ತರಗೊಂಡಿತ್ತು. ಇದರಿಂದ ದರ್ಶನ್ ಅವರ ಅಭಿಮಾನಿಗಳು ಉದ್ರಿಕ್ತರಾಗಿದ್ದರು.
ಮೀನಾ ತೂಗುದೀಪ ಅವರ ಕಾಲಿಗೆ ಬಿದ್ದು ಸೂರಪ್ಪ ಬಾಬು ಕ್ಷಮೆಯಾಚಿಸಬೇಕು ಎಂದು ದರ್ಶನ್ ಅಭಿಮಾನಿಗಳು ಆಗ್ರಹಿಸಿದ್ದರು. ಫಿಲಂ ಚೇಂಬರ್ ನಲ್ಲಿ ನಡೆದ ಸಂಧಾನ ಸಭೆಯಲ್ಲಿ ಸೂರಪ್ಪ ಬಾಬು ಮೀನಾ ತೂಗುದೀಪ ಅವರಲ್ಲಿ ಕ್ಷಮೆಯಾಚಿಸಿದ್ದರು. (ಏಜೆನ್ಸೀಸ್)


Click it and Unblock the Notifications











